Home / ಕವನ / ಕವಿತೆ / ಎದೆಯಾಳದುಲುಹು

ಎದೆಯಾಳದುಲುಹು

ಋಷಿಗಳ ಮನದಾಗೆ ಓಂಕಾರ ಹರದಂಗೆ
ಬೆಸಲಾಗಿ ನಡೆದಾವೆ ತುಂತುಂಬಿ ಮೋಡ
ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ
ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ ||

ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ
ಎಳೆನಗೆ ಚಿಗತಂಗ ನಗತಾದ ಹುಲ್ಲು
ಹಗಲೆಲ್ಲ ಗಾಳೆಪ್ಪ ಗೋಳಿಸಿ ಹೋಗ್ಯಾನೆ
ಮೌನಗೌರಿ ಆಗ್ಯಾದೆ ಸೃಷ್ಟಿ ಸೊಲ್ಲು || ೨ ||

ಏನೇನೂ ಭಾವ ಹರದಾಡತಾವೆ
ನಾನೇನ ಬಲ್ಲೆನಮ್ಮ
ಧ್ಯಾನಾದಿ ನೀನು ಕುಳಿತಾಗ ನಾನು
ನನ್ನನ್ನೆ ಮರೆವೆನಮ್ಮಾ || ೩ ||

ಇದು ಬರೀ ಶಾಂತಿ ಇಲ್ಲಿಲ್ಲ ಗುಲ್ಲು
ಸೊಲ್ಲೆಲ್ಲ ಮೌನದಲ್ಲೆ
ಕದಡಿರುವ ನೀರು ತಿಳಿಯಾಗಿ ನಿಂತು
ಆಕಾಶ ಹೃದಯದಲ್ಲೆ || ೪ ||

ನಿನ್ನಿಂದ ದೂರ ಬಲುದೂರ ಹೋದೆ
ಪಡಬಾರದಂಥ ಕಷ್ಟ
ತಾಯನ್ನು ತೊರೆದು ಗಿಳಿಮರಿಯು ಬೀಳೆ
ನಾಯಿನರಿಗದುವೆ ಇಷ್ಟ || ೫ ||

ಬಹುದಿನಕೆ ನಿನ್ನ ಮೊಗನೋಡುವಂಥ
ಸಿಗಲಾರದಂಥ ಸೊಗವು
ಎಂದಾದರೊಮ್ಮೆ ಸಿಕ್ಕಾಗ ಎದೆಯು
ಅಳುವೆಲ್ಲ ಹರಿವ ನಗುವು || ೬ ||

ಒಂಟಿತನ ಸಾಕು ಅದು ನರಕ ಸಮವು
ನಾನಾದೆ ಕೊಳೆತ ಹುಳುವು
ನೀನೇಕೆ ನನ್ನ ಕೈಹಿಡಿಯದಂತೆ
ದೂಡುತಿಹೆ ತುಂಬಲಳುವು || ೭ ||

ನಿನ್ನನ್ನು ಬಿಟ್ಟು ನಾ ಬರಿಯ ನೆರಳು
ಒಳಹೊರಗೆ ಕಪ್ಪು ಕಪ್ಪೆ
ಏನಿದ್ದರೇನು ಪ್ರಾಣವೇ ಇರದೆ
ಕಸವಾಗಿ ಅಳಿವ ಸೊಪ್ಪೆ || ೮ ||

ಬಿಡಬೇಡ ನನ್ನ ನಾನಿನ್ನ ಹಸುವು
ಪಶುವಾಗದಂತೆ ಸಲಹು
ಏರಿಳುವುಗಳಲಿ ತೊಳಲುತ್ತೆ ಸೋತೆ
ಇದೆ ಎದೆಯ ಆಳದುಲುಹು || ೯ ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...