Home / ಕವನ / ಕವಿತೆ / ವಿರಹಿಣಿಯ ಸಂತಾಪ

ವಿರಹಿಣಿಯ ಸಂತಾಪ

ಚಂದ್ರಮುಖಿಯು ನೀನು ಎಂದು ಬೆಡಗುಗಾರ್ತಿ ಚೆಲುವೆಯೆಂದು
ಸಂದ ಜೀವದಾತ್ಮ ಗೊಂಬೆಯೆಂದು ಪೇಽಳಿ-
ಇಂದು ತರವೆ ಇನಿಯ ಇನಿತು ಕೊರಗಿಸುವುದೊ!

ನೀರೆ ನೀನೆ ಶೂರೆ ಎಂದು ಎನ್ನ ಮೋಹ ಕಲಶವೆಂದು
ಸಾರೆ ಸರಸಿ ತೀರದಲ್ಲಿ ಚೆನ್ನು ಮುತ್ತು-
ಮೀರಿದೊಂದಾನಂದದಿತ್ತು-ಎಲ್ಲಿ ಪೋಽದೆ?

ಊರದೇವರಬ್ಬದಲ್ಲಿ ಬೆಳ್ದಿಂಗಳಾ ಆಟದಲ್ಲಿ
ಸೇರಿದವರು ಈ ದಂಪತಿಗಳಾರು-ಎಂದು,
ಸಾರಿನೋಡೆ ನಾಚಿ ನಡೆದುದನ್ನು ನೆನೆಯೆಯಾ?

ಅಂದು ಪತ್ರದಲ್ಲಿ ನೀನು ಬಣ್ಣನೆಗಳ ಶಬ್ದ ಜಾಲ-
ದಿಂದ ಕರೆದು ಬರುವ ಸುಖದ ಕನಸ ಕಂಡು
ನೊಂದ ನನ್ನ ವಂಚಿಸುವುದು-ನಿನಗೆ ತರಽವೆ?

ಬಡವರೊಲಿದ ನಲ್ಮೆ ಜೀವ ನೈಜ ಸುಖದ ರೂಪು ಅಲ್ಲ-?
ಬಡಿದು ಬಾಳ ಭಾಗ್ಯವನ್ನು ದ್ರೋಹದಿಂದ-
ಪಡೆವ ಅಲ್ಪ ಹುಸಿಯ ಸುಖದ ಕೆಚ್ಚು ಏಽಕೆ?

ಮೂಡುವೆಟ್ಟ ಹತ್ತುವಾಗ ಸೋಗೆ ಕೇಕೆ ಹಾಕುವಾಗ
ಕಾಡಸೊಬಗು ನೋಡಿ ದಣಿದು ಸೇರಿದಾಗ
ಕೂಡಿ ಬಿಡಿಸಿ ಲೋಕ ಸುಖವ ಪೇಳಿದೆಽಲ್ಲಿ?

ಮೊಸರು ಕಡೆದು ಬೆಣ್ಣೆ ತೂಗೆ, ಕಂದ ಜೋ ಜೊ ಲಾಲಿ ಹಾಡೆ
ಹಸಲೆ ಹುಲ್ಲ ಕುಯ್ಯುವಾಗ್ಗೆ ಹಾಡಿದೇನೊ?-
ಹೊಸತು ಜೋಡಿ ಜೀವ ಸುಖದ ಮರೆತೆಯೇನೊ?

ಕೊಲ್ಲಿಗದ್ದೆ ಅರುವಿಗಾಗಿ, ಹೊನಲು ಹರಿವ ಬಯಲಿಗಾಗಿ
ಬಳ್ಳಿ ಮನೆಯ ಕಟ್ಟಿ ನಲಿವ-ಕಾಡು ಸುಽತ್ತಿ
ಮಲ್ಲಳಿಗಳ ಹಾಡ ಕೇಳೆ ನಡೆವ ಬಾಽರೊ!

ಸೂಜಿದಾರ ಹೊತ್ತು ಹೊತ್ತು ಹೊರುವ ಭಾರ ಅದೇ ಆಯ್ತು!
ಜಾಜಿ ಕೋದು ಯಾರ ಕೊರಳಲಿರಿಸಲೆಂದು
ಸೋಜಿಗದಲಿ ನೆನೆದು ನೆನೆದು-ಸೊರಗಿದೆ ನಾ!

ಬಾವಿ ನೀರ ಸೇದುವಾಗ ಎಸರ ಬೇಯ್ಸಿ ತೆಗೆಯುವಾಗ
ಕವಿದ ಮಂಕ ಕಣ್ಣಿನಿಂದ ಒರಸುವಾಗಽ
ಜೀವಿಗಳ ಈ ಹುಸಿಯ ಬಾಳ ನೆನೆವೆ ನಾಽನೊ!

ನಗುತಲಿರು ನೀ, ನಗುವಿನಲ್ಲಿ ಬಾಳ ಸತ್ಯ ಮೂಡಿ ಬರಲಿ-
ಒಗುವ ಸತ್ಯ ನಲುಮೆಯೆಲ್ಲ-ಒಲುಮೆಯಲ್ಲಿ,
ಸೊಗವನೀಕ್ಷಿಸುತಲೆ ಬರಲಿ-ಆಹಾ ಕಾಽಯೋ!

ಸೂರ್ಯ ಕಾಂತಿ ಬೀಳ್ವ ಮುನ್ನ, ಚಂದ್ರ ಬೆಳಕು ತೋರ್ವ ಮುನ್ನ,
ಕಾರ್ಯಲೋಕ ಶಾಂತಿ ತಲ್ಪ ಸೇರ್ವ ಮುಽನ್ನ,
ಭಾರ್ಯೆ ದುಃಖವಳಿಸೆ, ಪ್ರಿಯಾ-ಬಂದು ಸೇಽರೊ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...