ಒಣಗುತಿದೆ ನನ್ನ ಪಂಚೆ,
ಒಣಗುತಿದೆ ನನ್ನ ಪಂಚೆ
ಎಲ್ಲಿ ತೊಯ್ಯಿಸಲಿ ಈ ಪಂಚೆ,
ಎಲ್ಲಿ ಒದ್ದಿ ಮಾಡಲಿ ಈ ಪಂಚೆ
ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು
ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯಿಸಲೆ
ನಿಮ್ಮ ಕಣ್ಣೀರೂ ಬತ್ತಿಹುದು
ಸಮೀಪಿಸುತಿದೆ ನನ್ನ ಜೀವನದ ಸಂಜೆ
ಒಣಗುತಿದೆ ನನ್ನ ಪಂಚೆ
ಒಣಗಿದ ಪಂಚೆಯುಟ್ಟು
ಒಣಗಿದ ಕವಿತೆಗಳ ಬರೆಯುತಿರುವೆ
ಗೀಚುತಿರುವೆ,
ಗೀಚಿ ಬರೆಯುತಿರುವೆ
ಕವಿತೆಯಾಗಬಹುದೆಂಬಾಸೆಯಿಂದ
ಎಲ್ಲವೂ ಒಣಗಿವೆ, ಸಂಸಾರದ ತಾಪದ ಬಿಸಿಯಿಂದ
ನಿಮ್ಮ ಉದಾಸೀನತೆಯ
ನಿಟ್ಟುಸಿರಿನ ಕಾವಿನಿಂದ
ಇದು ಎಂಥ ಬರ, ಒಣಗಿವೆ ಎಲ್ಲಾ
ದೇವರೇ ಮಳೆಯಾಗಲಿ
ಮರ ಗಿಡ ಬಳ್ಳಿಗಳು
ಬಯಲೋ ಬಯಲು
ಹುಯಿಲೋ ಹುಯಿಲು
ಇದನು ವರ್ಣಿಸಿ ಕವಿ ಅನ್ನಿಸಿಕೊಳ್ಳಲು ನಾಚಿಕೆಯಾಗುತಿದೆ
ಯಾರಿಗಿಹುದು ನನ್ನ ಒಣಗಿದ ಪಂಚೆಯ ಚಿಂತೆ
ಎಲ್ಲರಿಗೂ ಅವರವರ ದಿನದ ಗಂಜಿಯ ಚಿಂತೆ
ದೇವರೇ, ಮಳೆಯಾಗಲಿ ಬೆಳೆಯಾಗಲಿ, ಎಲ್ಲ ಹಸಿರಾಗಲಿ
ಜಗದ ನೋಟ ಕಣ್ಣಿಗೊಂದು ಹಬ್ಬವಾಗಲಿ,
ನೋಡಿ ವರ್ಣಿಸಿದುದು ಕಬ್ಬವಾಗಲಿ!
ಆದರೆಂದು ತೀರುವದೊ ಈ ಬರ,
ಎಂದು ಚಿಗುರುವದೊ ನಾ ನೆಟ್ಟ ಮರ…
ಮಳೆಯಾದಾಗ ತೊಯ್ಯಿಸಲು ಈ ಪಂಚೆ
ನಾನೇ ಇರದಿರಬಹುದು
ಬಾಳ ಸಂಜೆಯ ದಾಟಿ ದೂರ ಸಾಗಿರಬಹುದು
ಆದರೂ ಪ್ರಾರ್ಥಿಸುವೆ ಮಳೆಯಾಗಲೆಂದು
ನಾನಿದ್ದರೂ ಇರದಿದ್ದರೂ ನಾ
ಬಿಟ್ಟು ಹೋಗುವೆ ನಾನುಟ್ಟ ಪಂಚೆ
ನಾನುಟ್ಟ ಪಂಚೆಯೆಂದು ಅಲಕ್ಷಿಸದಿರಿ,
ಇದು ಕುಮಾರವ್ಯಾಸನುಟ್ಟ ಪಂಚೆ-
ಅವನು ನನಗೆ ಕೊಟ್ಟ ಪಂಚೆ;
‘ಹಲಗೆ ಬಳಪವ ಹಿಡಿಯದೊಂದಗ್ಗಳಿಕೆಯ ಪಂಚೆ’
ಉಟ್ಟು ನೋಡಿರಿ ಮಳೆಯಾದಾಗ –
ನಾ ಹೋಗುವೆ, ಮತ್ತೆ ಬರುವೆ
ಮಳೆ ನೀರಿನ ಹನಿಗಳಾಗಿ ಬೀಳುವೆ –
ಬಿದ್ದು ನಿಮ್ಮ ಬರವ ತೀರಿಸುವೆ
ನಾ ನೆಟ್ಟ ಮರದ ಹೂವಾಗುವೆ.
ಆದರೆ ಆ ಹೂವ ಬಣ್ಣಿಸಲು ಮರೆಯದಿರಿ
ನಿಮ್ಮ ವರ್ಣನೆಯಲಿ ನಾನೊಂದು ಕವನವಾಗುವೆ
ಕವಿಯಾಗದಿದ್ದರೂ ಚಿಂತೆಯಿಲ್ಲ
ನೀವು ಬರೆದ ಕವನವಾದರೂ ಆಗುವೆ
*****
ಕನ್ನಡದ ದಿಗ್ಗಜ ಕವಿ ಕುಮಾರವ್ಯಾಸ ಮಹಾಭಾರತವನ್ನು ರಚಿಸುವ ಮುನ್ನ ಕೆರೆಯಲ್ಲಿ ಮಿಂದು, ಹಾಗೆಯೇ ಒದ್ದೆ ಪಂಚೆಯನ್ನು ಉಟ್ಟು ಪಂಚೆ ಆರಿಹೋಗುವ ತನಕ ಗದಗಿನ ವೀರನಾರಾಯಣ ಗುಡಿಯಲ್ಲಿ ಕುಳಿತುಕೊಂಡು ರಚಿಸುತ್ತಿದ್ದನೆಂದು ಪ್ರತೀತಿ. ಇದನ್ನೇ ಕಾವ್ಯ ಸ್ರೋತದ ಸ್ಫೂರ್ತಿಯ ಸಂಕೇತವನ್ನಾಗಿಟ್ಟುಕೊಂಡು ರಚಿಸಿದ ಕವನ.

















