Home / ಕವನ / ನೀಳ್ಗವಿತೆ / ಹುಚ್ಚ ಮುಲ್ಲ

ಹುಚ್ಚ ಮುಲ್ಲ

ಮುಲ್ಲನ ಗಡ್ಡ

ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…

ಮುಲ್ಲನ ಗಡ್ಡ
ಹಿಡಿದಷ್ಟೂ ದೊಡ್ಡ
ಬೆಳೆಯಿತು ಉದ್ದ
ಬೆಳೆಯಿತು ಅಡ್ಡ

ಗುಡ್ಡವ ಹತ್ತಿತು
ಗುಡ್ಡವ ಇಳಿಯಿತು
ಊರ ಕೋಟೆಗೆ
ಲಗ್ಗೆ ಹಾಕಿತು

ಸಣ್ಣ ಕಿರಣಗಳ
ಬಣ್ಣ ಹೆಕ್ಕಿತು
ಇಬ್ಬನಿ ಕುಡಿದೇ
ಬಹಳ ಸೊಕ್ಕಿತು

ಮನೆ ಮನೆ ಕದವ
ತಟ್ಟಿ ನೋಡಿತು
ಕಿಟಕಿ ಹತ್ತಿ
ಒಳಗೂ ಇಣುಕಿತು

ಹಾವಂತಾಯಿತು
ಹಾವಸೆಯಾಯಿತು
ನದೀ ತೀರದ
ಜೊಂಡೂ ಆಯಿತು

ನೀವಿದ ಕೈಗೆ
ಸಿಗಲೇ ಇಲ್ಲ

ಅರೆ ಯಾರ್‌ ! ಅರೆ ಯಾರ್‌ !
ಎಂದನು ಮುಲ್ಲ

ಗಡ್ಡ ಹೇಳಿತು
ನಾನೇ ಮುಲ್ಲ

ನನ್ನ ಕೇಳಲು
ನೀ ಯಾರೆಂದು !

ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…

ಹುಕ್ಕಾ

ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…

ಓಡುವ ಮೋಡವ ಅಲ್ಲೇ ನಿಲ್ಲಿಸು !
ಅದರ ನೆರಳಲಿ ಕಂಬಳಿ ಹಾಸು
ನಾಕು ಲೋಟಾ ಶರಬತು ಬೆರೆಸು
ಹುಕ್ಕ ಸೇದಲು ಮುಲ್ಲನ ಕರೆಸು…

ಹೆದ್ದಾರಿ ಮೇಲೊಂದು ಕಾಫಿಲ ಸಾಗಿ
ಎಡಬಲ ದ್ರಾಕ್ಷಿಯ ಗೊಂಚಲು ತೂಗಿ
ಎಲ್ಲಿಂದ ಬಂತೋ ಇಷ್ಟೊಂದು ಕಾಗಿ
ತಿಂದರು ಮುಗಿಯದೆ ತೇಗಿ ತೇಗಿ….

ಆ ಪಲ್ಲಕಿಯೊಳಗೊಬ್ಬ ರಾಜಕುಮಾರಿ
ಕಾಣಸದಿದ್ದರು ಆಕಿಯ ಮಾರಿ
ರೇಶಿಮೆ ನೂಲಿನ ಪರದೆಯ ಮೀರಿ
ಚೆಲ್ಲುವ ಚೆಲುವೆಂಬುದು ಖಾತರಿ

ಆ ಚೆಲುವಿನ ದಾರಿಗೆ ಅಡ್ಡೆಯ ಕಟ್ಟಿ
ಆ ಅಡ್ಡೆಯ ಕೆಳಗೊಂದು ಹೂಗಿಡ ಹುಟ್ಟಿ
ಆ ಹೂಗಿಡ ಸ್ವರ್ಗದ ಬಾಗಿಲ ಮುಟ್ಟಿ
ಅಲ್ಲಿಂದದಕೆ ಪರಿಮಳ ತಟ್ಟಿ…

ಆ ಪರಿಮಳದಿಂದಲೆ ಅತ್ತರು ಮಾಡಿ
ಆ ಅತ್ತರು ನಮ್ಮನು ದಿನವೂ ಕಾಡಿ
ಹಿಡಿದರು ಸಿಗದ ಬಲು ದೊಡ್ಡ ದಾಡಿ
ಹಾಕಿತು ಹೇಗಿಂಥಾ ಮೋಡಿ…

ಆ ದಾಡಿಗೆ ಹಚ್ಚಲು ಸಂಜೆಯ ಬಣ್ಣ
ಜನವೆಲ್ಲಾ ಬಿಟ್ಟಿತು ಕಣ್ಣ
ಆಹಾ ! ಅಹಹಾ ! ಎನ್ನುವರಣ್ಣ
ಹಿಡಕೊಂಡು ಬರುವರು ಕೈತುಂಬ ಸುಣ್ಣ…

ಆ ಸುಣ್ಣವ ಕೆಲವರ ಕಣ್ಣಿಗೆ ಹಚ್ಚು
ಇನ್ನುಳಿದವರಿಗೆ ಬೆಣ್ಣೆಯೆ ಮೆಚ್ಚು
ಒಬ್ಬೊಬ್ಬರಿಗೆ ಒಂದೊಂದು ಹುಚ್ಚು
ಹೊಟ್ಟೆಯಲಿರಲಿ ಹೊಟ್ಟೆ ಕಿಚ್ಚು…

ಆ ಕಿಚ್ಚನು ಹುಕ್ಕದ ಚಿಲುಮೆಗೆ ಹಾಕಿ
ಸೇದಿದ ಜನವೇ ಬಲ್ಲುದು ಶೋಕಿ
ಹಾಗಿದ್ರೆ ತಡವೇಕೆ ಬರಲಿ ಮತ್ತಾಕಿ
ಮತ್ತಾಕಿ ಮುತ್ತಾಕಿ ಹವಳದ ತುಟಿಯಾಕಿ….

ಆ ಹವಳದ ಮೇಲೂಬ್ಬ ಗಿಣಿರಾಯ
ಎಲ್ಲಿಂದ ಬಂದನೊ ಮಾರಾಯ
ಹಣ್ಣಿಲ್ಲ ಹೆಣ್ಣಿಲ್ಲ ಮಂಗ ಮಾಯ
ಮುಟ್ಟಿದರೆ ನೀ ಕೆಟ್ಟು ಹೋದಿಯಾ…

ಕೆಟ್ಟರೆ ಕೆಡಲಿ ಬಿಟ್ಟರೆ ಬಿಡಲಿ
ಅಟ್ಟದ ಮೇಲೊಂದು ಚಾಪೆ ಹಾಸಿರಲಿ
ಆಹಾ ! ನಿಮ್ಮ ನಮಾಜಿನ ವೇಳೆಯಲ್ಲಿ
ನಮ್ಮ ನಮಾಜಿಗು ಸ್ಥಳವಿರಲಿ !

ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…

ಮುಲ್ಲನ ಲಾಂದ್ರ

ಹುಚ್ಚ ಮುಲ್ಲನ ಹೊಗಳೋಣ
ಉಳಿದವರೆಲ್ಲರ…

ಕಣ್‌ ಕಾಣಲ್ಲ
ಕಿವಿ ಕೇಳಲ್ಲ
ಆದರು ಮುಲ್ಲ
ಬಿಡೋನಲ್ಲ

ಅಲ್ಲಾ ಕರೆದರೆ
ಒಲ್ಲೇ ಎಂದ
ಬಾ ಎಂದರೆ
ಬಲ್ಲೇ ಎಂದ

ಹುಚ್ಚ ಮುಲ್ಲ
ನಮಾಜಿಗೆ ಕುಳಿತರೆ
ಭೂಮಿ ಗರ ಗರ
ತಿರುಗುತ ಇತ್ತು
ದೂರದ ಚಂದ್ರ
ನೋಡುತ ಇತ್ತು
ಲಾಂದ್ರ ಸುಮ್ಮನೆ
ಉರಿಯುತ ಇತ್ತು
ಎಲಾ ! ಎಲಾ !
ಎಂದನು ಮುಲ್ಲ
ಭೂಮಿ ತಿರುಗುವುದ
ನಿಲ್ಲಿಸಬೇಕು
ಚಂದ್ರನ ನಗೆಯ
ಕೊಲ್ಲಿಸಬೇಕು

ಎಂದವನೇ
ಎದ್ದೇ ಬಿಟ್ಟ
ಒಂದು ಕೈಯಲಿ
ಭೂಮಿಯ ತಡೆದ
ಇನ್ನೊಂದರಲಿ
ಚಂದ್ರನ ಹಿಡಿದ

ಹುಚ್ಚ ಮುಲ್ಲ
ನೆಲ ಬಿಟ್ಟೆದ್ದ
ಅವ ಮುಗಿಲಲಿ ಇದ್ದ !

ದಾರಿಯ ಉದ್ದಕು
ಕಾಮನ ಬಿಲ್ಲು
ಅಡಗಿತ್ತೆಲ್ಲಾ
ಮಂದಿಯ ಸೊಲ್ಲು

ಹಿಂದೆಂದೂ
ನಡೆಯದ ಹಾದಿ
ಇಂದಾದರು
ಯಾತಕೆ ಹೋದಿ

ಇಟ್ಟ ಹೆಜ್ಜೆ ಬಲು
ಹಗುರಾಗಿತ್ತು
ಹಿಂಜಿದ ಹತ್ತಿಗೆ
ಬಿದ್ದಂತಿತ್ತು
ನಕ್ಕನು ಮುಲ್ಲ
ಈ ತರ ಎಂದೂ
ನಕ್ಕದಿಲ್ಲ !
ನಗಬೇಕೆಂದೂ
ಅನಿಸಿದ್ದಿಲ್ಲ !

ಏನಿತ್ತಲ್ಲಿ ? ಏನಿರಲಿಲ್ಲ ?
ಬೆಳಕಿಗೆ ಮಾತೂ
ಬರುತಿತ್ತಲ್ಲಿ !

ಯಾತಕೆ ಯಾತಕೆ
ಎಂದನು ಮುಲ್ಲಾ
ಮುಂದಕೆ ಮುಂದಕೆ
ಎಂದನು ಅಲ್ಲಾ

ಮರೆಯಾಯಿತು ಆ-
ಕಾಶದ ಚಂದ್ರ
ಹಿಂದಕೆ ಉಳಿಯಿತು
ಉರಿಯುವ ಲಾಂದ್ರ

ಉರಿಯಿತು ಕೈ-
ಲಾಗುವ ವರೆಗೆ
ಮುಲ್ಲನ ಎಣ್ಣೆ
ಮುಗಿಯುವ ವರೆ !

ಅಂಥ ಮುಲ್ಲನ ಹೊಗಳೋಣ
ಉಳಿದವರೆಲ್ಲರ…
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...