Home / ಕವನ / ಕವಿತೆ / ಮಧುವನ

ಮಧುವನ

ಚಾಮುಂಡಿಗಿರಿಯ ತಪ್ಪಲಲಿ ಮೈಸೂರು ಪುರ-
ನಂಜನಗುಡಿಯ ರಾಜಮಾರ್ಗದಲಿ
ರಂಜಿಪುದು ತಾರುಣ್ಯ ತುಂಬಿರುವ ಕನ್ನೆವೊಲು
ಮೈಸೂರಿನುದ್ಯಾನ ಮಧುವನವು ೧

ರಂಗುರಂಗಿನ ಹೂಗಳಾಭರಣ ಒಪ್ಪಿರಲು
ಕಂಗಳನು ಮೋಹಿಸುವ ಹಸುರುಡುಗೆಯ
ಸಿಂಗರಿಸಿ ನಿಂತಿರುವ ಅಂಗನೆಯ ತೆರದಲ್ಲಿ
ಕಾಂಬುವುದು ಸೊಗವಡೆದ ಮಧುವನವು ೨

ಕುಲವನಿತೆ ಸೂಸುತಿಹ ಎಳೆನಗೆಯ ರೀತಿಯಲಿ
ಅರಳಿರಲು ಕೊಳದಲ್ಲಿ ತಾವರೆಗಳು
ಬಂಡುಂಡು ಝೇಂಕರಿಪ ಮರಿದುಂಬಿ ತಂಡಗಳು
ಹಾಡುವುವು ಮಧುರ ಸಂಗೀತಗಳನು ೩

ತಂಗಾಳಿ ಸುಳಿಯುತಿರೆ ತನಿಗಂಪು ಬೀರುತಿರೆ
ಗಿಳಿವಿಂಡು ತನಿರಸವ ನೀಂಟುವುವು-
ಹಾರುವುವು ಬಿಳಿಮುಗಿಲ ತೆರೆತೆರೆಯ ಜೊತೆಯಲ್ಲಿ
ಪಚ್ಚೆತೆನೆಗಳ ಸಾಲು ತೋರಣದಂತೆ ೪

ಹೂಬಿಟ್ಟು ಬಳುಕುತಿಹ ಬಳ್ಳಿ ಮಾಲೆಯಲ್ಲಲ್ಲಿ
ತೂಗುವುವು ಮಾಮರದ ಕೊಂಬೆಯಲ್ಲಿ
ಚೆಲುವು ಕಂಗಳ ನವಿಲು ಕುಣಿಯುತಿರೆ ಸಂತಸದಿ
ಕೋಗಿಲೆಯು ಹಾಡುವುದು ಸವಿದನಿಯಲಿ ೫

ದನಿಯೆತ್ತಿ ಕೂಗುತಿಹ ಹಕ್ಕಿಗಳ ಕಲರವದ
ಮಾರ್ದನಿಯು ಸೆಲೆಯುತಿರೆ ಮಧುವನದಲಿ
ಆಡುವುವು ಅರಸಂಚೆ ತಿಳಿನೀರ ಕೊಳದಲ್ಲಿ
ತಾವರೆಯ ಬನದಲ್ಲಿ ಅನುದಿನವು ೬

ಪರಿಸರಿಯ ಹೂಗಳನು ಮುಡಿದಿರುವ ಬನದೇವಿ
ಕೋಗಿಲೆಯ ಗಾನವನು ಉಲಿಯುತಿಹಳು
ಮಧುಪಗಳ ಝೇಂಕಾರ ಕಾಲಋಳಿ ಘಲ್ಲೆನಲು
ಮಲ್ಲಿಕಾರತಿಮಾಲೆ ಬೆಳಗುತಿಹಳು ೭

ಅಚ್ಚಹಸುರಿನ ಹಾಸಿನಲಿ ಅಂಚು ಬರೆದಂತೆ
ಕಂಗೊಳಿಸೆ ಬಣ್ಣ ಬಣ್ಣದ ಹೂಗಳು
ಕಾಂಬುಪವುದು ಮಧುವನವು ವನಲಕ್ಷ್ಮಿ ಸಿಂಗರಿಪ
ಮಧುರಾಜನರಮನೆಯ ಸೆಜ್ಜೆಯಂತೆ ೮

ಹಬ್ಬಿರುವ ಬಳ್ಳಿಯಲಿ ರಚಿಸಿರುವ ನವಿಲು ಹುಲಿ
ಗಂಡಭೇರುಂಡ ಸಿಂಹ ಶರಭಗಳು
ಕಾಣುವುವು ವೈಹಾರ ಕೇಳಿಯಲಿ ನಲಿವಂತೆ
ಜಾತಿ ವೈರವಬಿಟ್ಟು ಬಾಳುವಂತೆ ೯

ನಿಂಬ ಕುರುವಕ ಜಂಬು ನೇರಿಳೆ ಹಲಸು ಬೇವು
ರಸಾಲ ಸುರಹೊನ್ನೆ ತಮಾಲ ಕೌಂಗು
ದಾಳಿಂಬೆ ಬಾಳೆ ಸಂಪಿಗೆ ಬೇಲ ಚಕ್ಕೋತ
ತೆಂಗು ಮಾದಳ ವೃಕ್ಷ ಬೆಳೆದಿರುವುವು ೧೦

ಮಧುಮಾಸ ಬಂದಿರಲು ವನದೇವಿ ಸುಖಿಸುವಳು
ಮೃದು ತಳಿರ ಶಯ್ಯೆಯಲಿ ಮಧುವನದಲಿ
ಮೈಮರೆತು ನಿದ್ರಿಪಳು ಕೋಗಿಲೆಯ ಗಾನದಲಿ
ಮಂದ ಮಾರುತ ಬೀಸೆ ಚಾಮರವನು ೧೧

ಗ್ರೀಷ್ಮಋತು ಬಂದಿರಲು ಕುಳ್ಳಿಹಳು ಮಧುಲಕ್ಷ್ಮಿ
ತಂಪೀವ ಹೊಂಗೆಯಾ ನೆರಳಿನಲ್ಲಿ
ತಣ್ಣೆಲರು ಬೀಸುತಿರೆ ಎಳನೀರ ನೀಂಟುವಳು
ಜಲಕೇಳಿಯಾಡುವಳು ಮಧುವನದಲಿ ೧೨

ವರ್ಷಋತು ಸಮನಿಸಲು ಕಾರ್ಮುಗಿಲ ಗರ್ಭದಲಿ
ಸೆಳೆಮಿಂಚು ಹೊಳೆಯುತಿರೆ ನೋಡುತಿಹಳು
ಬನಲಕುಮಿ ಗರಿಗೆದರಿ ಕುಣಿಯುತಿಹ ಕೊರಲೆತ್ತಿ
ಕೇಕೆಹಾಕುತಿಹ ನವಿಲು ಬಳಗವನು ೧೩

ಮಳೆಮುಗಿಲ ಮಾಲೆಯನು ಧರಿಸಿರಲು ಚಾಮುಂಡಿ
ಕಾಳ ಮಹಿಷನ ಸದೆವ ವಿರೂಪದಲಿ
ವನಲಕ್ಷ್ಮಿ ನಡುಗುತಿಹ ತೆರದಲ್ಲಿ ಕಾಂಬುವಳು
ಮಳೆಗಾಳಿ ಬೀಸುತಿರೆ ಮಧುವನದಲಿ ೧೪

ಶರದೃತು ಕಾಲಿಡಲು ಕೆರೆಕಟ್ಟೆ ತುಂಬಿರಲು
ವನಲಕ್ಷ್ಮಿ ನಲಿಯುವಳು ಕೌಮುದಿಯಲಿ
ರಾಜ್ಯಲಕ್ಷ್ಮಿಯ ಹರಸಿ ಕಳುಹುವಳು ಜಯಮೆಂದು
ಚತುರಂಗ ಬಲದಿ ವಿಜಯದಶಮಿಯಲಿ ೧೫

ಹೇಮಂತ ಋತುಬರಲು ಚಳಿಗಾಳಬೀಸುತಿರೆ
ಕಾರಂಜಿ ನೀರೆಲ್ಲ ಕೊರೆಯುತಿರಲು
ಬನದೇವಿ ಕೋಗಿಲೆಯ ಗಾನವನು ಮರೆಯುವಳು
ಹಿಮಮುಸುಕ ಹಾಕುವಳು ವಧುವನದಲಿ ೧೬

ಶಿಶಿರಋುತು ತಲೆದೋರೆ ಬನದೇವಿ ಅನುವರಿತು
ತರುಗಣದ ಸಿಂಗರವ ಮಾಡುತಿಹಳು
ಮಧುರಾಜ ಬರುವುದನು ಸಡಗರದಿ ಕಾಯುವಳು
ಹೊಸ ಕಳೆಯ ಬೀರುತ್ತ ಮಧುವನದಲಿ ೧೭

ಮಧುವನದ ಸೌಂದರ್ಯ ಜಲಧಿಯಲಿ ವನಲಕ್ಷ್ಮಿ
ಯೋಲಾಡಿ ಮನದಣಿಯೆ ನಲಿಯುತಿರಲು
ಸಮರಾತ್ರಿ ಸಮನಿಸಲು ಕಾಂಬುವಳು ಋಷಿಯಂತೆ;
ಯೋಗನಿದ್ರೆಯ ತಳೆದ ಯೋಗಿಯಂತೆ! ೧೮
*****

Tagged:

Leave a Reply

Your email address will not be published. Required fields are marked *

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...