ಶಾಂತಿ ಸೌರಭ ಮಿಲಿತ, ಲಲಿತ ಹರ್ಷೊತ್ಕಲಿತ,
ಮುದಿತ ಶುಕ-ಪಿಕ-ಶಾರಿಕಾದಿ ಪಕ್ಷಿಸ್ತೋಮ
ಕಲಕಲ ನಿನಾದಯುತ, ವಿವಿಧ ಪುಷ್ಪಿತ ಕುಸುಮ
ನಿಚಯ ಮಧು ಸಂಗ್ರಹೋದ್ಯುಕ್ತ ಷಟ್ಪದ ನದಿತ,
ಶುದ್ಧ ಪುಣ್ಯಾರಣ್ಯ ಭೂಮಿಯೆಸೆವುದದೊಂದು
ಅಲ್ಲಿ ಕುಲಪತಿಯೋರ್ವನಿರುವ ಸಾರಸ್ವತಾ-
ರಾಧನೋದ್ಯೋಗ ತತ್ಪರನಾಗಿ. ಅವನು ತಾ-
ನೋರ್ವನೇ ಹತ್ತು ಸಾವಿರ ಮಂದಿ ಮುನಿ ಬಂಧು
ಶಿಕ್ಷಾರ್ಥಿ-ವಿದ್ಯಾರ್ಥಿ ವೃ೦ದಕ್ಕೆ ಸರಿಯಾಗಿ
ಅನ್ನ-ವಸ್ತ್ರಾದಿಗಳನಿತ್ತು, ವೇತನ ರಹಿತ
ಶಿಕ್ಷಣಾಧ್ಯಾಪನವನೊಲಿದೆಸಗುವನು ಸತತ.
ಸೌಲಭ್ಯಕಾಗಿ ಶಿಷ್ಯರು ಪರಸ್ಪರವಾಗಿ
ಸಹಕರಿಸುತಿರಬಹುದು. ನೃಪಸಾಹ್ಯವಿರಬಹುದು.
ಪೂರ್ವಿಕರ ವಿಶ್ವವಿದ್ಯಾನಿಲಯವಿದು! ಸಾಧು!!
*****
೧೯೩೮
“ಮುನೀನಾಂ ದಶ ಸಾಹಸ್ರಂ ಯೋನ್ನದಾನಾದಿಭಿಃ ಸದಾ|
ಅಧ್ಯಾಪಯತಿ ವಿಪ್ರರ್ವೀರಸೌ ಕುಲಪತಿಃ ಸ್ಮೃತಃ||”
(ಹತ್ತು ಸಾವಿರ ಮುನಿಗಳಿಗೆ ಅನ್ನದಾನ ಮೊದಲಾದವುಗಳಿಂದ ಯಾವಾಗಲೂ ವಿದ್ಯೆ ಹೇಳಿಕೊಡುತ್ತಿರುವ ಬ್ರಾಹ್ಮಣ ಋಷಿಗೆ `ಕುಲಪತಿ’ ಯೆಂದು ಹೆಸರು.)
‘ಅಭಿಜ್ಞಾನ ಶಾಕುಂತಲ’ ದ ಕಣ್ವನು ಇಂತಹ ಕುಲಪತಿಯು.

















