Home / ಕವನ / ಕವಿತೆ / ಮಹಾನಗರ ರಸ್ತೆ – ಮರುಚೇತನ

ಮಹಾನಗರ ರಸ್ತೆ – ಮರುಚೇತನ

ಮಹಾನಗರದ ಮುಖ್ಯ ರಸ್ತೆಯಾಗಿದ್ದು
ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ
ತಲೆ ಎತ್ತುವ ಧನ್ಯತೆ ಕಳೆದಿತ್ತು.

ಬಾಯಾರಿದ ಭೂ ಒಡಲು ಹಸಿರಾಗಿಸಲು
ಧಾರಾಕಾರ ವರುಣನ ವಿಜಯೋತ್ಸವ
ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ

ಮಾನ ಬಿಟ್ಟವರು ನನ್ನ ಮಾನ ಮುಚ್ಚಲು
ಬರಿ ಉಸುಕು-ಮಣ್ಣು ಚೆಲ್ಲುತ ಗುಳಂವಾಗಿಸುವರು
ಆಡಳಿತ-ಅಧಿಕಾರಿಗಳು ನೂರು ಸಾವಿರ ಲಕ್ಷ ಲಕ್ಷ

ಸ್ವಾಭಿಮಾನ ಮರೆತ ನಗರವಾಸಿಗಳು
ನನ್ನ ಮೈಮೇಲೆ ನಡೆದಾಡುವಾಗೊಮ್ಮೆ
ಏಳುತ್ತ-ಬೀಳುತ ಹಾಕುವರು ಶಾಪ-ತಾಪ

ತಮಗಾದ ಅನ್ಯಾಯ ಪ್ರತಿಭಟಿಸದಿರುವ
ನಗರವಾಸಿ ನಾಗರಿಕ ವರ್ಗದ
ಭವಿಷ್ಯ ಮೆಲುಕಾಡಿಸುತ್ತಾ ಮೈಚಾಚಿ ಮಲಗಿರುವೆ

ಸ್ವಾತಂತ್ರ್‍ಯ ಸಿಕ್ಕು ಅರ್ಧಶತಕವಾದರೂ
ನಡೆದಿರುವವು ನನ್ನಿಹ ಮೈಮೇಲೆ
ಅತ್ಯಾಚಾರ ಭಾಷೆ-ಕೋಮು ದ್ವೇಷದ ಇರಿತಗಳು

ಕಾರ್ಮಿಕರ ಮೌನ ಹೋರಾಟ – ಮುಷ್ಕರ
ಅಬಲೆಯರ ಆರ್ತನಾದ ಅಪಘಾತ ಗಲಭೆಗಳ
ರಕ್ತದ ಮಡುವಿನಲ್ಲಿ ನರಳಾಟ ಕೇಳುತ ಮೌನವಾಗಿರುವೆ.

ಹುಸಿ ಭರವಸೆ ನೊಂದವರ ನಿಟ್ಟುಸಿರು
ಕೇಳುತ ನೋಡುತ ಬೇಸತ್ತು ಮಲಗಿದ್ದೆ
ಪುಳಕಿತಗೊಂಡೆ ಈ ದಿನ ವೀರಯೋಧರ ಶವಯಾತ್ರೆ ತಿಳಿದು

ದಶ ದಶಕಗಳಿಂದ ಬರಿ ಡಂಬಾಚಾರದ
ನಯ – ವಂಚಕರಿಂದ ತುಳಿಸಿಕೊಂಡು ಸಾಕಾಗಿದ್ದ
ಮೈಮನ ಕಾತರಿಸುತ್ತಿದೆ ವೀರಯೋಧನ ಸ್ಪರ್ಶಕ್ಕಾಗಿ

ಮಾತೃ-ಭೂಮಿಯ ಗಡಿ-ಶಿಖರಗಳಲಿ
ಮಡಿದ-ಮಕ್ಕಳು ಮನೆ ಎನ್ನದೆ
ರಾಷ್ಟ್ರಪ್ರೇಮದ ದೃಢತೆಯಲಿ ಶತ್ರುಗಳ ಸದ್ದಡಗಿಸಿ
ಜೀವ ನೀಡಿದ ವೀರ ಆ ಧೀರ ಸೈನಿಕರು

ನಗರ-ನಾಗರಿಕ ಸನ್ಮಾನ-ಹೆಮ್ಮೆಯ ದುಃಖದಿ ಕಣ್ಣೀರು
ಶವಪೆಟ್ಟಿಗೆಯಡಿ ವೀರ ಜವಾನರು
ಕೊನೆ ಮೆರವಣಿಗೆ ಮೈಮೇಲೆ ಸಾಗುವ ಕ್ಷಣ
ರೋಮಾಂಚನದಿ ದೇಹದ ಕಣ ಕಣವೂ ಧನ್ಯ ಧನ್ಯ

ಹೊತ್ತವರು-ಹೆತ್ತವರೆಲ್ಲಾ ಅತ್ತರು ಹೆಮ್ಮೆಯಲಿ
ಸಾಗಿತ್ತು ರಸ್ತೆಯುದ್ದಕ್ಕೂ ಅಂತಿಮ ಶವ ಯಾತ್ರೆ-ಜಾತ್ರೆ
`ಜವಾನ-ಅಮರ ರಹೇ’ ಮುಗಿಲು ಮುಟ್ಟಿದ ಘೋಷಣೆ

ತಾಯಿನಾಡಿಗಾಗಿ ಮಡಿದ ವೀರ ಜವಾನರ ಸ್ಪರ್ಶ
ನನ್ನ ಅಸ್ತಿತ್ವದ ಸಾರ್ಥಕತೆಗೆ ಜೀವ ತುಂಬಿತು
ಮರು ಚೇತನದಿ ಈ ತನುವು ಧನ್ಯತೆ ಪಡೆದಿತ್ತು.

*****

 

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...