Home / ಕವನ / ಕವಿತೆ / ನನಗೇನು ಗೊತ್ತು?

ನನಗೇನು ಗೊತ್ತು?

ಚಿತ್ರ: ನಾದಿನೆ ಹಡ್ಸನ್
ಚಿತ್ರ: ನಾದಿನೆ ಹಡ್ಸನ್

ನಾ ಕೇರಿಯವ!
ನನಗೇನು ಗೊತ್ತು?
ಸತ್ತ ದನವ, ಕಿತ್ತು ಕಿತ್ತು…
ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ…
ತಿನ್ನುವುದು ಗೊತ್ತು!
*

ಕೊಳೆಗೇರೀಲಿ
ಹರಕು ಜೋಪಡೀಲಿ
ಚಿಂದಿ ಬಟ್ಟೇಲಿ
ಹಸಿದ ಹೊಟ್ಟೇಲಿ
ಮುರುಕು ಮುದ್ದೆ ತಿಂದು,
ಮಗಿ ನೀರು ಕುಡಿದು,
ನೆಲಕೆ ತಲೆಕೊಟ್ಟು,
ಗೊರಕೆ ಹೊಡೆವುದು ಗೊತ್ತು!!
*

ನಾ ಕೇರಿಯವ!
ಬಾಲ ಕಾರ್‍ಮಿಕನೆಂಬುದೇನು ಗೊತ್ತು?
ಅಕ್ಷರ ಕಲಿಯದೆ,
ಲೋಕಜ್ಞಾನವಿಲ್ಲದೆ,
ಸಿಕ್ಕ ಸಿಕ್ಕಲ್ಲಿ, ಹೆಬ್ಬೆಟ್ಟು ಒತ್ತುವುದು
ಹಳಸಿದ್ದು, ಸೀಕುಪಾಕು, ಮುಸುರೆ,
ಕಲುಷಿತ ನೀರು, ಕುಡಿಬಾರದೆಂದೇನು ಗೊತ್ತು?

ಭಾಗ: ಒಂದು

ಕಂಡ ಕಂಡ ದೇವ್ರಿಗೆ, ಜೆಡ್ಡು ‘ಜಾಪತ್ರೆ’ಗಳಿಗೆ
ಹರಕೆ ಹೊತ್ತು, ಮುಡಿಕಟ್ಟಿ, ‘ಮಿಸಲಾಕಿ’…
ಕುರಿ, ಕೋಣ, ಬಲಿ ಕೊಡುವುದು, ಮಾತ್ರ ಗೊತ್ತು!
ಸಾಲ ಮಾಡಿ, ಜೀತ ಮಾಡಿ,
ಕತ್ತಲ ಕೂಪದಲಿ, ಬರೀ ನೆಲದಲಿ…
ಕೋಳಿ, ನಾಯಿ, ಹಂದಿ, ನೊಣಗಳೊಂದಿಗೆ,
ಈ ಹೊಲಗೇರಿಲಿ, ಪಾಪಕೂಪದಲಿ,
ಬಿದ್ದಿರಲು ವಿಧಿಬರಹ, ದೇವರ ಶಾಪವೆಂದು,
ನಂಬಿಸಿದ್ದು ಮಾತ್ರ, ನನಗೆ ಗೊತ್ತು!
*

ಬಸವನಿಂದೆ ಬಾಲವೆಂಬಂತೇ…
ನಮ್ಮಪ್ಪ, ಅಮ್ಮ, ಅಕ್ಕ, ಅಣ್ಣರ ಹಿಂದಿಂದೆ,
ಜಂಗ್ಳುದನ ಕಾದು, ಕೈಕಟ್ಟಿ, ನಡುಬಗ್ಗಿ…
ಧಣೀಗಳ ಕಸ, ಮುಸರೆ ಎತ್ತಿ,
ಸಗಣಿ, ಗಂಜು ಹೊತ್ತು, ಕತ್ತು ನೋಯಿಸಿಕೊಂಡು,
ಜೀತ ದುಡಿದು, ತಲೆತಗ್ಗಿ…
ಆಲದ ಮರಕೆ, ಕೊರಳೊಡ್ಡುವುದು ಗೊತ್ತು!
*

ಇನ್ನು ಊರು ಕೇರಿಗರ
ಹಳೇ ಮೂಗರ್ಧ ಕಾಲ್ಮಾರಿಗಳ ಹೊಲಿದು,
ಪುಡಿಗಾಸು ಪಡೆದು,
ಅಂಬ್ಲಿ ನೀರು ಕುಡಿದದ್ದು ಗೊತ್ತು!
ಬಿಸಿಲು, ಗಾಳಿ, ಮಳೆ, ಎನ್ನದೆ,
ಹಗಲಿರುಳು ರಟ್ಟೆ ಮುರಿದು,
ನಾಲ್ಕು ‘ದಮ್ಡಿ’ ಗಳಿಸಿ,
ಈಚ್ಲು ಹೆಂಡಾ, ಭಟ್ಟಿ ಸಾರಾಯಿ ‘ಸೆಂಡಿ’
ಹಾಡುತ್ತಾ… ಪಾಡುತ್ತಾ… ಕುಣಿದು… ಕುಪ್ಪಳಿಸಿ…
ಶತ ಶತಮಾನದ ದುಕ್ಕ, ದುಮ್ಮಾನ ಮರೆವುದು ಗೊತ್ತು!

ಭಾಗ: ಎರಡು

ಹೌದೌದು! ನಾ ಕೇರಿಯವ! ತಿಳಿಗೇಡಿ ಎನಬೇಡಿ ಇನ್ನು!
ಈ ಲೋಕದ ಡೊಂಕು, ಕೊಂಕು, ನನಗೆಲ್ಲ ಗೊತ್ತು ಬಿಡಿ!!
ಅಕ್ಷರ ಕಲಿಸದೆ, ಗುಡಿ ಗೋಪುರ, ಹೊಟೆಲ್‌ಗೆ ಸೇರಿಸದೆ,
ಊರಿಂದ ದೂರಿಟ್ಟು, ಮುಖ್ಯವಾಹಿನಿಗೆ ಸೇರಿಸದೆ,
ಹೊತ್ತು ಹೊತ್ತಿಗೆ ತುತ್ತಿಕ್ಕದೆ, ಬೊಗಸೆಗೆ ನೀರಾಕಿ,
ಬರೀ ಮೈಲಿಟ್ಟು, ಗಡ್ಡ, ಮೀಸೆ, ಕೂದಲು ‘ಮಳೆವರೆ’ ಬಿಡಿಸಿ,
ಹಗಲುರಾತ್ರಿ ಕತ್ತೇ ಸಾಕ್ರೀ, ಬಿಟ್ಟಿ ವಗ್ತಾನ ಮಾಡಿಸುವುದು ನಿಮಗೆ ಗೊತ್ತು!

ಭಾಗ: ಮೂರು

ಈಗೀಗ ಅದೇಗೋ… ಅಕ್ಷರ ಕಲಿತು, ಮನುಶ್ಯರಾಗಿದ್ದೇವೆ!
ಗುಡಿ, ಗೋಪುರಕೆ ಕಾಲಿಟ್ಟಿದ್ದೇವೆ! ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇವೆ!!
ನಿಮ ಸಮಕುಂತು, ಊಟ, ತಿಂಡಿ, ಕಾಫಿ ಕುಡಿದು,
ತಲೆಗೂದಲು ಕತ್ತಿರಿಸಿ, ಸೂಟು, ಬೂಟು, ಹಾಕಿಕೊಂಡು,
ನಿಮ್ಮಕತ್ತಿನ ಪಟ್ಟಿ ಹಿಡಿದು, ನ್ಯಾಯ ಕೇಳಿ, ಪ್ರತಿಭಟಿಸಿ,
ದೌರ್ಜನ್ಯಕೆ, ‘ಧಿಕ್ಕಾರ’ ಕೂಗಿ, ಸಂಪು ಹೂಡಿ,
ನಮ್ಮ ಹಕ್ಕು, ಪ್ರತಿಪಾದಿಸುವುದೂ ಗೊತ್ತು!!
ಈ ಊರುಕೇರಿನ ಒಂದೂಗೂಡಿಸಿ,
ದರ್ಜಿಯಾಗಿ, ಹರಿದ ಮನಗಳ, ಹೊಲಿವುದು ಗೊತ್ತು!
ಗಾರೆಯವನಾಗಿ, ಜಾತಿ, ಮತ, ಬಿರುಕಗಳ ಮುಚ್ಚಿ,
ಬಿದ್ದ ಮನೆ, ಮನಗಳ ಕಟ್ಟುವುದೂ ಗೊತ್ತು!
ಕೃಷಿಕನಾಗಿ; ಮಾನವೀಯತೆ, ಅನುಕಂಪ ಬಿತ್ತಿ,
ದಯೆ, ದಾನ, ಧರ್‍ಮಾ, ಕರ್‍ಮಾವೆಂಬಾ ಕಾಳು ಬೆಳೆದು,
ಹಸಿರು, ಉಸಿರು, ಹೆಸರುಗಳಿಸಿ, ನಿಮ್ಮ ಉದ್ಧರಿಸುವುದೂ ಗೊತ್ತು!!
ಮಾಲೀಕನಾಗಿ; ಈ ಹೊಲ, ಮನೆ, ಆಡುವು, ಆಸ್ತಿ, ಸಂಪತ್ತನ್ನು
ಹಂಚಿ, ಸಮಾಜಿಕ ನ್ಯಾಯ, ಒದಗಿಸುವುದೂ ಗೊತ್ತು!
ಗೊತ್ತು… ಗೊತ್ತು…! ನಿಮ್ಮನ್ನು ಮನುಶ್ಯರನ್ನಾಗಿಸುವ ಕಲೆ,
ಶ್ರಮ, ನಮಗೆಲ್ಲ ಗೊತ್ತು! ಗೊತ್ತು!!… ಬೆಚ್ಚಿಬೀಳಿಸುವುದೂ ಗೊತ್ತು!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...