Home / ಕವನ / ಕವಿತೆ / ಎಲ್ಲಿದೆ ಧರ್ಮ

ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ||
ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ
ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧||

ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ
ಬೊಡ್ಡೆಗೆ ಕೊಡಲಿ ಹಾಕುತಲಿದ್ದು ಕೊಂಬೆ ಚಿಗುರಿದವು ಅಂತಾರೆ ||೨||

ನೆಲದಲಿ ಹುಟ್ಟಿದ ಗಿಡಗಳ ಕಿತ್ತುತ ಅಂತರ ಬೆಂತರ ಬೆಳೆಸ್ಯಾರೆ
ಮಣ್ಣೂ ನೀರೂ ತುಳಿದೂ ಹಳಿದೂ ರೊಕ್ಕದಿ ಗಿಡಗಳ ಇಳಿಸ್ಯಾರೆ ||೩||

ಜೀವನ ಮೂಲದಿ ಹೊಮ್ಮಿದ ನಾದದ ಕೋಗಿಲೆ ಕೊರಳನು ಹಿಚಿಕ್ಯಾರೆ
ಸಮಗ್ರ ಬದುಕಿನ ಸುರ ಸಂಗೀತದ ತಂತು ತಂತುಗಳ ತಿರಿಚ್ಯಾರೆ ||೪||

ಬಯಲು ಆಲಯದ ಹಿಡಿಯದ ಲೀಲೆಯ ಗೂಡುಗಳಲಿ ಹಿಡಿದಿಟ್ಟಾರೆ
ಆಕಾರಿಲ್ಲದ ಅಗಮ್ಯ ಗೂಢಕೆ ತೋಚಿದ ಆಕೃತಿ ಕೊಟ್ಟಾರೆ ||೫||

ಹಾಲೂ ಇಲ್ಲಾ ಬಟ್ಟಲು ಇಲ್ಲಾ ಗೊಟಕ್ಕು ಪೂಜೆಯ ಮಾಡ್ಯಾರೆ
ವೇಷ ಮೋಸಗಳ ಕಳ್ಳ ಬಸಿರುಗಳು ಉಬ್ಬಿದ ಅಬ್ಬರ ಮೆರೆಸ್ಯಾರೆ ||೬||

ಝಣ ಝಣ ರೊಕ್ಕದ ಗಂಟೆ ಭೇರಿಗಳ ನಾದದ ಕೇಳುವ ಧರ್ಮಗಳು
ಹಸಿದ ಕೂಸುಗಳ ನೊಂದ ಜೀವಿಗಳ ಕೂಗು ಕೇಳದಾ ಕಿವುಡುಗಳು ||೭||

ಬಣ್ಣ ಬಟ್ಟೆಗಳು ಮಹಲು ಮೆರಗುಗಳು ಮಾತ್ರ ಕಾಣುವವು ಅವುಗಳಿಗೆ
ಹರಕು ಬಟ್ಟೆಗಳು ದುಡಿವ ರಟ್ಟೆಗಳು ಕಾಣದ ಕುರುಡಿದೆ ಅವುಗಳಿಗೆ ||೮||

***

ನಾಮಾ ವಿಭೂತಿಗಳಲ್ಲಿ ಇರುವುದೇ
ಜನಿವಾರ ಜುಟ್ಟುಗಳಲಿದೆಯೇ?
ಗುಡಿಗೋಪುರದಲಿ ಬಸದಿಯಲಿರುವುದೆ
ಮಸೀದಿ ಗೋಡೆಗಳೊಳಗಿದೆಯೇ? ||೯||

ಗುಡಿಗಳ ಒಳಗಿನ ಕಲ್ಲು ಲೋಹಗಳ
ವಿಧ ವಿಧ ವಿಗ್ರಹಗಳಲಿದೆಯೇ?
ನಾಮ ಪಠಣದಲಿ ಜಪಮಾಲೆಗಳಲಿ
ಯಜ್ಞ ಯಾಗಗಳಲಡಗಿದೆಯೇ? ||೧೦||

ಮಡಿಮೈಲಿಗೆಯಲಿ ವ್ರತನೇಮಗಳಲಿ
ಮೂಡ ಭಕ್ತಿಯಲಿ ಕುಳಿತಿದೆಯೇ?
ಊಹಾ ಮೃಗಜಲ ಪುರಾಣ ಕತೆಗಳ
ಶಾಸ್ತ್ರಗಳಡವಿಗಳೊಳಗಿದೆಯೇ? ||೧೧||

ಮಠಗಳ ಸಿಂಹಾಸನಗಳ ಮೇಲೆ
ಛತ್ರ ಚವರಿಗಳ ತಂಪಿನಲಿ
ಪಲ್ಲಕ್ಕಿಗಳಲಿ ಅಟ್ಟಹಾಸದಲಿ
ಮೆರೆಯುತಲಿದೆಯೇ ಸೊಂಪಿನಲಿ? ||೧೨||

****

ಎಲ್ಲಿದೆ ಧರ್ಮಾ ಯಾವುದು ಧರ್ಮಾ
ಏನದು ಧರ್ಮಾ ತೋರಿಸಿರೊ
ಬೆಳಕನು ಹರಡಲು ಹುಟ್ಟಿದ ಧರ್ಮವು
ಕತ್ತಲೆಯನೆ ಹಬ್ಬಿಸದಿರಲಿ ||೧೩||

ಜ್ಞಾನ ದೀವಿಗೆಯು ಮೌಢ್ಯ ಕಂದಕದಿ
ಉಸಿರು ಕಟ್ಟದೆಯೆ ಬದುಕಿರಲಿ
ಮಾನವರೆಲ್ಲರ ಕೂಡಿಸುವ ಬದಲು
ಭೇದಿಸಿ ಕೊಲ್ಲದ ಹಾಗಿರಲಿ
ಮಾನವತೆಯ ಆ ಮೂಲ ಬೇರಿನಲಿ
ತನ್ನಯ ಸಾರವ ಹೀರಿರಲಿ ||೧೪||
********

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ.ಎನ್.ಎಸ್‌. ರಾವ್