ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ್ನು ತಿಳಿಸಿ ಹೇಳಿದನು. ಮಾನವ ಕುಲವು ಒಂದೇ ಆಗಿದೆ; ಪರಮಾತ್ಮನ ಸಂಕಲ್ಪದಿಂದ ಹುಟ್ಟಿದ ಈ ಪ್ರಪಂಚದಲ್ಲಿ ಜೀವಾತ್ಮ ಜೀವಾತ್ಮರಲ್ಲಿ ಭೇದವೆಣಿಸಕೂಡದು; ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮದ ಉದ್ಧಾರ ಮಾಡಿಕೊಳ್ಳಲು ಈ ಆಯುಷ್ಯವು ಒಂದು ಸಂದರ್ಭ ಮಾತ್ರ; ಸರಿಯಾಗಿ ತಿಳೆದು ನೋಡಿದರೆ ಈ ಜಗತ್ತು ಮಾಯೆಯೇ ಆಗಿದೆ; ಆದರೆ “ಸತ್ಯಂ ಶಿವಂ ಸುಂದರಂ” ಈ ತಿರುಳನ್ನರಿತು ನೀನು ಸೀತಾಮಾತೆಯನ್ನು ಶ್ರೀ ರಾಮಚಂದ್ರದೇವರಿಗೆ ತಿರುಗಿ ಒಯ್ದು ಕೊಟ್ಟು ಮುಕ್ತಿಯನ್ನು ಪಡೆಯು ವಂಥವನಾಗು.
ಈ ಪ್ರವಚನವನ್ನು ಕೇಳಿ ರಾವಣನು ಹತ್ತು ಮುಖಗಳಿಂದ ದಿಗ್ಗಜಗಳು ನುಗ್ಗಾಗುವಂತೆ ಗಹಗಹಿಸಿದನು. ಅನಿರೀಕ್ಷಿತ ಆ ಅಟ್ಟಹಾಸಕ್ಕೆ ಮಾರುತಿಯು ಮಂಕು ಬಡಿದುಹೋದನು. ದಶಮುಖಗಳಿಂದ ಈ ಮಾತು ಹೊರಟವು.
“ಮಾನವ ಕುಲವು ಒಂದೇ ಎಂದು ನಂಬಿ ಜೀವಾತ್ಮರಲ್ಲಿ ಭೇದ ವೆಣಿಸದೆ ಶುದ್ಧ ಹೃದಯದಿಂದಲೇ ಸೀತೆಯನ್ನು ತಂದಿದ್ದೇನೆ. ಮಂಡೋದರಿಯ ಆತ್ಮವನ್ನೂ ಸೀತೆಯ ಆತ್ಮವನ್ನೂ ಒಂದೇ ರೀತಿಯಿಂದ ಕಾಣುತ್ತೇನೆ. ಈ ಜಗತ್ತೇ ಮಾಯೆಯಾಗಿರಲು, ನಾನು ರಾಮನ ಮಡದಿಯನ್ನು ತಂದುದಕ್ಕಾಗಿ ಆತನು ವಿಷಾದಿಸಬೇಕಾಗಿಲ್ಲ. ಈ ಘಟನೆಯೂ ಒಂದು ಮಾಯೆ, ಪರಮಾತ್ಮನ ಸಂಕಲ್ಪ ಎಂದು ತಿಳಿದು ಸುಖವಾಗಿರಲು ಹೇಳು ನಿನ್ನೊಡಯನಿಗೆ. ನನ್ನಾತ್ಮವೂ ಅವನಾತ್ಮವೂ ಒಂದೇ ಎಂಬುದನ್ನು ನಾನು ಬಲ್ಲೆ. ಸುಂದರವಾದುದನ್ನು ಆರಾಧಿಸುವುದೇ ಸತ್ಯದ ಸಾಕ್ಷಾತ್ಕಾರದ ಮಾರ್ಗ. ಅದರಿಂದಲೇ ಶಿವನ ಸಾನ್ನಿಧ್ಯ ಸಾಧ್ಯ- ಇವೆಲ್ಲವೂ ನನಗೆ ವಿದಿತವೇ ಇವೆ. ಕಾರಣ ನೀನು ನೇರವಾಗಿ ಮರಳಿ ರಾಮಚಂದ್ರನಿಗೆ ಇವುಗಳನ್ನೆಲ್ಲ ವಿವರಿಸಿ ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮವನ್ನು ಉದ್ದಾರ ಮಾಡಿ ಕೊಳ್ಳಲು ಹೇಳು.”
ಚಕಾರ ಮಾರ್ ನುಡಿಯದೆ ಮಾರುತಿಯು ಮರಳಿ ಬಂದನು.
ಮರುದಿನವೇ ಲಂಕೆಗೆ ಸೇತು ಕಟ್ಟಲು ಸುರುವಾಯಿತು.
*****








