Home / ಕವನ / ಕವಿತೆ / ರೊಕ್ಕದ ರೇಸು

ರೊಕ್ಕದ ರೇಸು

ರೊಕ್ಕದ ರೇಸು ಹೊಂಟೈತೆ ತಗೊ
ಸಿಕ್ಕಿದ ದಾರಿಯೆ ಹಿಡಿದೈತೆ

ನನಗೇ ತನಗೇ ಎನ್ನುತ ನುಗ್ಗಿದೆ
ಬಾಚುತ ದೋಚುತ ಗಳಿಸುತ ಬಲಿಯುತ
ಓಡಲಾಗದೇ ಕಂಗೆಟ್ಟವರನು
ತೊತ್ತಳ ತುಳಿಯುತ ಸಾಗೈತೆ

ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ
ಗೂಡು ಇಲ್ಲದೆ ಪಾಡು ಇಲ್ಲದೆ
ನರಳುವ ಮಂದಿ ಹೊರಳಾಡೈತೆ
ತುಳಿಯುವ ಕಾಲಾಗೆ ಬಿದ್ದೈತೆ

ರೊಕ್ಕದ ದಾರ್ಯಾಗೆ ಕರುಣೆಯು ಬತ್ತೈತೆ
ಹೃದಯವು ಕೊರಡೇ ಆಗೈತೆ
ಮಾನವೀಯತೆಯು ಕೊಳಚೆಯ ಸೇರಿದೆ
ಸವಕಲು ನಾಣ್ಯ ಆಗೈತೆ

ನ್ಯಾಯ ನೀತಿಗಳು ಪ್ರೀತಿ ಮಮತೆಗಳು
ಭಾವುಕ ಭ್ರಮೆಗಳ ಗೊಣಗಾಟ
ದೇಶ ಭಕ್ತಿಯೋ ಕವಿಗಳ ರೋಗ
ರೊಕ್ಕದ ಮುಂದೇ ಹುಡುಗಾಟ

ತಾಯಿಯೆ ಆಗಲಿ ತಂದೆಯೆ ಆಗಲಿ
ರೊಕ್ಕದ ಮುಂದೇ ಮುದಿಹದ್ದು
ಅಣ್ಣ ತಮ್ಮಂದಿರು ಅಕ್ಕ ತಂಗಿಯರು
ಮಾತಾಡಿಸಿದರೆ ವಿಷಮದ್ದು

ಸುತ್ತಲ ಜಗತ್ತು ಕಾಣದ ಹಾಂಗೆ
ಕುರುಡನ ಮಾಡುವುದೀ ರೊಕ್ಕ
ದೀನ ವಾಣಿಗಳು ಕೇಳಿಸದ್ಹಾಂಗೆ
ಕಿವುಡನ ಮಾಡುವುದೀ ರೊಕ್ಕ

ಕೋಮಲ ಭಾವನೆ ಮುಟ್ಟದ ಹಾಂಗೆ
ಕೊರಡುಗಟ್ಟಸುವುದೀ ರೂಕ್ಕ
ಎಲ್ಲರ ಸೌಖ್ಯದ ಆದರ್ಶಗಳನು
ತರಗೆಲೆ ಮಾಡುವುದೀ ರೊಕ್ಕ

ನೆಲೆಯೇ ಇಲ್ಲದವರೆಷ್ಟೇ ಇರಲಿ
ನನ್ನ ಸೈಟುಗಳೂರೂರಲ್ಲಿ
ಕಾಲಲ್ಲಿ ನಡೆವರ ಖರ್ಮಗಳಿರಲಿ
ಹಾರುವೆ ನಾ ಕಾರುಗಳಲ್ಲಿ

ಕಾಸಿಗು ಗತಿಯಿಲ್ಲದ ಕೋಟಿ ಜನ
ಕೋಟಿ ಕೋಟಿಗಳು ನನಗಿರಲಿ
ಚಳಿ ಬಿಸಿಲುಗಳಲ್ಲಿ ಒದ್ದಾಡುವ ಜನ
ಏರ್ ಕಂಡಿಷನ್ನು ಮನೆಯಿರಲಿ

ನೌಕರಿಗಾಗಿ ಲಕ್ಷ ಲಕ್ಷಗಳು
ಕೊಡುವೆನು ನನಗೇನಿಲ್ಲ ಭಯ
ವರದಕ್ಷಣೆಗೋ ಎಷ್ಟು ಲಕ್ಷಗಳು
ಕೇಳಲು ನಾಚಿಕೆ ಏಕಯ್ಯ

ಹರಕು ಬಟ್ಟೆಗಳ ಮಕ್ಕಳ ಮುಂದೆ
ನನ್ನ ಮಗಳ ಬರ್ಥ್‌ಡೇ ಪಾರ್ಟಿ
ವಿಧವಿಧ ತಿಂಡಿ ಷೋಕೀ ಮಂದೀ
ಕಣ್ಣುಕುಕ್ಕುಬೇಕು ಈಪಾಟಿ

ಊರಿಗೇ ಊರೇ ನಿಂತು ನೋಡುವುದು
ರೊಕ್ಕುಳ್ಳ ನಮ್ಮ ಮದುವೆಗಳ
ಸಾವಿರಗಟ್ಟಲೆ ತಿಂದೆಂಜಲದೆಲೆ
ಮುತ್ತಬೇಕು ತಿರುಕರ ಜಗಳ

ರೊಕ್ಕ ಮಾಡುವುದು ಒಂದೇ ಮಂತ್ರ
ರೊಕ್ಕ ಗಳಿಸುವುದೆ ನಮ ತಂತ್ರ
ರೊಕ್ಕವಿದ್ದವನೆ ಮನುಷ್ಯ ಲೋಕದಿ
ಇಲ್ಲದವನೆ ಹೆಣ ಅತಂತ್ರ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...