Home / ಲೇಖನ / ಸಾಹಿತ್ಯ / ಟಿ.ಎಸ್. ಏಲಿಯಟ್‍ನ “The Cocktail Party” – ಸಾಂಸಾರಿಕ ಸಂಬಂಧಗಳ ಬಲೆ

ಟಿ.ಎಸ್. ಏಲಿಯಟ್‍ನ “The Cocktail Party” – ಸಾಂಸಾರಿಕ ಸಂಬಂಧಗಳ ಬಲೆ

ಭಾಗ ೨

“ದಿ ಕಾಕ್ ಟೇಲ್ ಪಾರ್‍ಟಿ” ನಾಟಕ ಏಲಿಯಟ್ನ ನಾಲ್ಕನೇಯ ನಾಟಕ. ಸಾಮಾನ್ಯವಾಗಿ ಕುಟುಂಬಗಳಲ್ಲಿ ಗಂಡ ಹೆಂಡತಿಯ ನಡುವಿನ ಕಂಡುಬರುವ ಸಣ್ಣ ಸಂಗತಿ ಹೇಗೆ ಬೆಳೆದು ದೊಡ್ಡದಾಗುತ್ತದೆ. ಕೌಟಂಬಿಕ ಸಮಸ್ಯೆಗಳು ಹೇಗೆ ಬೆಳೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ ನಾಟಕ. ನಾಟಕದ ಮುಖ್ಯ ಪಾತ್ರಗಳು ಎಡ್ವರ್ಡ ಹಾಗೂ ಆತನ ಪತ್ನಿ ಲೆವಿನಿಯಾ. ಅವರ ಮದುವೆಯಾಗಿ ಐದು ವರ್ಷಗಳಾಗಿವೆ. ಅವರು ಮಧ್ಯವಯಸ್ಸಿನ ದಂಪತಿಗಳು. ಕಾಕ್ ಟೇಲ್ ಪಾರ್‍ಟಿ ಯೊಂದಕ್ಕೆ ಅಣಿಗೊಳಿಸಿಕೊಂಡಾಗಲೇ ಪತಿ ಪತ್ನಿಯ ನಡುವೆ ಭಿನ್ನಾಭಿಪ್ರಾಯ ಮೂಡಿ ಆಕೆ ಮನೆಬಿಟ್ಟು ಹೊರಟುಹೋಗುತ್ತಾಳೆ. ಆತಿಥ್ಯ ಏರ್ಪಡಿಸಿದ ಎಡ್ವರ್ಡಗೆ ಪರಮ ಸಂಕಟ. ಕಾರಣ ಬಂದವರ ಮುಂದೆ ಈ ಸಂಗತಿ ಹೊರಬಿದ್ದು ನಗೆಪಾಟಲಾಗುವುದೆಂದು. ಅದಕ್ಕಾತ ಅದನ್ನು ಸರಿದೂಗಿಸಲು ಪತ್ನಿ ತನ್ನ ಅನಾರೋಗ್ಯದ ಆಂಟಿಯನ್ನು ನೋಡಲು ಹೋಗಿರುವಳೆಂದು ಬಂದವರ ಮುಂದೆ ಸುಳ್ಳು ಹೇಳುತ್ತಾನೆ. ಬಹುತೇಕ ಸಂಸಾರಗಳಲ್ಲಿ ಇಂತಹ ಸಂಗತಿಗಳ ಸಂಭಾಳಿಸಬೇಕಾದ ಅನಿವಾರ್ಯತೆ ಇದ್ದೆ ಇರುತ್ತದೆ. ಇದು ನಾಟಕದ ಮೊದಲ ದೃಶ್ಯ. ಲಂಡನ್ನಿನಲ್ಲಿರುವ ತನ್ನ ಪ್ಲಾಟ್ನಲ್ಲಿ ತನ್ನ ಸ್ನೇಹಿತರಿಗೆ ಅತಿಥಿಗಳಿಗೆ ಡ್ರಿಂಕ್ಸ ನೀಡುತ್ತ ಅವರೊಂದಿಗೆ ಎಡ್ವರ್ಡ ಚೆಂಬರ್‍ಈನ್ ಬ್ಯೂಸಿ, ಅತನ ಹತ್ತಿರವೇ ಅಪರಿಚಿತನಾದ ಆ ಅತಿಥಿಯೊಬ್ಬನಿದ್ದಾನೆ. ಕನ್ನಡಕ ತೊಟ್ಟು ನಿಧಾನವಾಗಿ ಜಿನ್ ಮತ್ತು ನೀರನ್ನು ಸೇವಿಸುತ್ತಾ ಇರುವ ಆತ ಮಿತಭಾಷಿ. ಎಡ್ವರ್ಡನ ಸ್ನೇಹಿತರಾದ ಅಲೆಕ್ಸ, ಜೂಲಿಯಾ ಗೌರವಾನ್ವಿತ ಕುಟುಂಬದ ಸುಂದರ ಹುಡುಗಿ ಸಿಲಿಯಾ ಕೊಪ್ಪಲ್ ಸ್ಟೋಮ್ ಹಾಗೂ ಸಾಮಾನ್ಯ ಕುಟುಂಬದ ತರುಣ ಪೀಟರ ಕ್ವಿಲ್ಪ್‍ನೊಂದಿಗೆ ಸಂಭಾಷಣಾ ನಿರತರಾಗಿದ್ದಾರೆ.

ಇಷ್ಟಾಗಿಯೂ ಎಡ್ವರ್ಡ ಅಸಂತುಷ್ಟನಾಗಿದ್ದಾನೆ. ಅತಿಥಿಗಳೆಲ್ಲ ಹೊರಟು ಹೋಗುತ್ತಲೇ ಪೀಟರ ಎಡ್ವರ್ಡನಲ್ಲಿಗೆ ಬಂದು ತಾನು ಸಿಲಿಯಾಳಲ್ಲಿ ಅನುರಕ್ತನಾಗಿರುವುದ ನಿವೇದಿಸಿ ಅದನ್ನು ಆಕೆಗೆ ಅರಹುವಂತೆ ಹೇಳುತ್ತಾನೆ. ಅದನ್ನು ಎಡ್ವರ್ಡ ಒಪ್ಪಿಕೊಳ್ಳುತ್ತಾನೆ. ವಿಚಿತ್ರವೆಂದರೆ ಈ ಸಿಲಿಯಾ ಎಡ್ವರ್ಡನ ಗೆಳತಿ, ಪ್ರಿಯತಮೆ. ಆದಾಗ್ಯೂ ಎಡ್ವರ್ಡ ಅದನ್ನು ಒಪ್ಪಿಕೊಳ್ಳುವುದು ಆತನ ನೈಜ ಪ್ರೀತಿಯ ಮೂಲಬೇರು ಆಕೆಯಲ್ಲ ಎಂಬುದನ್ನು ತೋರಿಸುತ್ತದೆ. ಎಲ್ಲರೂ ನಿರ್ಗಮಿಸುತ್ತ ಇರುವಾಗಲೇ ಕೊನೆಗೂ ಒಡಲಾಳದ ಸತ್ಯವನ್ನು ಎಡ್ವರ್ಡ ಸೂಕ್ಷ್ಮವಾಗಿ ಅಪರಿಚಿತ ಅತಿಥಿಯಲ್ಲಿ ನಿವೇದಿಸುತ್ತಲೂ ಆತ ಲೆವಿನಿಯಾಳನ್ನು ತಾನು ವಾಪಸ್ಸು ಕರೆತರುವುದಾಗಿಯೂ ಆದರೆ ಆಕೆಯ ಆಗಮನದ ತರುವಾಯ ಎಡ್ವರ್ಡ ಆಕೆಗೆ ಅಸಂಬದ್ಧ ಪ್ರಶ್ನೆಗಳಿಂದ ಆಕೆಯನ್ನು ಉದಾಸಗೊಳಿಸಬಾರದೆಂದು ತಾಕೀತು ಮಾಡುತ್ತಾನೆ. ಎಡ್ವರ್ಡ ಅದಕ್ಕೊಪ್ಪಿದ ಮೇಲೆ ಆತ ಅಲ್ಲಿಂದ ಹೊರಟು ಹೋಗುತ್ತಾನೆ.

ಈಗ ಪುನಃ ಬಾಗಿಲ ಕರೆಗಂಟೆ ಬಾರಿಸಿದೆ. ಆಕೆ ಮತ್ಯಾರೂ ಅಲ್ಲ. ಸಿಲಿಯಾ ಎಡ್ವರ್ಡನ ಗೆಳತಿ, ಅವರ ಸಂಬಂಧ ಹಳೆಯದು. ಹೆಂಡತಿ ಹೊರಟುಹೋದ ಕಾರಣ ಏಕಾಂಗಿಯಾದ ಆತ ತನ್ನನ್ನು ಪರಿಗಣಿಸಬಹುದೆಂಬ ಆಕಾಂಕ್ಷೆಯಿಂದ ಎಡ್ವರ್ಡನೊಂದಿಗೆ ತನ್ನ ಭಾವನೆಗಳ ಹೇಳಿಕೊಳ್ಳ ಬಂದ ಆಕೆಗೆ ಎಡ್ವರ್ಡನ ಮಾತಿನಿಂದ ನಿರಾಶೆಯಾಗುತ್ತದೆ. ಆಕೆಯ ಪ್ರೇಮ ದೈವಿಕ. ಪರಿಸ್ಥಿತಿಯನ್ನು ಎದುರಿಸಲಾಗದ ಎಡ್ವರ್ಡ ಆಕೆಯೊಂದಿಗೆ ಬಾಳಲು ಸಿದ್ಧನಿಲ್ಲ. ಆತನ ಯಾಂತ್ರಿಕ ವೈವಾಹಿಕ ಬದುಕಿನಲ್ಲಿ ಆಕೆ ಒಂದು ರಿಲಾಕ್ಸೇಷನ್ ಅಷ್ಟೇ. ಆದರೆ ಸಿಲಿಯಾ ಆತನನ್ನು ಅತಿಯಾಗಿ ಪ್ರೀತಿಸಿದ ಜೀವ ಹಾಗಾಗೆ ಆಕೆ ಅವನೊಂದಿಗೆ ಬಾಳಲು ಸಿದ್ಧ. ಆದರೆ ಆತ ತನ್ನ ಪತ್ನಿಯನ್ನು ತಾನು ಬಯಸುವುದಾಗಿಯೂ ಆಕೆಯನ್ನು ವಾಪಸ್ಸು ಕರೆಸಿಕೊಳ್ಳುವ ಆಶೆಯನ್ನು ವ್ಯಕ್ತಪಡಿಸಲು ಸಿಲಿಯಾಳ ಆಶಾಭಂಗವಾಗುತ್ತದೆ. ಹಾಗಾಗಿ ಆಕೆ ಎಡ್ವರ್ಡ ಚೆನ್ನಾಗಿರಲೆಂದು ಆಶಿಸಿದರೂ, ಒಳಗೊಳಗೆ ನೊಂದ ಆಕೆ ಆತನ ಬಗೆಗಿನ ತನ್ನ ಆಶೆಗಳೆಲ್ಲ ಸತ್ತುಹೋದವೆಂದು ಹೇಳುತ್ತಾಳೆ.

ಮರುದಿನ ಎಡ್ವರ್ಡ ಇಲ್ಲದ ವೇಳೆಯಲ್ಲಿ ಲೆವಿನಿಯಾ ತನ್ನ ಪ್ಲಾಟಿಗೆ ಹಿಂತಿರುಗಿದ್ದಾಳೆ. ಇದರ ಹಿಂದಿನ ಕೈವಾಡ ಅದೇ ಅಪರಿಚಿತ ವ್ಯಕ್ತಿ. ತನ್ನಲ್ಲಿಯ ಕೀ ಬಳಸಿ ಒಳಬಂದ ಅವಳಿಗೆ ಆ ಅಧಿಕಾರವಿದೆ. ಎಡ್ವರ್ಡ ಬರುತ್ತಲೂ ಅವರಿಬ್ಬರ ಸಂವಾದ ಮತ್ತೆ ತೆರೆದುಕೊಳ್ಳುತ್ತದೆ. ತಮ್ಮದೇ ಮದುವೆಯ ನೆನಪುಗಳ ತೆಗೆದು ತಮ್ಮಿಬ್ಬರ ನಡುವಿನ ಬಂಧ ಅನುಬಂಧಗಳ ಅದರ ಅಗತ್ಯತೆ ಅನಿವಾರ್ಯತೆ ಚರ್‍ಚಿಸುತ್ತಲೇ ತಾವಿಬ್ಬರು ಈ ಸಂಬಂಧದ ಬಗ್ಗೆ ಪ್ರಾಮಾಣಿಕವಾಗಿರುವುದು ಅರಿವಾಗುತ್ತದೆ. ದಾಂಪತ್ಯದ ಸಾರವನ್ನು ಎತ್ತಿ ಹಿಡಿಯುತ್ತದೆ ನಾಟಕ. ಪಾಶ್ಚಿಮಾತ್ಯ ನಾಟಕವಾದರೂ ಮಾನವ ಸಂಬಂಧಗಳ ಮೌಲ್ಯವನ್ನು ಶ್ರುತಪಡಿಸಿ ಬದುಕಿನ ನಿಜವಾದ ಆನಂದವನ್ನು ಅರಹುವುದು ಇಲಿಯಟ್ ನ ಮುಖ್ಯ ಇರಾದೆ.

ನಾಟಕದ ಉದ್ದಕ್ಕೂ ಆಗಾಗ ಕಂಡುಬರುವ ಪಾತ್ರವೆಂದರೆ ಅದು ಅಪರಿಚಿತ ಅತಿಥಿಯ ಚಿತ್ರ Henry Harcourt Reilly ಆತನೊಬ್ಬ ಮನೋವೈದ್ಯ ಆತನ ಇನ್ನೊಂದು ಪ್ರಸಿದ್ಧ ನಾಟಕ. ಎರಡನೇಯ ದೃಶ್ಯದಲ್ಲಿ ಆತ ಎಡ್ವರ್ಡ ಲೆವಿನಿಯಾ, ಸಿಲಿಯಾರ ಸಮಾಲೋಚನೆಗೈದು ಅವರ ಸಮಸ್ಯೆಗಳ ನಿವಾರಣೆಗೆ ಸಲಹೆ ನೀಡುತ್ತಾನೆ. ಲೆವಿನಿಯಾಗೆ ಪೀಟರನೊಂದಿಗೆ ಇರುವ ಸಂಬಂಧ, ಎಡ್ವರ್ಡಗೆ ಸಿಲಿಯಾಳೊಂದಿಗಿನ ಸಂಬಂಧಗಳು ಅವರಲ್ಲಿ ಬರೀಯ ಹೊರ ತುಡಿತಗಳೆ ಹೊರತು ನೈಜಭಾವಗಳಲ್ಲ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳುವಂತೆ ತಿಳಿಹೇಳುತ್ತಾನೆ. ನಿಜಕ್ಕೂ ಲೆವಿನಿಯಾ ಮನೆಬಿಟ್ಟು ಹೊರಟುಹೋಗಲು ಕಾರಣವೆಂದರೆ ತನ್ನಿಂದಾದ ಅಚಾತುರ್ಯ. ವಿವಾಹಿತೆಯಾದ ಆಕೆ ಪೀಟರನ ಮೋಹಿಸಿದಕ್ಕೆ ತನ್ನಷ್ಟಕ್ಕೆ ತಾನೆ ಮುಜುಗರಕ್ಕೆ ಒಳಗಾಗುತ್ತಾಳೆ. ಹಾಗೆ ಎಡ್ವರ್ಡ ಕೂಡ ಸಿಲಿಯಾಳನ್ನು ಪ್ರೀತಿಸಿಲ್ಲ. ಅದೊಂದು ಬಯಕೆ ಅಷ್ಟೇ ಎಂಬುದು ಆತನಿಗೆ ಅರಿವಾಗುತ್ತದೆ. ಅದೂ ಅಲ್ಲದೇ ಆಕೆ ತನಗಿಂತ ತುಂಬಾ ಕಿರಿಯಳಾದ ಕಾರಣ ಆ ವಯಸ್ಸಿನ ಹುಡುಗನ ಹೊಂದುವಂತೆ ತಿಳಿ ಹೇಳುತ್ತಾನೆ.

ನಾಟಕದ ಕೊನೆಯ ಅಂಕದಲ್ಲಿ ಪುನಃ ಎಡ್ವರ್ಡ ಮತ್ತು ಲೆವಿನಿಯಾ ಅದೇ ಪಾರ್‍ಟಿಯನ್ನು ಮತ್ತೊಮ್ಮೆ ಏರ್ಪಡಿಸಿದ್ದಾರೆ. ಎಡ್ವರ್ಡ ಮತ್ತು ಲಿವಿನಿಯಾ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುವ ಜೀವಗಳು. ಈಗ ಅವರಿಗೆ ಅದರ ಮನವರಿಕೆಯಾಗಿದೆ. ಹಾಗಾಗಿ ಸಂತೋಷ ನೂರ್ಮಡಿಸಿದೆ. ಅದೇ ಹಳೆಯ ಸ್ನೇಹಿತರು ಸಂತೋಷ ಕೂಟದಲ್ಲಿ ಭಾಗಿಗಳಾಗಿದ್ದಾರೆ ಅದರೆ ಸಿಲಿಯಾ ಮಾತ್ರ ಅಲ್ಲಿಲ್ಲ. ಕಾರಣ ಆಕೆ ಈ ಪ್ರಪಂಚವನ್ನೆ ಬಿಟ್ಟು ಹೋಗಿದ್ದಾಳೆ. ಎಡ್ವರ್ಡನಿಂದ ವಿಮುಖಳಾಗಿ ಆಕೆ ರ್‍ಯಾಲಿಯ ಬಳಿ ತನ್ನ ಸಮಸ್ಯೆಗಳಿಗೆ ಸಲಹೆ ಪಡೆದು ಆಫ್ರಿಕಾಕ್ಕೆ ಹೊರಟುಹೋಗುತ್ತಾಳೆ ಆದರೆ ದುರಾದೃಷ್ಟ ಅಲ್ಲಿ ಪ್ಲೇಗ ರೋಗಿಗಳಿಗೆ ಶುಶ್ರೂಷೆ ಮಾಡುತ್ತ ತಾನು ಅದೇ ಕಾಯಿಲೆಗೆ ಬಲಿಯಾಗಿ ಈಹಲೋಕ ತ್ಯಜಿಸುತ್ತಾಳೆ. ಈ ವಿಚಾರ ತಿಳಿದ ಪೀಟರ ಪಾರ್‍ಟಿಯಿಂದ ಹೊರಟು ಹೋಗುತ್ತಾನೆ. ಸಿಲಿಯಾ ಇಲ್ಲದ ಜಗತ್ತು ಆತನಿಗೆ ಸುಂದರವೆನಿಸುವುದಿಲ್ಲ. ಆದರೆ ಎಡ್ವರ್ಡ ದಂಪತಿಗಳು ಮುಂದೆ ಸುಖ ಜೀವನ ನಡೆಸುತ್ತಾರೆ. ಹೀಗೆ ನಾಟಕ ಸಂಸಾರದ ಗುಟ್ಟು, ಆಗಾಗ ಹೆಣಕಿ ಹಾಕುವ ಅಸಂಬದ್ಧಗಳು, ವಿವಾಹೇತರ ಸಂಬಂಧಗಳು, ಆದರೂ ಕೊನೆಯಲ್ಲಿ ಗೆಲ್ಲುವ ವಿವಾಹ ಸಂಬಂಧ ಇದರ ಮೇಲಿನ ಸುಂದರ ನಿರೂಪಣೆ.

ಶೇಕ್ಸಪಿಯರಿಯನ್ ನಾಟಕದಲ್ಲಿ ಕಂಡುಬರುವ ಪ್ರೇಮ ಭಿನ್ನ ಹಿನ್ನೆಲೆ ಹೊಂದಿದ್ದರೆ ಇಲಿಯಟ್ ನಾಟಕದ ಪ್ರೇಮ ಆಧ್ಯಾತ್ಮಿಕ ನೆಲೆಯಲ್ಲಿ ಅರಳುತ್ತದೆ. ಆದರೆ ಅಲ್ಲಿಯೂ ಅಪಾರ್ಥಗಳು ಸಾಮಾನ್ಯ. ಅದು ಮಾನವ ಸಹಜ ಸ್ವಭಾವ.

ಈ ನಾಟಕವನ್ನು ಲೇಖಕ ಕಾಮೆಡಿ ಎಂದು ಕರೆದರೂ ಅದೊಂದು ನೈತಿಕತೆಯ ನಿರೂಪಿಸುವ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದ ಕೃತಿ. ನಾಟಕದ ನಡುನಡುವೆ ಏಳುವ ಹಾಸ್ಯ ಪ್ರಸಂಗಗಳು ಗಾಡವಾಗಿ ತಟ್ಟುತ್ತವೆ. ಕಥೆಯ ಮೂಲ ಹಂದರ ಗ್ರೀಕ ನಾಟಕಕಾರ ಯೂರಿಪಿಡಿಸ್ ಎಕ್ಲೆಸ್ಟಿಕ್ಸಗೆ ಸಂವಾದಿಯಾಗಿ ಮೂಡಿ ಬಂದ ಕಥೆ. ಅದೇ ಮನೆ ಬಿಟ್ಟು ಹೋದ ಹೆಂಡತಿಗಾಗಿ ಪರಿತಪಿಸುವ ಪತಿ ಪುನಃ ಆಕೆಯನ್ನು ಮನೆಗೆ ಕರೆತರುವುದು.

ನಾಟಕಕಾರನೊಂದಿಗೆ ಶೇಷ್ಠ ವಿಮರ್‍ಷಕಾರನೂ ಆದ ಎಲಿಯಟ್ ಪ್ರಬಂಧ Tradition and Individual Talent ವಿಮರ್‍ಷೆಗೆ ಹೊಸ ತಾತ್ವಿಕ ನೆಲೆಗಟ್ಟನ್ನು ಪರಿಚಯಿಸಿದ ಕೃತಿ. ಆತನ ಇನ್ನೊಂದು ಪ್ರಸಿದ್ಧ ನಾಟಕ “Murder in the Cathedral”. ಕವಿಯೊಬ್ಬನ ಆತ್ಮಸ್ವಗತವೇ ಕವಿತೆ ಎಂದು ರೋಮ್ಯಾಂಟಿಕ್ ಕವಿಗಳು ಹೇಳಿದರೆ, ಈತ ಕವಿತೆ ಬರೀಯ ಅಭಿವ್ಯಕ್ತಿಯಲ್ಲ ಬದಲಿಗೆ ತನ್ನೊಳಗಿನ ತುಡಿತಗಳ ಹೊರಹಾಕಿ ಪಾರಾಗುವ ಪ್ರಯತ್ನವೆಂದು ಹೇಳುತ್ತಾನೆ. ಇಪ್ಪತ್ತನೇಯ ಶತಮಾನದಲ್ಲಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಾಟಕ, ಕಾವ್ಯ, ಸಾಹಿತ್ಯ ವಿಮರ್‍ಷೆ ಹೀಗೆ ದಶಕಗಳ ಕಾಲ ಎಲಿಯಟ್ ತನ್ನ ಛಾಪು, ಪ್ರಭಾವ ಹೊಂದಿದ್ದ. ೧೯೪೮ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ಬಾಚಿಕೊಂಡ.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...