Home / ಲೇಖನ / ಇತರೆ / ಬರಹವೆಂಬ ಮುತ್ತು

ಬರಹವೆಂಬ ಮುತ್ತು

ಪ್ರಿಯ ಸಖಿ,
ವ್ಯವಹಾರದ ಈ ಜಗತ್ತಿನಲ್ಲಿ ಸಾಹಿತ್ಯವೂ ವ್ಯಾಪಾರವಾಗುತ್ತಿರುವುದನ್ನು ನೋಡುತ್ತಿದ್ದೇವೆ. ತಾನು ಬರೆದ ಸಾಹಿತ್ಯದಿಂದ ತನಗೆ ಸಿಗುವ ಆತ್ಮತೃಪ್ತಿಗಿಂತ, ತನಗೆ ಸಿಗುವ ಹಣ, ಕೀರ್ತಿಯೇ ಮಾನದಂಡವೆನ್ನುವ ಸಾಹಿತಿಗಳನೇಕರು ಇದ್ದಾರೆ. ಇಂತಹವರನ್ನು ಕಂಡಾಗ ಧುತ್ತನೆ ನನ್ನನ್ನೊಂದು ಗೊಂದಲ ಕಾಡಲಾರಂಭಿಸುತ್ತದೆ. ಬರವಣಿಗೆ ಒಂದು ಹೊರಹಾಕುವ ತುರ್ತೋ ಅಥವಾ ಮಾರಾಟಕ್ಕಿಡುವ ಕಲೆಯೋ?

ಭಾವೋತ್ಕರ್ಷದ ತುರ್ತನ್ನು ಹೊರಹಾಕಲೊಂದು ಮಾರ್ಗ ಬರವಣಿಗೆ. ಆದರೆ ಆ ಪ್ರಾಮಾಣಿಕ ಪರಿಪಕ್ವತೆಗಾಗಿ ಕಾಯುವವರೆಷ್ಟು ಮಂದಿ? ಹಸಿಬಿಸಿ ಬೆಂದ ಭಾವಗಳನ್ನೇ ಹಾಳೆಯಲ್ಲಿ ಮೂಡಿಸಿ ಬರೆಯಲೇಬೇಕು ಬರೆದು ಕೀರ್ತಿ, ಹೆಸರು ಸಂಪಾದಿಸಬೇಕು. ಹಣ ಮಾಡಬೇಕು ಎಂಬ ವ್ಯಾವಹಾರಿಕ ಕಾರಣದಿಂದಲೇ ಬರೆಯುವವರು ಹಲವು ಮಂದಿ. ಎಲ್ಲರಿಗೂ ಬರೆವ ಕಲೆ ಸಿದ್ಧಿಸುವುದಿಲ್ಲವಾದರೂ ಸ್ಪಲ್ಪಮಟ್ಟಿನ ಪ್ರಯತ್ನದಿಂದ ಏನೋ ಒಂದು ಬರೆಯಬಹುದು. ‘ಪ್ರತಿಭೆ ಇದ್ದವರು, ಯಾವುದಕ್ಕೂ ಕಾಯಬೇಕಿಲ್ಲ ಬರೆದು ಬಿಸಾಡಿದರೆ ಸಾಕು’ ಎಂಬ ವಿತಂಡವಾದ ಬೇರೆ. ಇಂತಹ ಕಳಪೆ ಸಾಹಿತ್ಯದ ನಡುವೆಯೂ ಬಲವಂತಕ್ಕೆ ಹೊರಹೊಮ್ಮಿಸದ, ತಂತಾನೇ ಹೊರಹೊಮ್ಮಿದ ಶುದ್ಧ ಸಾಹಿತ್ಯ ‘ಸೃಜನಶೀಲ ಬರಹಗಳು’ ಮೂಡುತ್ತಲೇ ಇರುತ್ತವೆ. ಇವು ಕಳಪೆ ಸಾಹಿತ್ಯದಂತೆ ಕ್ಷಣಕಾಲವಷ್ಟೇ ಇದ್ದು ಮರೆಯಾಗದೇ ವರ್ಷಗಳು ಕಳೆದರೂ ನೆನಪಿನಲ್ಲಿ ಉಳಿಯುತ್ತವೆ. ಹಾಗೆಂದೇ ಶೇಕ್ಸ್‍ಪಿಯರ್, ಎಲಿಯಟ್, ಪಂಪ, ಕುವೆಂಪು, ಬೇಂದ್ರೆ, ಮುಂತಾದ ಗಟ್ಟಿ ಸಾಹಿತಿಗಳು ತಾವಳಿದಿದ್ದರೂ ತಮ್ಮ ಸಾಹಿತ್ಯದಿಂದ ನಮ್ಮಲ್ಲಿ ಹಸುರಾಗಿಯೇ ಇದ್ದಾರೆ.

ಹಾಗಿದ್ದರೆ ನಿಜವಾದ ಸಾಹಿತ್ಯದ ಉದಯ ಹೇಗಾಗುತ್ತದೆ ಎಂಬುದನ್ನು ಕವಿ ಜಿ. ಎಸ್. ಶಿವರುದ್ರಪ್ಪನವರು ತಮ್ಮ ‘ಕಾವ್ಯೋದಯ’ ಎಂಬ ಕವನದ ಕೊನೆಯ ಸಾಲುಗಳಲ್ಲಿ ಹೀಗೆ ಹೇಳಿದ್ದಾರೆ. ಇಲ್ಲವರು ಕಾವ್ಯವನ್ನು ಕುರಿತು ಹೇಳಿದ್ದರೂ ಎಲ್ಲ ಬರಹಗಳಿಗೂ ಈ ಮಾತು ಅನ್ವಯಿಸಬಹುದು.

ಕೊತ ಕೊತ ಕುದಿವ ಹುಡುಕಾಟಗಳ ನಡುವೆ
ಮಾತಿರದ ಮೌನದೊಳ
ಗಸ್ತವ್ಯಸ್ತವಾಗಿ ತೊಳಲಿದ್ದ ಅಶರೀರಭಾವ
ನಿಧಾನಕ್ಕೆ ಪಾಕವಾಗುತ್ತ
ಶಬ್ದಾರ್ಥ ಸಂಪುಟದೊಳಗೆ ಮೊಳೆವ ಮುತ್ತಾಗಿ
ಮಿನುಗುತಿದೆಯಲ್ಲ

ಹೀಗೆ ಶುದ್ಧ ಭಾವಗಳನ್ನು ಅಭಿವ್ಯಕ್ತಿಸಿ, ಗಟ್ಟಿಗೊಳಿಸಿ, ಹರಳಾಗಿಸಿ ಒಂದು ಮುತ್ತು ಮಾಡಿದರೆ ಸಾಕು. ಅದಲ್ಲದೇ ಹಣ, ಕೀರ್ತಿ, ಪ್ರತಿಷ್ಠೆಗಾಗಿ ಮತ್ತೇನೋ ಕ್ಷುಲ್ಲಕ ಕಾರಣಕ್ಕಾಗಿ ಬಲವಂತಕ್ಕೆ ಬರೆದ ಬರಹಕ್ಕೆ ಏನು ಬೆಲೆ? ಹೇಳುವೆಯಾ ಸಖಿ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...