ಬೂದನಿಗೆ ಬಾಸಿಂಗ, ಭೂಮಿ ತಾಯಿಗೆ ದಂಡೆ
ಸಾಲ ಶರಣರಿಗೆ ಸರಮಾಲೆ || ಕಟಿಗೊಂಡು
ಮಾದಯ್ಯ ಗೆದ್ದ ಕೈಲಾಸ ೧
ಶಿವಶಿವ ಎಂದಾರ, ಸಿಡಿಲೆಲ್ಲ ಬಯಲಾಗಿ
ಕಲ್ಲ ಬಂದೆರಗಿ ಕಡೆಗಾಗಿ | ಎಲೆ ಮನವ
ಶಿವನೆಂಬ ಸಬುದ ಬಿಡಬ್ಯಾಡ ೨
ಹಂತಿ ಹೊಡೆಯುತ ನೆನೆದೆ, ಸಂತಸದಿ ಶರಣರನು
ಕಂತುಹರ ನಿನ್ನ ಭಕ್ತರನು | ನೆನೆಸಿದರ
ಸಂತಸದಿ ನೀಡೋ ವರಶಿವನೆ ೩
ಹಂತಿಪದಕೊಂದಿಲ್ಲ, ನಿಂತು ಬೆನಕನ ಪೂಜೆ
ಹಂತಿಯೋಳು ಪೂಜೆ ಶರಣರಿಗೆ | ಒಕ್ಕಲಿಗ
ಸ್ವಂತ ನೆನೆಯೆಂದ ಗಣಪನಿಗೆ ೪
ಬೇಡ ಬೇಟೆಗೆ ಹೋಗಿ, ಬೆಲ್ಲ ಪುತ್ತರಿ ಕೊಯ್ದ
ಬೇಡ ಕನ್ನಯ್ಯ ಶಿವಪೂಜೆ | ಮಾಡಿದರ
ನಾಡೆಲ್ಲ ನೋಡು ಶಿವರಾತ್ರಿ ೫
ಕನ್ನ ಬೇಟೆಯನಾಡಿ, ಹೊನ್ನಬೆಟ್ಟವ ತಿರುಗಿ
ಪನ್ನಂಗಧರಗೆ ಎಡೆಮಾಡಿ | ನರಿಕೂಗಿ
ಸಣ್ಣ ರಾಸ್ಯುಕ್ಕಿ ಕಣತುಂಬಿ ೬
ಹರನ ಶಿಖರದ ಮೇಲೆ, ಸಿರಿಗಂಧದ ಮರಹುಟ್ಟಿ
ಕಿರಿಟದೊಳೆರಡು ಗಿಳಿಕೂತು | ಓದ್ಯಾವ
ಹರಳಯ್ಯನೆಂಬು ಹಳೆಗಥೆಯ ೭
ಆರಾಣದಡಿವ್ಯಾಗ, ಆರು ಕಾಲಿನ ಮಂಚ
ನಾಗರ ಸರಪು ತೆಲೆಗಿಂಬು | ಶಿವಲಿಂಗ
ಹ್ಯಾಂಗ ಗವಿದಾವ ಸವನಿದ್ದೆ ೮
ಇಂಜಾಣದಡಿವ್ಯಾಗ, ಮಂಜ ಬಿದ್ದವ ತಾಯಿ
ಮಂಜಲ್ಲ ಮಳೆಯ ಸರುವಂದೆ | ಶಿವಲಿಂಗ
ಕೆಂಜಡೆ ಬಿಚ್ಯಾರ ಬಿಸಲೀಗೆ ೯
ಹರೆಯ ಹೊತ್ತೀಲೆದ್ದು, ನರಿಯ ಮಾರಿಯ ಕಂಡೆ
ತಿರುಗಾಡದ ಕಂಡೆ ಪವಳ್ಯಾಗ | ಶಿವಲಿಂಗ
ಸಾಲ ಸಂಪೀಗಿ ವನದಾಗ ೧೦
ಗುಡ್ಡದ ಮಲ್ಲಯ್ಯ, ಗುಡಿಯೆಲ್ಲ ಬಂಗಾರ
ಹಾಸೀಗಿ ಗಲ್ಲು ಹವಳಾವು | ಮಲ್ಲಯ್ಯ
ಬೀಸಣಿಕೆಗೆಲ್ಲ ಬಿಡಿ ಮುತ್ತು ೧೧
ರಾಗಿ ಬಣ್ಣದ ಕುದುರಿ, ರಾಜೇಕ ದೊಡ್ಡದು
ರಾಜರೊಳುರಾಜ ಮಳೆರಾಜ, ಬರುವಾಗ
ರಾಜೀವ ಕೈಯ ಮುಗಿದಾವ ೧೨
ಕೆಂದಗುದುರಿಯನೇರಿ, ಕೆರಿಯಾಗ ನಿಂತವನ್ಯಾರ
ಅಂಜತೀನಯ್ಯ ಹೆಸರ್ಹೇಳ | ಲೋಕಽದ
ಮಂಜಿನಾಗಿರುವ ಮಳೆರಾಜ ೧೩
ಹಚ್ಚನ್ನ ಹರಿನಾಮ, ಮುತ್ತಿನ ಗೋಪಾಳ
ಹೊತ್ತೇರಿ ಬರುವ ಇವನ್ಯಾರ, ಕೆರೂರ
ಗಚ್ಚಿನ ಗುಡಿಯ ಕರಿಹನುಮ ೧೪
ಕಪ್ಪೂರ ಬೆಳಕೀಲೆ, ಗುಗ್ಗೂಳ ಹೊಗೆಯಽಲಿ
ಅಪ್ಪ ರಾಷಣ್ಣ ಬೆವತಾನ, ಪೂಜ್ಯಾರಿ
ಮುತ್ತೀನ ಚೌರಿ ನೀ ಬೀಸೊ ೧೫
ಏಳ ಯಲ್ಲವ ತಾಯಿ, ಎಷ್ಟೊತ್ತ ಮಲಗೀದೆ
ಹೂವೆಂಜಲಾಗಿ ಹುಳಮುಟ್ಟಿ, ಕೊಳ್ಳದ
ನೀರೆಂಜಲಾಗಿ ಗಿಳಿ ಕುಡಿದು ೧೬
ಶರಣರ ನೆನದಽರ, ಸರಗೀಯ ಇಟ್ಹಾ೦ಗ
ಅರಳ ಮಲ್ಲೀಗಿ ಮುಡಿದ್ಹಾಂಗ, ಕಲ್ಯಾಣ
ಶರಣರ ನೆನೆಯೋ ಎಲೆ ಮನವ ೧೭
ದೈವ ದೇವರ ಹಂತಿ, ಭವದೊಳಗೆ ನಮ್ಹಂತಿ
ತೇದುಂಡ ಹಂತಿ ನಂಬಾಳು | ಒಕ್ಕಲಿಗ
ಕೋದ ತೆನಿಹಂತಿ ಜನುಮಾಕೊ ೧೮
*****

















