Home / ಕವನ / ಕವಿತೆ / ಅಪೂರ್ವ ಸಂಧ್ಯಾಚಿತ್ರ

ಅಪೂರ್ವ ಸಂಧ್ಯಾಚಿತ್ರ

ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ
ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ
ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ
ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ
ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ
ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವು-
ಬದುಕಿನಾ ಧಗೆಯ ಬಿರು ಹೊಯ್ಲಿನಲಿ, ಭಾರತದ
ಯಾವುದೋ ಮೂಲೆಯಲಿ ಹೊತ್ತಿ ಹಬ್ಬಿದ ಮತ-
ದ್ವೇಷದನಿರೀಕ್ಷಿತದ ಕಾಳ್ಕಿಚ್ಚಿನಿಂದೊಗೆದ
ಹೊಗೆಯ ಹಬ್ಬುಗೆಯ ಮಬ್ಬಿನ ನಿರಾಶೆಯ ಸರ್ವ
ಶೂನ್ಯದಲಿ – ಕಂಡಿದ್ದುದಿಲ್ಲೆನಗೆ ಒಮ್ಮೆಯುಂ
ಸಂಜೆವೆಣ್ಣಿನ ರಾಗಪೂರ್ಣ ಮುಖ ಸರಸಿಜವು.
ಇದ್ದಕಿದ್ದಂತೆಯೇ ಕಂಡೆತೆನಗಿಂದು, ಹಾ!
ದೂರ ಪ್ರತೀಚಿ ದಿಙ್ಮಂಡಲದ ರಾಜ್ಯದಲಿ –
ಕೆಂಪು ಕಡುಗೆಂಪು ಕೆಂಗೆಂಪು ಕಗ್ಗೆಂಪು, ಬರಿ
ಕೆಂಪು – ಹೋಲಿಕೆಗಾಗಿ ಕಲ್ಪನೆಯೆ ಕಂಗೆಟ್ಟು
ಬೇಸತ್ತು ಬಸವಳಿದು ಬಿದ್ದು ರಕ್ತವ ಕಾರೆ,
ಒಡನೆಯೇ ಕಲ್ಪನೆಗೆ ಹೊಳೆಯಿತ್ತು – ಆದೊಡೇಂ,
ಹೋಲಿಕೆಯದಲ್ಲ: ಸಂಧ್ಯಾರಮಣಿ ತಲೆಯಲ್ಲಿ
ತಳೆದ ಬಯ್‌ತಲೆಯ ಮಹ ಮಾಣಿಕದ ಕೆಂಬೆಳಕೊ,
ದಿಗ್ವಧುವಿನಧರ ರಾಗದ ಹರಹೊ – ಎಂಬಿವೇ
ಮೊದಲಪ್ಪ ಕಾವ್ಯದುತ್ಪ್ರೇಕ್ಷೆಗಳ ಹೊಸ ರೂಪ
ತಾನಲ್ಲ: ಅಲ್ಲಲ್ಲಿ ಎಲ್ಲೆಲ್ಲು ನಡೆಯುತಿಹ,
ಯುದ್ಧ ಅಂತಃಕಲಹ ಹಗಲುಕೊಲೆ ಮೊದಲಪ್ಪ
ಘಟನೆಗಳ ಘೋರ ವಾಸ್ತವ ವರ್ಣಚಿತ್ರವದು:
ದಿಕ್ಕು ದಿಕ್ಕುಗಳಿಂದ ಕೆನ್ನೀರ ಕಾಲ್ವೆಗಳು
ಹರಿದು ಬಂದಿಲ್ಲಿ ಹೆಮ್ಮಡುವಾಗಿ ಕೂಡಿಕೊಳೆ,
ಕೆನ್ನೀರ ಕೋಡಿಯಲಿ ತೇಲಿಬಂದಟ್ಟೆಗಳು
ಒಟ್ಟೈಸಿ ನಿಂದಿಹವು: ಇದುವೆ ಪಶ್ಚಿಮ ದಿಶಾ
ಪಟದ ಮೇಲಣ ರಕ್ತ ವರ್ಣ ಚಿತ್ರವದು.

ಇರಲಿರಲು, ನೆತ್ತರ ಸರೋವರದ ನೈದಿಲೆಯೊ
ಎಂಬಂತೆ ಮೂಡಿದನು ಬಾಲ ಶಶಿ: ಮೂಡಿ, ತಾನ್
ನಕ್ಕು ನುಡಿದನು ಇಂತು: “ಧೈರ್‍ಯಗೆಡದಿರು ಗೆಳೆಯ:
ನಂಜುನೆತ್ತರು ಹೊರಗೆ ಬಂದಿತೆಂದೆಂದುಕೊಳು;
ಶಾಂತಿ ಮೂಡುವುದು: ಬರವಸೆಯಾಶೆಗಳ ತಾಳು.”
ಬಾಲಚಂದ್ರನ ಕಾಂತಿ ಕಿರಣಗಳು ನಸು ಬೆಳಗಿ
ಕೆಂಬಣ್ಣ ಮಾಸುತಿರೆ, – ‘ಹುಣ್ಣಿಮೆಯು ಬರದಿಹುದೆ?
ಪೂರ್ಣಚಂದ್ರನು ಪೂರ್ಣ ಕಾಂತಿ ಚಂದ್ರಿಕೆಯನ್ನು
ಚೆಲ್ಲಿ ಸೂಸನೆ?’ – ಎಂಬ ಮಾರ್ದನಿಯು ಮನದಲ್ಲಿ
ಮೊರೆಯುತಿರೆ, ಮರೆಯಾಯ್ತಪೂರ್ವ ಸಂಧ್ಯಾಚಿತ್ರ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...