Home / ಕವನ / ಕವಿತೆ / ನುತಿಸುವೆನು ಬಸವ

ನುತಿಸುವೆನು ಬಸವ

ಬಸವಣ್ಣ ಬಸವಯ್ಯ ಬಸವೇಶ ಶರಣು
ನಿನ್ನ ನುತಿಸುವ ಭಾಗ್ಯ ಸವಿಹಾಲು ಜೇನು || ಪ ||

ಶರಣರು ಕವಿಗಳು ಹೊಗಳಿದರು ನಿನ್ನ
ಅವರ ಜಾಡನೆ ಹಿಡಿದು ಹಾಡುವೆನು ಚೆನ್ನ || ಅ.ಪ. ||

ಕಲ್ಯಾಣ ಪಣತೆಗೆ ಭಕ್ತಿ ತ್ಯೆಲವೆರೆದು
ದೀಪ ಹೊತ್ತಿಸಿ ನೀನು ಬೆಳಕಾಗಲು
ನೂರಾರು ಹಣತೆಗಳು ಹೊತ್ತಿಕೊಂಡವು ಶರಣ
ಕಾಂತಿ ಪುಂಜದ ಹೊನಲು ಇರುಳು ಹಗಳು || ೧ ||

ಭಾವದ ಬುಗ್ಗೆಗೆ ಭಾಷಯು ಚಿಮ್ಮಲು
ನುಡಿಯೆಲ್ಲ ವಚನದ ಕಾವ್ಯಸುಗ್ಗಿ
ಸುವಿಚಾರ ಮೊಗ್ಗು ಆಚಾರದ ಹೂವರಳಿ
ಕನ್ನಡ ವನದನುಭಾವ ಹಿಗ್ಗಿ || ೨ ||

ಶಿವನ ಪ್ರೀತಿಯ ಕಂದ ಶಿವಕೀರ್ತಿಯಾನಂದ
ಶಿವ ಭಕ್ತಿ ಭಂಡಾರಿ ಶಿವಲಿಂಗ ಬಸವ
ಪ್ರಮಥರ ಜೀವನೆ ಪೂರ್ವಾಚಾರ್ಯನೆ
ವೀರಶೈವದ ಆದಿ ಗುರುವೆ ಬಸವ || ೩ ||

ನಂಬಿದವರಿಗೆಲ್ಲ ತಂದೆ ತಾಯಿಯು ನೀನೆ
ಬಂಧುಬಳಗ ಸರ್ವ ಶರಣ ಬಸವ
ಗತಿ ನೀನೆ ಮತಿ ನೀನೆ ಸರ್ವಾವಲಂಬನೆ
ಬಾಳಿನ ಬೆಳಕು ಜಗಜ್ಯೋತಿ ಬಸವ || ೪ ||

ದೋಷರಹಿತನೆ ಬಸವ ಪಾಪ ವಿದೂರನೆ
ತನುಮನ ಬಯಲಾದ ಪೂರ್ಣ ಬಸವ
ಭವ ಪಾಶ ಹರಿಯುತ ಭಕ್ತಿಯ ಹರಡಿದೆ
ಯುಗಕೊಬ್ಬ ಜಗಕೆ ಮಹಾಂತ ಬಸವ || ೫ ||

ಹರಬಸವ ಶಿವಬಸವ ಗುರುಬಸವ ದೇವನೆ
ನಿನ್ನ ನೆನೆದರೆ ಭವವು ನಾಸ್ತಿಯಹುದು
ಜ್ಞಾನ ಮೂಲನೆ ಧ್ಯಾನ ಲೋಲನೆ ಬಸವೇಶ
ನಿನ್ನಿಂದ ನರಜನ್ಮ ಹರಜನ್ಮವಹುದು || ೬ ||

ಶರಣರಿಗೆ ಶರಣು ಶರಣರ ಬಂಧುವೆ
ಶರಣ ಧರ್ಮವ ಮೆರೆದೆ ಲೋಕದಲ್ಲಿ
ವೀರರಿಗೆ ಧೀರನು ಛಲದಂಕ ಮಲ್ಲನು
ಬಹಿರಂತರಂಗದ ಪಾಕದಲ್ಲಿ || ೭ ||

ಕುಲಭೇದ ಮೀರಿದ ಭೂತದಯಾಪರನೆ
ಲಿಂಗದ ಮುಂದಿಲ್ಲ ಲಿಂಗಭೇದ
ಅಂಗದಿ ಲಿಂಗವ ಸಾಕ್ಷಾತ್ಕರಿಸಿದ
ಕೂಡಲ ಸಂಗಮ ದೇವ ಪಾದ || ೮ ||

ಇಹಪರ ನಡೆನುಡಿ ಶಿವಜೀವ ದ್ವಂದ್ವಗಳ
ಒಂದಾಗಿ ಬೆಸೆದೆಯೊ ತುಂಬು ಬಸವ
ಭಕ್ತಿ ಜ್ಞಾನ ಕರ್ಮ ವೈರಾಗ್ಯ ಅನುಭಾವ
ಎಲ್ಲ ಹದಗೂಡಿ ಸಮಗ್ರ ಬಸವ || ೯ ||

ಗುರುಲಿಂಗ ಜಂಗಮ ಪ್ರಾಣ ಬಸವಣ್ಣ
ಅರಿವಿನಿ ಜ್ಯೋತಿಯ ಕ್ರಾಂತಿ ಸೂರ್ಯ
ಪ್ರಸಾದ ಕಾಯನೆ ಕಾಯಕ ಜೀವನೆ
ಸಿದ್ಧ ಯೋಗಿಯೆ ನೀನು ಶಾಂತಿವರ್‍ಯ || ೧೦ ||

ಸತ್ಯದ ತವನಿಧಿ ಮುಕ್ತಿಯ ಸನ್ನಿಧಿ
ಸುವಿಚಾರ ಚಿಂತನ ಮಹೋದಯ
ಮರ್ತ್ಯವ ಅಮೃತದ ಮಹಮನೆ ಮಾಡಿದೆ
ಇಹಬಾಳು ಭಾಗ್ಯದ ಶುಭೋದಯ || ೧೧ ||

ಆದಿಯ ಗುರು ನರ ಜಾತಿಯ ಗುರು ನೀನೆ
ದೇವತೆಗಳಿಗೆಲ್ಲ ಬಸವ ಗುರುವೆ
ಹಿರಿಯ ಶರಣರು ಕೂಡ ಗುರುವೆಂದು ನುತಿಸಿದರು
ಪರ ಗುರು ವರಗುರು ನೀನೆ ಗುರುವೆ || ೧೨ ||

ಭಕ್ತಿಗೆ ಬೀಜನೆ ಮುಕ್ತಿಗೆ ಓಜನೆ
ಶಕ್ತಿಗೆ ಯುಕ್ತಿಗೆ ನೀನೆ ಬಸವ
ದೀಕ್ಷೆಗೆ ಬಸವಣ್ಣ ಮೋಕ್ಷಕೆ ಬಸವಣ್ಣ
ಕ್ರಮ ಶಿಕ್ಷೆ ಬೋಧೆಗು ತಂದೆ ಬಸವ || ೧೩ ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...