Home / ಕವನ / ಅನುವಾದ / ಕನಕಾಂಗಿ

ಕನಕಾಂಗಿ

ಭಾವಗಳು, ರಾಗಗಳು, ಬಗೆಬಗೆಯ ಭೋಗಗಳು,
ಆವಾವುವಲೆಯುವುವು ಮನುಜನೆದೆಯ,
ಕಾಮರಾಯಂಗೆಲ್ಲ ಕುಲಪುರೋಹಿತರಾಗಿ
ಹೋಮಾಗ್ನಿಯನು ಬೀಸಿ ಕೆರಳಿಸುವುವು.
ನೆನೆನೆನೆದು ಮೈಮರೆತು ನಲಿಯುವೆನು ಮತ್ತೆಮ
ತ್ತನುಭವಿಸಿ ಆ ದಿನದ ಸುಖದ ಹೊತ್ತ,
ಅಂದು ಬೆಟ್ಟದ ತುದಿಯ ಮುರುಕುದೇಗುಲದಲ್ಲಿ
ತಂದು ವಿಧಿ ನನಗಿತ್ರ ಪ್ರೇಮನಿಧಿಯ!
ಸಂಜೆಬೆಳಕುಗಳೊಡನೆ ಸುಳಿದು ಮೆಲ್ಲನೆ ಬೆರೆದು
ರಂಜಿಸಿತು ನಾಲ್ದೆಸೆಗೆ ಬೆಳದಿಂಗಳು;
ಅವಳು ಇದ್ದಳು ಅಲ್ಲಿ, ನನ್ನ ಮೋಹದ ಹೆಣ್ಣು,
ನನ್ನಾಶೆ, ಕನಕಾಂಗಿ, ನನ್ನ ಜೀವ!
ಹಿರಿದ ಖಡವ ಪಿಡಿದ ವೀರಪುರುಷನದೊಂದು
ಕರಿಶಿಲೆಯ ವಿಗ್ರಹವ ನೆಮ್ಮಿನಿಂತು,
ಅಲುಗದೆಯೆ ನಾನು ಹಾಡಿದ ಪದವ ಕೇಳಿದಳು,
ತೊಲಗದೆಯೆ ತಂಗಿದ್ದ ಬೆಳಕಿನೊಳಗೆ.
ತನ್ನ ದಾಗೊಂದರಿಯಳವಳು ಕೊರಗೆಂಬುದನು.
ನನ್ನಾಸೆ, ಕನಕಾಂಗಿ, ನನ್ನ ಜೀವ!
ಅವಳಿಗೆನ್ನಲಿ ಮೆಚ್ಚು ಹೆಚ್ಚು, ನಾ ಹಾಡಿದರೆ
ಅವಳನೆದೆಗರಗಿಸುವ ಹಾಡುಗಳನು.
ಮೃದುವಾಗಿ ದುಃಖರಾಗವನ್ನೆತ್ತಿ ನುಡಿಸಿದೆನು,
ಮೃದುವಾಗಿ ಹಾಡಿದೆನು ಕರುಣಕಥೆಯ,
ಆ ಹಳೆಯ ಪಾಳುದೇಗುಲಕೆ ತಕ್ಕುದಿದೆಂಬ
ಮೋಹತಾಪವನೊರೆವ ಪ್ರೇಮಪದವ.
ಕೆನ್ನೆಯಲಿ ಕೆಂಪು ಬಿಳುಪನು ಸುಳಿಸಿ ಕೇಳಿದನು,
ಕಣ್ಣ ನಾಚಿಕೆಪಟ್ಟು ನೆಲದಲಿಟ್ಟು;
ತನ್ನ ಮುಖವನು ಬಿಡದೆ ನಾ ನೊಡದಿರಲಾರೆ
ನೆನ್ನುವುದ ತಾನೆಲ್ಲ ಬಲ್ಲಳವಳು.
ಹೇಳಿದೆನು ಖಡ್ಗವನು ಝಳಪಿಸುತ ರಣರಂಗ
ದಾಳುಗಳನುಡುಗಿಸುವ ವೀರನವನು
ಒತ್ತಿನರಸಿನ ಮಗನೊಲಿಸಲಾರದೆ ಮಿಡುಕಿ
ಹತ್ತು ವರುಷಗಳಿಂದ ಬೆಂದ ಪರಿಯ;
ಹೇಳಿದೆನು ಬಳಿಕವನು ನವೆದುಹೋದುದನಾಹ!
ಕೀಳುದನಿಯಲಿ, ಬೇತು, ಬಿಸುಸುಯುತ,
ಇನ್ನೊಬ್ಬನೊಲುಮೆಯನು ನಾನು ಹಾಡಿದ ಬಗೆಯ
ನನ್ನೊಲುಮೆಬೇಗೆಯನು ತೆರೆದರುಹಿತು.
ಕೆನ್ನೆಯಲಿ ಕೆಂಪು ಬಿಳುಪನು ಸುಳಿಸಿ ಕೇಳಿದಳು,
ಕಣ್ಣ ನಾಚಿಕೆಪಟ್ಟು ನೆಲದಲಿಟ್ಟು;
ಬಿಡದೆ ಮುಖವನೆ ನೋಡಿ, ಮುದ್ದ ಕಣ್ಣಲಿ ಬೇಡಿ,
ನಿಡುಸುಯ್ದು ನುಡಿವೆನ್ನ ಮನ್ನಿಸಿದಳು.
ಮರಳಿ ಮುಂದಕೆ ಕಥೆಯ ಹೇಳಿದೆನು-ದೊರೆಮಗಳು
ಜರೆದು ನಿಷ್ಕರುಣದಲಿ ನೂಕಿಬಿಡಲು,
ಅಡವಿಯೊಳಗಾ ವೀರಚೆನ್ನಿಗನು ಹುಚ್ಚು ಹಿಡಿ
ದೆಡೆಬಿಡದೆ ಹಗಲಿರುಳು ತೊಳಲಿದುದನು.
ಒಮ್ಮೆ ಹುಲಿ ಕೆಡೆದಿರುವ ಗಿರಿಯ ಗುಹೆಯೆಡೆಯಲ್ಲಿ,
ಒಮ್ಮೆ ಕತ್ತಲೆ ಕವಿದ ಮೆಳೆಗಳಲ್ಲಿ
ಒಮ್ಮೆ ಬಿಸಿಲೊರಗಿರುವ ಹಸುರು ಕಣಿವೆಗಳಲ್ಲಿ,
ಬಿಮ್ಮನಲ್ಲಲ್ಲೆದ್ದು, ಬಂದು ಬಂದು,
ಅವನ ಕಣ್ಣೆದಿರಾಗಿ ನಿಲ್ಲುವುದು, ನೋಡುವುದು
ನವಕಲಾವೈಭವದ ರೂಪವೊಂದು!
ಅದನಟ್ಟಿಕೊಳ್ಳುವನು – “ಹೋಹೋ! ರಾಕ್ಷಸಿ” ಎಂದು
ಬೆದರಿಕೊಳ್ಳುವನಕಟ ಆ ವೀರನು.
ಮಾಡುತಿಹುದೇನೆಂದು ತಿಳಿಯದೆಯೆ, ಅವನೊಮ್ಮೆ
ಕಾಡಕಳ್ಳರ ಪಡೆಯ ನಡುವೆ ನೆಗೆದು,
ಅವರು ಹಿಡಿದೆಳೆತಂದ ಹೆಣ್ಣೊಂದ ಸಲಹಿದನು;
ಅವಳೆ ಆ ಕಲ್ಲೆದೆಯ ದೊರೆಯ ಮಗಳು!
ಆಗ ಮನಗರಗಿದಳು; ಆಗ ಕಂಬನಿಗೆರೆದ
ಳಾಗ ಬೇಡಿದಳೆನ್ನ ಮನ್ನಿಸೆಂದು;
ತಂದು ಗವಿಯಲ್ಲಿರಿಸಿ, ಆರೈಕೆ ಮಾಡಿದಳು
ಎಂದೋ ಬಿರಿದೆದೆಯ ಹೊಂದಿಸುವೆನೆಂದು.
ನಲ್ಲೆಯೊಲುಮೆಯ ಮಾತು, ಸಲ್ಲಸಲ್ಲುತ ಸೋತು,
ಮೆಲ್ಲಮೆಲ್ಲನೆ ಹುಚ್ಚು ತೊಲಗಿಹೋಯ್ತು;
ತೊಲಗಿಹೋಯ್ತದರೊಡನೆ ಹಣ್ಣೆಲೆಯ ಮೇಲೊರಗಿ,
ನಲುಗಿ ಬಲುನೊಂದಿದ್ದ ಜೀವದುಸಿರು.
ಮರಣಕಾಲದ ಮಾತ ಹೇಳತೊಡಗಿದೆನಾಹ!
ಕರುಣದಲಿ ಕುಸಿದುಹೋಯ್ತೆನ್ನ ಕೊರಳು;
ಜಾರಿ ಬಿದ್ದುದು ವೀಣೆ; ನನ್ನ ಬೆಡಗಿಯ ಹೃದಯ
ಮಾರಿ ಕುದಿಕುದಿದುಕ್ಕಿ ಸುರಿದುಹೋಯ್ತು.
ಮನವ ದೇಹವನಲೆವ ಚಿಮುಗೆಗಳೊಂದಾಗಿ
ಘನಸಹಜದಂಗನೆಯ ಕೆರಳಿಸಿದುವು:-
ಸವಿಯ ವೀಣಾಗಾನ, ಕನಿಕರದ ಪ್ರೇಮಕಥೆ,
ಕವಿದ ಕಂಪಿನ ಸಿರಿಯ ಹೊಳೆವ ಸಂಜೆ;
ಆಶೆಗಳು; ಆಶೆಯನು ಕನಲಿಸುವ ವಿಘ್ನಗಳು;
ಆಶೆಯೊಳಗಡಗಿಹೋಗುವ ಭಯಗಳು;
ಬಹುಕಾಲ ಮನಸಿನಲೆ ಮರಸಿದ್ದು ಬೆಳಸಿದ್ದ,
ಬಹುಕಾಲ ಬೆಳಸಿದ್ದ ವಾಂಛಿತಗಳು.
ಮೇರೆಮೀರುವ ಕರುಣ ಹರ್ಷ ಪ್ರೇಮಗಳೊಡನೆ
ಹೋರಿದಳು ಹೊಸಹೆಣ್ಣು ಲಜ್ಜೆಯಿಂದ;
ಮಲ್ಲಿಗೆಯ ಬಿರಿಮುಗುಳಮೇಲೆ ಬರುವೆಲರಂತೆ
ಮೆಲ್ಲನುಲಿದಳು ಕಡೆಗೆ ನನ್ನ ಹೆಸರ.
ನಿಡುಸುಯ್ಲಿಗುಬ್ಬಿದೆದೆಯನು ಮುಸುಕಿ, ಒಕ್ಕಡೆಗೆ
ನಡೆದು ಹದುಗಿದಳೆನಗೆ ಕಾಣದಂತೆ;
ತಿರುಗಿ ಹಾಗೆಯೆ ತಾನೆ ನೆಟ್ಟನೆನ್ನಯ ಬಳಿಗೆ
ಹರಿದುಬಂದಳು ಹನಿಯ ಕಣ್ಣ ಚೆನ್ನೆ.
ಮೆತ್ತನೆಯ ತೋಳಿನೊಳಗರೆಬಳಸಿಕೊಂಡೆನ್ನ
ನೆತ್ತಿದಳು ತನ್ನೆದೆಗೆ, ಅಳುಕಿ ಬಳುಕಿ;
ತಲೆಯ ಹಿಂದಕೆ ಸರಿದು, ಕತ್ತೆತ್ತಿ, ನೋಟವನು
ನಿಲಿಸಿದಳು ನಾಟಿದಂತೆನ್ನ ಮುಖದಿ.
ಒಂದು ಕಡೆ, ಅದು ಮೋಹ; ಒಂದು ಕಡೆ, ಸಂದೇಹ;
ಒಂದು ಕಡೆ, ಲಜ್ಜೆಯೇ ಬಲ್ಲ ಬೆಡಗು;
ಕಣ್ಣಿನಲಿ ಕಾಣದಯೆ, ಸೋಕಿನಿಂದಲೆ ತಿಳಿಯ
ಲೆನ್ನ ಹೃದಯದ ಪದರನೆಂಬ ಚದುರು.
ಬಿಡಿಸಿದೆನು ಭೀತಿಯನು, ನೆಡಿಸಿದೆನು ಶಾಂತಿಯನು,
ನುಡಿಸಿದೆನು ಹೆಮ್ಮೆಯಲಿ ಹಳೆಯೊಲವನು;
ಪಡೆದೆ ನಾನಿಂತೆನ್ನ ಮಡದಿ ಕನಕಾಂಗಿಯನು,
ಕಡುಚೆಲುವು ಹೊಳೆದೆಸೆವ ನವವಧುವನು.
*****
COLERIDGE (1772-1834) : Love
Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...