Home / ಕವನ / ಕವಿತೆ / ಊರ್ಮಿಳೆ

ಊರ್ಮಿಳೆ

ಕರೆದರೂ ತಿರುಗದೆ
ಜಿಗಿದು ಓಡಿದಳಲ್ಲ,
ಯಾರಿವಳು ಎರಳೆಮರಿ ಎಂದಿರೆ?
ಇವಳೆ ಊರ್ಮಿಳೆ, ತುಂಬುಜಂಬುನೇರಳೆ
ನಮ್ಮ ಮಲೆನಾಡ ಸಿಹಿಪೇರಲೆ.
ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ
ನನ್ನ ಕಂಡರೆ ನಾಚಿಕೆ,
ಪ್ರೀತಿಯಲಿ ಬಾ ಎಂದು ರಮಿಸಿದರೆ ನಿಲ್ಲುವಳು
ನಾಲ್ಕಾರು ಮಾರಾಚೆಗೆ –
ಮತ್ತೊಮ್ಮೆ ಕರೆದಾನೆ ಎಂಬಾಸೆ ಮಿನುಗುವುದು
ಕಣ್ಣ ತಿಳಿತೆರೆಯಾಚೆಗೆ.
ನಮ್ಮ ನಡುವಿನ ಇಂಥ ಅಂತರಕೆ ನಾನಿಟ್ಟೆ
ಚಾಕಲೇಟಿನ ಸೇತುವೆ!

ಪುಟ್ಟ ಕಣ್ದೊಟ್ಟಿಲಲಿ
ಮಿಂಚರಸದಲಿ ನೆನೆದ ಎರಡು ಕರಿಗೋಲಿ,
ಬಾನು ಕಡಲರಿಯದದರಾಳದಲಿ ಬ್ರಹ್ಮಾಂಡ
ಹೊಡೆಯುವುದು ಜೋಲಿ,
ತುಟಿ ತೆರೆದರಿವಳು-
ಬಾನು ಬುವಿಯನು ತಬ್ಬಿ
ಹಗಲು ಇರುಳನು ದಬ್ಬಿ
ಮರಮರದಿ ಹಾಡುವುವು ಹಕ್ಕಿ ಕೊರಳುಬ್ಬಿ;
ಹೂ ಸುರಿದು ಹಣ್ ಬಿರಿದು
ದಡದಡನೆ ಹೊಳೆ ಹರಿದು
ಇಳೆಗೆ ಮಳೆ ತುಳುಕುವುದು ಹೂಬಿಸಿಲು ಹಬ್ಬಿ!

ಕಿಲಕಿಲನೆ ನಕ್ಕಳೆಂದರೆ ಇವಳು
ಜಡಕು ಕಚಗುಳಿಯನಿಟ್ಟಂತೆ,
ಹರಿದ ಕರಿಮುಗಿಲಲ್ಲಿ ಮಲಗಿರುವ ಬಾನಿಗೆ
ಹುಣ್ಣಿಮೆಯ ಹಾಲು ಹರಿದಂತೆ,
ಕರಿಯ ಕಿರುಜಡೆ ಬೆಣ್ಣೆಗನ್ನೆ ಮೇಲಿಳಿದಿರಲು
ಮಿಂಚು ಮುಗಿಲಾಟದಂತೆ,
ಹೂಗಾಲನಿಟ್ಟು ಜಿಗಿದರೆ ಅದರ ಸ್ಪರ್ಶಕೇ
ಪುಳಕ ನೆಲಕೆ!

ತುಂಬುಕಿತ್ತಲೆಗೆನ್ನೆ ಮಿಂಚುಗಣ್ಣಿನ ಹುಡುಗಿ
ಹೂಮೈಯ ಬೆಡಗಿ!
ತಿಂಗಳನೆ ನಾಚಿಸುವ ಬೆಣ್ಣೆಗೆನ್ನೆಯೊಳೊಂದು
ಕಪ್ಪು ಕಲೆ ಮಿರುಗಿ
ಮುದ್ದು ಮುಖದೊಳಗೊಮ್ಮೆ ತುಂಟನಗೆ ತುಳುಕಿಸಲು
ನಾ ಮೈಯ ಮರೆತು,
ಮುತ್ತಮಳೆ ಸುರಿಸುವೆನು ನೋಯುವುದೊ ಹೂಗೆನ್ನೆ
ಎಂಬುದನೂ ಮರೆತು.

ನಿನ್ನಂಥ ನೆರೆಯಿರಲು
ಯಾವ ಭಾಗ್ಯಕೆ ನನಗೆ ಕಡಮೆ ಹೇಳು?
ನೀ ನನ್ನ ಬಳಿಯಲಿರೆ
ಮುಕ್ತಿಯೂ ಬೇಡ ಸಾಕಿಂಥ ಬಾಳು!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...