Home / ಕವನ / ಕವಿತೆ / ಗುರು ನಮನ

ಗುರು ನಮನ

ಗುರುವೆ ನಮೋ ಶ್ರೀ ಗುರುವೆ ನಮೋ
ಸದ್ಗುರುವೆ ನಮೋ ವರಗುರುವೆ ನಮೋ || ಪ ||

ಗುರುವೇ ಹರ ನಮೋ ಗುರುವೇ ಹರಿ ನಮೋ
ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.||

ತಾಯಿಯ ಒಲುಮೆ ತಂದೆಯ ಬಲುಮೆ
ಬಂಧು ಬಳಗ ಬಲ ನೀನೆ ಗುರು
ಲೋಕಕ್ಕೆಲ್ಲಾ ಹಿರಿಯನು ನೀನು
ದೇವತೆಗಳಿಗೂ ನೀನೆ ಗುರು || ೧ ||

ಆದಿ ಕಾಲದಲಿ ವೇದಗಳುಸುರಿದೆ
ಪ್ರಕೃತಿಯಲ್ಲಿ ಪರಮಾತ್ಮನ ಕಂಡೆ
ಉಪನಿಷತ್ತುಗಳ ಮರ್ಮವ ತಿಳಿಸಿದೆ
ಆತ್ಮ ವಿದ್ಯೆಯ ಸುಧೆಯೆರೆದೆ || ೨ ||

ಅಕ್ಷರ ಅಕ್ಷರ ಕಲಿಸುತ ಆಕ್ಷರ
ಬ್ರಹ್ಮದ ಶಿಖರಕೆ ಕರೆದೊಯ್ದೆ
ನಶ್ಚರ ಜಗದಲಿ ಶಾಶ್ವತದಿರವನು
ಈಶ್ವರತ್ವವನು ತೋರಿಸಿದೆ || ೩ ||

ಜೀವನ ಬೆಲೆಯನು ತಿಳಿಸಿದ ಗುರುವೇ
ಜೀವನ ಕಲೆಯನು ಕಲಿಸಿದೆ ನೀ
ಪಶುವಿನಿಂದ ಪಶುಪತಿಯ ಹಿರಿಮೆಯನು
ನರಕದಿ ನಾಕವ ತೋರಿದೆ ನೀ || ೪ ||

ನಡೆಯನು ತಿದ್ದಿದೆ ನುಡಿಯನು ತೀಡಿದೆ
ನಡೆನುಡಿ ಬೆರೆಯಲು ಕೈಲಾಸ
ಇಹದಲಿ ಜಯವನು ಪರದ ವಿಜಯವನು
ತೋರಿದೆ ಜೀವನದುಲ್ಲಾಸ || ೫ ||

ಶಾಸ್ತ್ರಪುರಾಣಗಳಾಗಮ ವಿಧಿಗಳು
ಯುದ್ಧ ವೈದ್ಯತಂತ್ರಾದಿಗಳು
ಅರವತ್ ನಾಲಕು ವಿದ್ಯೆಗಳೆಲ್ಲಾ
ನೀನಿತ್ತಿರುವ ದಾನಗಳು || ೬ ||

ಸುಂದರ ಗಿಡಗಳ ಹೂ ತೋಟದೊಲು
ವಿದ್ಯಾರ್ಥಿಗಳನು ಬೆಳೆಯಿಸುವೆ
ಕಲ್ಲಲಿ ಶಿಲ್ಪವ ರೂಪುಗೊಳಿಸುವೊಲು
ಮಹಾಮಾನವರ ಮೂರ್ತಿಸುವೆ || ೭ ||

ನಾಡು ನುಡಿಗಳಭಿಮಾನವ ತುಂಬುತ
ದೇಶಭಕ್ತರನು ನಿರ್ಮಿಸುವೆ
ಶ್ರದ್ದೆ ಶಕ್ತಿಗಳ ನ್ಯಾಯ ನೀತಿಗಳ
ಜನನಾಯಕರನು ರೂಪಿಸುವೆ || ೮ ||

ಜಾತಿ ಭೇದಗಳು ನಿನಗಿಲ್ಲಾ ಮತ
ಪಂಥಮೇರೆಗಳು ನಿನಗಿಲ್ಲ
ಸರ್ವರಲಿ ಸಮ ದೃಷ್ಟಿ ನಿನ್ನದು
ಮೇಲು ಕೀಳುಗಳು ನಿನಗಿಲ್ಲ || ೯ ||

ನ್ಯಾಯ ನಿಷ್ಟುರನು ಸತ್ಯ ಸಾಧಕನು
ಖಂಡಿತವಾದಿಯು ನೀನು ಗುರು
ಧೀರರಲ್ಲಿ ಅತಿಧೀರ ಮಹಾತ್ಮನೆ
ಮರಣವ ಮೀರಿದ ಮಹಾಗುರು || ೧೦ ||

ನೀನಿಲ್ಲದೆ ಜಗ ಪಶುರಕ್ಕಸರಿಂ
ಅಂಧಕಾರದಲಿ ಮುಳುಗುವುದೋ
ನಿನ್ನಿಂದಲೇ ಈ ಲೋಕದ ಸಂಸ್ಕೃತಿ
ಕಲೆ ಸಾಹಿತ್ಯವು ಬೆಳಗುವುದೋ || ೧೧ ||

ಕತ್ತಲೆಯಿಂದ ಬೆಳಕಿನ ಕಡೆಗೆ
ಅಸತ್ಯದಿಂದ ಸತ್ಯದ ಎಡೆಗೆ
ಮರ್ತ್ಯದಿಂದ ಅಮೃತತ್ವದ ಗುರಿಗೆ
ನಮ್ಮನು ಒಯ್ಯುವ ಗುರುವೆ ನಮೋ || ೧೨ ||
*****
(ಶಿಕ್ಷಕರ ದಿನಾಚರಣೆಯಲ್ಲಿ ಸಾದರಪಡಿಸಿದ ಕವನ)

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...