Home / ಕವನ / ಕವಿತೆ / ಹೋರಾಟಕೆ

ಹೋರಾಟಕೆ

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ
ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ||

ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು
ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು
ಮುರುಕು ಗುಡಿಸಲಲ್ಲಿ ದೀಪ ಮಿಣುಕು ಕುಟುಕು ಜೀವಕೆ
ಕಣ್ಣ ನೀರ ತೊಡೆದು ಎಣ್ಣೆ ಹೊಯ್ದು ಜ್ವಾಲೆ ಉರಿಸಲು ||೧||

ಹರಕು ತೇಪೆ ಬಟ್ಟೆಗಳಿಗೆ ರಕ್ಷೆ ಕವಚ ಕೊಡಲಿಕೆ
ಒಡಕು ಗಡಿಗೆ ಗಂಜಿಯಗಳ ಅಕ್ಷಯಾನ್ನ ಮಾಡಲಿಕೆ
ಎಲುಬು ಗೂಡು ಸುಕ್ಕು ಚರ್ಮಗಳಲಿ ಶಕ್ತಿ ತುಂಬಲು
ಮಾಂಸ ಭಕ್ಷಕಾಸುರರನು ಮಸಣ ಮನೆಗೆ ನೂಕಲು ||೨||

ಆಕಳಂತೆ ಮೇಕೆಯಂತೆ ಹುಲಿಯು ತೋಳ ಮೆರೆದಿವೆ
ಮೊಲಗಳನ್ನು ಕಚ್ಚಿತಿಂಬ ಹದ್ದುಗದ್ದುಗೇರಿವೆ
ಮತ ಧರ್ಮದ ಮತ್ತಿನಲ್ಲಿ ಯುಗಯುಗಗಳೆ ಕಳೆದಿವೆ
ಕೊಳೆತ ಬಾವಿ ಹಳಸುನಾತ ಕುಡಿಯುತ ಕಾಲೆಳೆದಿವೆ ||೩||

ನಾಮ ಪಟ್ಟಿದಾರ ಜುಟ್ಟುಗಳನು ಒಗೆದು ಬನ್ನಿರೊ
ಕಾವಿ ಬಟ್ಟೆ ಗೂಗೆಗಳನು ದುಡಿವ ಹೊಲಕೆ ತನ್ನಿರೊ
ಪ್ರಜರ ರಾಜರಾಗಿ ಮೆರೆವ ಹದ್ದು ತೋಳ ಹುಲಿಗಳ
ಬಣ್ಣ ಬಯಲಿಗೆಳೆದು ಹರಕು ಗುಡಿಸಲುಗಳಿಗೆಳೆಯಿರೊ ||೪||

ಗಿಳಿಪಾಠದ ಓದು ಓದಿ ಕೂಚು ಭಟ್ಟರಾದೆವೂ
ಕಾಗದ ಕೈಯಲ್ಲಿ ಹಿಡಿದು ಅಲೆವ ತಿರುಕರಾದೆವೂ
ಕುರ್ಚಿಕಾಲು ಹಣದ ಪಾದ ಹಿಡಿದು ಹೊಟ್ಟೆ ಹೊರೆದೆವೊ
ಗಟ್ಟಿಯಾಗಿ ನಗಲು ಬರದೆ ಬೆದರುಗೊಂಬೆಯಾದೆವೊ ||೫||

ಧಮನಿಗಳಲಿ ಉಚ್ಚೆ ನೀರು ಹರಿವರೆಲ್ಲ ಬಿದ್ದಿರಿ
ಕೆಂಪುರಕ್ತ ನಿಮಗಿದ್ದರೆ ಕ್ರಾಂತಿ ಮಾಡಲೆದ್ದಿರಿ
ಕುಷ್ಠರೋಗದಂಥ ಕೊಳೆತ ಪರಂಪರೆಯ ಒದೆಯಿರಿ
ಸಾಕು ಸಾಕು ಹಣದ ಬದುಕು ಹೋರಾಟಕೆ ಕುದಿಯಿರಿ ||೬||
**********************
೧೧.೧೧.೮೬

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...