Home / ಕವನ / ಕವಿತೆ / ದಾಟಿ ತಾಗಲಿ ದೃಷ್ಟಿಕಡೆಯ ಪರಿಧಿ

ದಾಟಿ ತಾಗಲಿ ದೃಷ್ಟಿಕಡೆಯ ಪರಿಧಿ

ಪಟ್ಟಿದ್ದೆಲ್ಲ ಕಾಮಕ್ಕೆ, ಪ್ರೀತಿಗಲ್ಲ – ಭಜನೆ
ಕುಟ್ಟಿದ್ದೆಲ್ಲ ಮೋಜಿಗೆ ಭಕ್ತಿಗಲ್ಲ;
ಮೋರಿಯಲ್ಲಿಳಿದ ಜಲ ಪಾತ್ರದಲ್ಲಿದ್ದರೂ
ಕೊಚ್ಚಿ ಹೋಗಲು ಮಾತ್ರ, ಕುಡಿಯಲಲ್ಲ
ಅರ್ಥಸಾಧಕ ಗುರಿಯೆ ಬಿಟ್ಟು ಪಡುತಿರುವ ಸುಖ
ತೀಟೆಗಳ ಪೂರೈಕೆ, ಭೋಗವಲ್ಲ
ನೆರೆ ಹೊರೆಯ ಮೆಟ್ಟಿ ಗಿಟ್ಟಿದ ಅರ್ಥಕಾಮಗಳು
ಪುರುಷಾರ್ಥವೆನ್ನಿಸಲು ತಕ್ಕವಲ್ಲ

ಲಕ್ಷ ವೃಕ್ಷಗಳು ಮೈಲುದ್ದ ನಿಂತಿದ್ದರೂ
ಗುಂಪಾಗಿ ನೆರೆಯದೆ ಅರಣ್ಯವೆಲ್ಲಿ ?
ಗುಂಪಿದ್ದರೂ ಬಂತೆ ತಮತಮಗೆ ಬಂದ ಜನ
ಉದ್ದೇಶ ಸ್ವಂತದ್ದು ಸಂತೆಯಲ್ಲಿ.
ಪಾತ್ರ ಕಥೆ ವಸ್ತು ಸಂವಾದ ಎಲ್ಲಾ ಇದ್ದೂ
ಅರ್ಥವಿದೆ ಕೃತಿಯ ವಿನ್ಯಾಸದಲ್ಲಿ
ಸೂತ್ರ ಕಡಿದರೆ ಮಣಿಯ ಮಾಲೆ ಚೆಲ್ಲಾಪಿಲ್ಲಿ
ವಿನ್ಯಾಸವಿಲ್ಲದೆ ಅರ್ಥವೆಲ್ಲಿ ?

ರಾಮಗಿರಿಯಿಂದ ಹೈಮಾಚಲದ ನೆತ್ತಿಗೆ
ಗಡಿಯ ರಚಿಸಿದ್ದು ಉಜ್ಜಯಿನಿ ಪ್ರತಿಭೆ
ನಾಲ್ಕು ದಿಕ್ಕುಗಳಲ್ಲು ಉಪನಿಷೋದ್ದೇಶಕ್ಕೆ
ದುಡಿದ ತೇಜಕ್ಕೆ ಕೇರಳದ ಮಿತಿಯೆ ?
ಬ್ರಹ್ಮಗಿರಿಯಲ್ಲಿ ಅಶೋಕಚಕ್ರಿಯ ಮಾತು
ಬೋಧಿವೃಕ್ಷದ ನೆರಳು ದಕ್ಷಿಣದಲಿ
ದಕ್ಷಿಣೇಶ್ವರ ಕಾಳಿದೇವಾಲಯದ ಗಂಟೆ
ಮೊಳಗಿತ್ತು ಇಡಿ ಭರತಖಂಡದಲ್ಲಿ

ಕರಿಹಸಿರು ಕೆಂಪುಗಳ ಪಗಡೆಯಾಟದ ಹಾಸು
ಹತ್ತಾರು ದಾನ್ಯ ಬಿತ್ತಿರುವ ಗದ್ದೆ
ಎಲ್ಲ ಕಾಯಿಗೆ ಒಂದೇ ಹಾಸು, ದಾಳದ ಜೋಡಿ
ನೂರು ರುಚಿ ಒಟ್ಟಾಗಿ ಊಟನಿದ್ದೆ
ವ್ಯಕ್ತಿ ಕೇಂದ್ರಕ್ಕೆ ಹತ್ತು ವೃತ್ತಗಳ ಸುತ್ತುವರಿ
ದಾಟಿ ತಾಗಲಿ ದೃಷ್ಟಿ ಕಡೆಯ ಪರಿಧಿ
ಕೋಟಿ ಬಗೆ ಡೊಂಕು ಸಂಕೀರ್ಣ ನರವ್ಯೂಹದಲಿ
ರಕ್ತ ಪರಿಚಲನೆ ಕ್ಷಣ ತಪ್ಪದಿರಲಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...