Home / ಕವನ / ಕವಿತೆ / ಊರ್ಮಿಳೆ

ಊರ್ಮಿಳೆ

ಕರೆದರೂ ತಿರುಗದೆ
ಜಿಗಿದು ಓಡಿದಳಲ್ಲ,
ಯಾರಿವಳು ಎರಳೆಮರಿ ಎಂದಿರೆ?
ಇವಳೆ ಊರ್ಮಿಳೆ, ತುಂಬುಜಂಬುನೇರಳೆ
ನಮ್ಮ ಮಲೆನಾಡ ಸಿಹಿಪೇರಲೆ.
ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ
ನನ್ನ ಕಂಡರೆ ನಾಚಿಕೆ,
ಪ್ರೀತಿಯಲಿ ಬಾ ಎಂದು ರಮಿಸಿದರೆ ನಿಲ್ಲುವಳು
ನಾಲ್ಕಾರು ಮಾರಾಚೆಗೆ –
ಮತ್ತೊಮ್ಮೆ ಕರೆದಾನೆ ಎಂಬಾಸೆ ಮಿನುಗುವುದು
ಕಣ್ಣ ತಿಳಿತೆರೆಯಾಚೆಗೆ.
ನಮ್ಮ ನಡುವಿನ ಇಂಥ ಅಂತರಕೆ ನಾನಿಟ್ಟೆ
ಚಾಕಲೇಟಿನ ಸೇತುವೆ!

ಪುಟ್ಟ ಕಣ್ದೊಟ್ಟಿಲಲಿ
ಮಿಂಚರಸದಲಿ ನೆನೆದ ಎರಡು ಕರಿಗೋಲಿ,
ಬಾನು ಕಡಲರಿಯದದರಾಳದಲಿ ಬ್ರಹ್ಮಾಂಡ
ಹೊಡೆಯುವುದು ಜೋಲಿ,
ತುಟಿ ತೆರೆದರಿವಳು-
ಬಾನು ಬುವಿಯನು ತಬ್ಬಿ
ಹಗಲು ಇರುಳನು ದಬ್ಬಿ
ಮರಮರದಿ ಹಾಡುವುವು ಹಕ್ಕಿ ಕೊರಳುಬ್ಬಿ;
ಹೂ ಸುರಿದು ಹಣ್ ಬಿರಿದು
ದಡದಡನೆ ಹೊಳೆ ಹರಿದು
ಇಳೆಗೆ ಮಳೆ ತುಳುಕುವುದು ಹೂಬಿಸಿಲು ಹಬ್ಬಿ!

ಕಿಲಕಿಲನೆ ನಕ್ಕಳೆಂದರೆ ಇವಳು
ಜಡಕು ಕಚಗುಳಿಯನಿಟ್ಟಂತೆ,
ಹರಿದ ಕರಿಮುಗಿಲಲ್ಲಿ ಮಲಗಿರುವ ಬಾನಿಗೆ
ಹುಣ್ಣಿಮೆಯ ಹಾಲು ಹರಿದಂತೆ,
ಕರಿಯ ಕಿರುಜಡೆ ಬೆಣ್ಣೆಗನ್ನೆ ಮೇಲಿಳಿದಿರಲು
ಮಿಂಚು ಮುಗಿಲಾಟದಂತೆ,
ಹೂಗಾಲನಿಟ್ಟು ಜಿಗಿದರೆ ಅದರ ಸ್ಪರ್ಶಕೇ
ಪುಳಕ ನೆಲಕೆ!

ತುಂಬುಕಿತ್ತಲೆಗೆನ್ನೆ ಮಿಂಚುಗಣ್ಣಿನ ಹುಡುಗಿ
ಹೂಮೈಯ ಬೆಡಗಿ!
ತಿಂಗಳನೆ ನಾಚಿಸುವ ಬೆಣ್ಣೆಗೆನ್ನೆಯೊಳೊಂದು
ಕಪ್ಪು ಕಲೆ ಮಿರುಗಿ
ಮುದ್ದು ಮುಖದೊಳಗೊಮ್ಮೆ ತುಂಟನಗೆ ತುಳುಕಿಸಲು
ನಾ ಮೈಯ ಮರೆತು,
ಮುತ್ತಮಳೆ ಸುರಿಸುವೆನು ನೋಯುವುದೊ ಹೂಗೆನ್ನೆ
ಎಂಬುದನೂ ಮರೆತು.

ನಿನ್ನಂಥ ನೆರೆಯಿರಲು
ಯಾವ ಭಾಗ್ಯಕೆ ನನಗೆ ಕಡಮೆ ಹೇಳು?
ನೀ ನನ್ನ ಬಳಿಯಲಿರೆ
ಮುಕ್ತಿಯೂ ಬೇಡ ಸಾಕಿಂಥ ಬಾಳು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...