Home / ಕವನ / ಕವಿತೆ / ಬುದ್ಧಿವಾದ

ಬುದ್ಧಿವಾದ

ಕೇಳಲಾರೆ ಕಣೆ ದೀಪಿಕಾ ನಿಲ್ಲಿಸೆ ಈ ಬಡಾಯಿ, ಡೌಲು
ನಾ ಕಾಣದ್ದೇನೇ ನೀ ಕುಟ್ಬುವ ಈ ಜಂಬದ ಡೋಲು?
ಗಂಡಿನ ಹಂಗಿಲ್ಲದೆ ಬಾಳುತ್ತೀಯಾ? ಲೇ ಹುಡುಗಿ!
ತೇಲುವ ಬೆಂಡಾಗುತ್ತದೆಯೆ, ಬಾಗಿದ ಜೊಂಡಾಗುತ್ತದೆಯೆ
ನಿಂತ ನೆಲವನ್ನೆ ಕೊರೆದು
ಗರಗರ ಬುಗುರಿ ತಿರುಗಿ ಹೋಗುತ್ತದೆಯೆ ಬದುಕು!
ಕೀಲು ಹಾಕದ ಚಕ್ರ ಹೊರಳದೆ ಇರುತ್ತದ?
ಕೆರಳದೆ ಇರುತ್ತದೇನೇ
ಸರಳ ನಡುವೆ ಹಸಿದು ಸುತ್ತುವ ತೋಳದ ಹಿಂಡು?
ಅಲ್ಲವೆ, ಪಾಳೆಯದಲ್ಲೇ ದಂಗೆ ಎದ್ದು ಗುಲ್ಲಾಗಿದೆ
ದಡಗಳ ತಡೆಗಳ ದಾಟಿ ಹೊಲಕ್ಕೆ ಮದಜಲ ನುಗ್ಗಿದೆ
ಆದರು ಕೋಟೆಯ ಹೊರಗೆ
ಸಿಪಾಯಿ ಭಂಗಿಯ ಶಿಸ್ತಿನ ಅಂಗಿಯ ಸಂಗತಿಯೇನೇ?
ಹೇಳೇ ದೀಪಿಕಾ
ಎಣ್ಣೆ ಇರುವಾಗ ಉರಿಯದೆ ಕಣ್ಣು ಮುಚ್ಚುವುದೇನೇ?

ಈ ಶಿಸ್ತಿನ ನಾಟಕ ಹೀಗೇ ಸಾಗಿರುವಾಗಲೆ
ಭರತವಾಕ್ಯಕ್ಕೆ ಇನ್ನೂ ಹೊತ್ತಿರುವಾಗಲೆ
ಕಾಡು ಕರೆಯುತ್ತದೆ ಹಾಡು ಮುಗಿಯುತ್ತದೆ,
ಎಣ್ಣೆಯೆಲ್ಲ ಒಣಗಿ ಹಣತೆ
ಮಣ್ಣ ಹೊಳಕೆಯಾಗುತ್ತದೆ;
ನಿನ್ನೆ ಮೈಯಲ್ಲಿ ಚೈತ್ರ ಬಿಚ್ಚಿರುವ ಚಿಗುರನ್ನು ಹಚ್ಚಿರುವ ಅಗರನ್ನು
ಮಂಜುನಾಲಿಗೆಯೊಂದು ನೆಕ್ಕಿ ಚಪ್ಪರಿಸಿ ಬಿಡುತ್ತದೆ;
ನೀ ಮುಟ್ಟಿದ್ದನ್ನು ಮುತ್ತಿಡುತ್ತ
ಮೆಟ್ಟಿದಲ್ಲಿ ಮಣ್ಣು ಮುಕ್ಕುತ್ತ
ಬೆನ್ನುಬಿದ್ದು ಅಲೆದ ಊರು
ಗುಡ್‌ಬೈ ಕೂಗಿ ಓಡುತ್ತದೆ.

ಅಮೇಲೆ
ಅಜ್ಜಿಯರ ಬಳಗ ಕರೆಯುತ್ತದೆ ನಿನ್ನನ್ನ
ಪುಣ್ಯಕಥೆ ಕೇಳುವುದಕ್ಕೆ ಪುರಾಣದ ಕಟ್ಟೆಗೆ
ಹತ್ತಿ ಬಿಡಿಸುವುದಕ್ಕೆ ಬತ್ತಿ ಹೊಸೆಯುವುದಕ್ಕೆ;
ಕಣ್ವರು ಸಾಕಿದ ಕನ್ಯೆ
ಕಣ್ಣು ಹೊರಳಿದ್ದ ವೇಳೆ
ಭೂಪನೊಬ್ಬನ ಮೈ ಬೆಂಕಿಗೆ ಧೂಪಹಾಕಿದ್ದ ಕೇಳುವುದಕ್ಕೆ:
ಬೆಣ್ಣೆ ಹಾಲು ಹೊತ್ತು ನೆರೆದ ಕನ್ಯೆಗೋಪಿಯರ ನಡುವಿನಲ್ಲಿ
ಬೃಂದಾವನದ ಭಗವಂತ ಮೆರೆದ
ಶೃಂಗಾರದಲ್ಲಿ ಕಿವಿತೊಳೆಯುವುದಕ್ಕೆ!

ಕೇಳುತ್ತ ಕೇಳುತ್ತ ಕಣ್ಣೀರು ಕರೆಯುತ್ತೀಯ
ದೇವರೇ ಗೆಜ್ಜೆಕಟ್ಟಿ ಕುಣಿದರೂ
ನಾನು ಹೆಜ್ಜೆಹಾಕದೆ ಹೋದೆನೆ ಅಂತ;
ಅಟ್ಟಮೇಲೆ ವ್ಯರ್ಥವಾಗಿ ಉರಿಯುತ್ತೀಯ
ಮಡಿಲಲ್ಲೇ ಹಾಲು ಹಣ್ಣಿದ್ದೂ
ಬಡಿವಾರಕ್ಕೆ ಉಪವಾಸ ಬಿದ್ದೆನೆ ಅಂತ;
ಕಟ್ಟದ ಮಾಲೆ ಯಾರೂ ಮುಟ್ಟದೆ ಬಾಡಿತೆ ದೇವರೆ
ಪಲ್ಲವಿ ತಾನಗಳಿಲ್ಲದೆ ಪವಮಾನಕ್ಕೆ ಬಂದೆನೆ ಅಂತ;
ಅದರೆ ದೀಪಿಕಾ ಅಗ
ತಿದ್ದಲು ಏನಿರುತ್ತದೆ?
ಡೋಲು ಹರಿದಿರುತ್ತದೆ, ಕೋಲು ಮುರಿದಿರುತ್ತದೆ
ಉಪ್ಪು ಮುಕ್ಕಿದ ಸೊಕ್ಕು ನೀರು ಕುಡಿಯುತ್ತಿರುತ್ತದೆ.
*****
ದೀಪಿಕಾ ಕವನಗುಚ್ಛ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...