Home / ಕವನ / ಅನುವಾದ / ಕನಕಾಂಗಿ

ಕನಕಾಂಗಿ

ಭಾವಗಳು, ರಾಗಗಳು, ಬಗೆಬಗೆಯ ಭೋಗಗಳು,
ಆವಾವುವಲೆಯುವುವು ಮನುಜನೆದೆಯ,
ಕಾಮರಾಯಂಗೆಲ್ಲ ಕುಲಪುರೋಹಿತರಾಗಿ
ಹೋಮಾಗ್ನಿಯನು ಬೀಸಿ ಕೆರಳಿಸುವುವು.
ನೆನೆನೆನೆದು ಮೈಮರೆತು ನಲಿಯುವೆನು ಮತ್ತೆಮ
ತ್ತನುಭವಿಸಿ ಆ ದಿನದ ಸುಖದ ಹೊತ್ತ,
ಅಂದು ಬೆಟ್ಟದ ತುದಿಯ ಮುರುಕುದೇಗುಲದಲ್ಲಿ
ತಂದು ವಿಧಿ ನನಗಿತ್ರ ಪ್ರೇಮನಿಧಿಯ!
ಸಂಜೆಬೆಳಕುಗಳೊಡನೆ ಸುಳಿದು ಮೆಲ್ಲನೆ ಬೆರೆದು
ರಂಜಿಸಿತು ನಾಲ್ದೆಸೆಗೆ ಬೆಳದಿಂಗಳು;
ಅವಳು ಇದ್ದಳು ಅಲ್ಲಿ, ನನ್ನ ಮೋಹದ ಹೆಣ್ಣು,
ನನ್ನಾಶೆ, ಕನಕಾಂಗಿ, ನನ್ನ ಜೀವ!
ಹಿರಿದ ಖಡವ ಪಿಡಿದ ವೀರಪುರುಷನದೊಂದು
ಕರಿಶಿಲೆಯ ವಿಗ್ರಹವ ನೆಮ್ಮಿನಿಂತು,
ಅಲುಗದೆಯೆ ನಾನು ಹಾಡಿದ ಪದವ ಕೇಳಿದಳು,
ತೊಲಗದೆಯೆ ತಂಗಿದ್ದ ಬೆಳಕಿನೊಳಗೆ.
ತನ್ನ ದಾಗೊಂದರಿಯಳವಳು ಕೊರಗೆಂಬುದನು.
ನನ್ನಾಸೆ, ಕನಕಾಂಗಿ, ನನ್ನ ಜೀವ!
ಅವಳಿಗೆನ್ನಲಿ ಮೆಚ್ಚು ಹೆಚ್ಚು, ನಾ ಹಾಡಿದರೆ
ಅವಳನೆದೆಗರಗಿಸುವ ಹಾಡುಗಳನು.
ಮೃದುವಾಗಿ ದುಃಖರಾಗವನ್ನೆತ್ತಿ ನುಡಿಸಿದೆನು,
ಮೃದುವಾಗಿ ಹಾಡಿದೆನು ಕರುಣಕಥೆಯ,
ಆ ಹಳೆಯ ಪಾಳುದೇಗುಲಕೆ ತಕ್ಕುದಿದೆಂಬ
ಮೋಹತಾಪವನೊರೆವ ಪ್ರೇಮಪದವ.
ಕೆನ್ನೆಯಲಿ ಕೆಂಪು ಬಿಳುಪನು ಸುಳಿಸಿ ಕೇಳಿದನು,
ಕಣ್ಣ ನಾಚಿಕೆಪಟ್ಟು ನೆಲದಲಿಟ್ಟು;
ತನ್ನ ಮುಖವನು ಬಿಡದೆ ನಾ ನೊಡದಿರಲಾರೆ
ನೆನ್ನುವುದ ತಾನೆಲ್ಲ ಬಲ್ಲಳವಳು.
ಹೇಳಿದೆನು ಖಡ್ಗವನು ಝಳಪಿಸುತ ರಣರಂಗ
ದಾಳುಗಳನುಡುಗಿಸುವ ವೀರನವನು
ಒತ್ತಿನರಸಿನ ಮಗನೊಲಿಸಲಾರದೆ ಮಿಡುಕಿ
ಹತ್ತು ವರುಷಗಳಿಂದ ಬೆಂದ ಪರಿಯ;
ಹೇಳಿದೆನು ಬಳಿಕವನು ನವೆದುಹೋದುದನಾಹ!
ಕೀಳುದನಿಯಲಿ, ಬೇತು, ಬಿಸುಸುಯುತ,
ಇನ್ನೊಬ್ಬನೊಲುಮೆಯನು ನಾನು ಹಾಡಿದ ಬಗೆಯ
ನನ್ನೊಲುಮೆಬೇಗೆಯನು ತೆರೆದರುಹಿತು.
ಕೆನ್ನೆಯಲಿ ಕೆಂಪು ಬಿಳುಪನು ಸುಳಿಸಿ ಕೇಳಿದಳು,
ಕಣ್ಣ ನಾಚಿಕೆಪಟ್ಟು ನೆಲದಲಿಟ್ಟು;
ಬಿಡದೆ ಮುಖವನೆ ನೋಡಿ, ಮುದ್ದ ಕಣ್ಣಲಿ ಬೇಡಿ,
ನಿಡುಸುಯ್ದು ನುಡಿವೆನ್ನ ಮನ್ನಿಸಿದಳು.
ಮರಳಿ ಮುಂದಕೆ ಕಥೆಯ ಹೇಳಿದೆನು-ದೊರೆಮಗಳು
ಜರೆದು ನಿಷ್ಕರುಣದಲಿ ನೂಕಿಬಿಡಲು,
ಅಡವಿಯೊಳಗಾ ವೀರಚೆನ್ನಿಗನು ಹುಚ್ಚು ಹಿಡಿ
ದೆಡೆಬಿಡದೆ ಹಗಲಿರುಳು ತೊಳಲಿದುದನು.
ಒಮ್ಮೆ ಹುಲಿ ಕೆಡೆದಿರುವ ಗಿರಿಯ ಗುಹೆಯೆಡೆಯಲ್ಲಿ,
ಒಮ್ಮೆ ಕತ್ತಲೆ ಕವಿದ ಮೆಳೆಗಳಲ್ಲಿ
ಒಮ್ಮೆ ಬಿಸಿಲೊರಗಿರುವ ಹಸುರು ಕಣಿವೆಗಳಲ್ಲಿ,
ಬಿಮ್ಮನಲ್ಲಲ್ಲೆದ್ದು, ಬಂದು ಬಂದು,
ಅವನ ಕಣ್ಣೆದಿರಾಗಿ ನಿಲ್ಲುವುದು, ನೋಡುವುದು
ನವಕಲಾವೈಭವದ ರೂಪವೊಂದು!
ಅದನಟ್ಟಿಕೊಳ್ಳುವನು – “ಹೋಹೋ! ರಾಕ್ಷಸಿ” ಎಂದು
ಬೆದರಿಕೊಳ್ಳುವನಕಟ ಆ ವೀರನು.
ಮಾಡುತಿಹುದೇನೆಂದು ತಿಳಿಯದೆಯೆ, ಅವನೊಮ್ಮೆ
ಕಾಡಕಳ್ಳರ ಪಡೆಯ ನಡುವೆ ನೆಗೆದು,
ಅವರು ಹಿಡಿದೆಳೆತಂದ ಹೆಣ್ಣೊಂದ ಸಲಹಿದನು;
ಅವಳೆ ಆ ಕಲ್ಲೆದೆಯ ದೊರೆಯ ಮಗಳು!
ಆಗ ಮನಗರಗಿದಳು; ಆಗ ಕಂಬನಿಗೆರೆದ
ಳಾಗ ಬೇಡಿದಳೆನ್ನ ಮನ್ನಿಸೆಂದು;
ತಂದು ಗವಿಯಲ್ಲಿರಿಸಿ, ಆರೈಕೆ ಮಾಡಿದಳು
ಎಂದೋ ಬಿರಿದೆದೆಯ ಹೊಂದಿಸುವೆನೆಂದು.
ನಲ್ಲೆಯೊಲುಮೆಯ ಮಾತು, ಸಲ್ಲಸಲ್ಲುತ ಸೋತು,
ಮೆಲ್ಲಮೆಲ್ಲನೆ ಹುಚ್ಚು ತೊಲಗಿಹೋಯ್ತು;
ತೊಲಗಿಹೋಯ್ತದರೊಡನೆ ಹಣ್ಣೆಲೆಯ ಮೇಲೊರಗಿ,
ನಲುಗಿ ಬಲುನೊಂದಿದ್ದ ಜೀವದುಸಿರು.
ಮರಣಕಾಲದ ಮಾತ ಹೇಳತೊಡಗಿದೆನಾಹ!
ಕರುಣದಲಿ ಕುಸಿದುಹೋಯ್ತೆನ್ನ ಕೊರಳು;
ಜಾರಿ ಬಿದ್ದುದು ವೀಣೆ; ನನ್ನ ಬೆಡಗಿಯ ಹೃದಯ
ಮಾರಿ ಕುದಿಕುದಿದುಕ್ಕಿ ಸುರಿದುಹೋಯ್ತು.
ಮನವ ದೇಹವನಲೆವ ಚಿಮುಗೆಗಳೊಂದಾಗಿ
ಘನಸಹಜದಂಗನೆಯ ಕೆರಳಿಸಿದುವು:-
ಸವಿಯ ವೀಣಾಗಾನ, ಕನಿಕರದ ಪ್ರೇಮಕಥೆ,
ಕವಿದ ಕಂಪಿನ ಸಿರಿಯ ಹೊಳೆವ ಸಂಜೆ;
ಆಶೆಗಳು; ಆಶೆಯನು ಕನಲಿಸುವ ವಿಘ್ನಗಳು;
ಆಶೆಯೊಳಗಡಗಿಹೋಗುವ ಭಯಗಳು;
ಬಹುಕಾಲ ಮನಸಿನಲೆ ಮರಸಿದ್ದು ಬೆಳಸಿದ್ದ,
ಬಹುಕಾಲ ಬೆಳಸಿದ್ದ ವಾಂಛಿತಗಳು.
ಮೇರೆಮೀರುವ ಕರುಣ ಹರ್ಷ ಪ್ರೇಮಗಳೊಡನೆ
ಹೋರಿದಳು ಹೊಸಹೆಣ್ಣು ಲಜ್ಜೆಯಿಂದ;
ಮಲ್ಲಿಗೆಯ ಬಿರಿಮುಗುಳಮೇಲೆ ಬರುವೆಲರಂತೆ
ಮೆಲ್ಲನುಲಿದಳು ಕಡೆಗೆ ನನ್ನ ಹೆಸರ.
ನಿಡುಸುಯ್ಲಿಗುಬ್ಬಿದೆದೆಯನು ಮುಸುಕಿ, ಒಕ್ಕಡೆಗೆ
ನಡೆದು ಹದುಗಿದಳೆನಗೆ ಕಾಣದಂತೆ;
ತಿರುಗಿ ಹಾಗೆಯೆ ತಾನೆ ನೆಟ್ಟನೆನ್ನಯ ಬಳಿಗೆ
ಹರಿದುಬಂದಳು ಹನಿಯ ಕಣ್ಣ ಚೆನ್ನೆ.
ಮೆತ್ತನೆಯ ತೋಳಿನೊಳಗರೆಬಳಸಿಕೊಂಡೆನ್ನ
ನೆತ್ತಿದಳು ತನ್ನೆದೆಗೆ, ಅಳುಕಿ ಬಳುಕಿ;
ತಲೆಯ ಹಿಂದಕೆ ಸರಿದು, ಕತ್ತೆತ್ತಿ, ನೋಟವನು
ನಿಲಿಸಿದಳು ನಾಟಿದಂತೆನ್ನ ಮುಖದಿ.
ಒಂದು ಕಡೆ, ಅದು ಮೋಹ; ಒಂದು ಕಡೆ, ಸಂದೇಹ;
ಒಂದು ಕಡೆ, ಲಜ್ಜೆಯೇ ಬಲ್ಲ ಬೆಡಗು;
ಕಣ್ಣಿನಲಿ ಕಾಣದಯೆ, ಸೋಕಿನಿಂದಲೆ ತಿಳಿಯ
ಲೆನ್ನ ಹೃದಯದ ಪದರನೆಂಬ ಚದುರು.
ಬಿಡಿಸಿದೆನು ಭೀತಿಯನು, ನೆಡಿಸಿದೆನು ಶಾಂತಿಯನು,
ನುಡಿಸಿದೆನು ಹೆಮ್ಮೆಯಲಿ ಹಳೆಯೊಲವನು;
ಪಡೆದೆ ನಾನಿಂತೆನ್ನ ಮಡದಿ ಕನಕಾಂಗಿಯನು,
ಕಡುಚೆಲುವು ಹೊಳೆದೆಸೆವ ನವವಧುವನು.
*****
COLERIDGE (1772-1834) : Love
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...