
೧
ಹನ್ನೆರಡು ವರುಷಗಳು ಮೇಲೇಸೊ ದಿವಸಗಳು
ಭೂತಕಾಲದ ಗರ್ಭಗೋರಿಯಲ್ಲಿ;
ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು
ನೊಂದ ಜೀವಿಯ ಮನದ ರಂಗದಲ್ಲಿ.
೨
ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ
ವಿಜಯಪುರವೇ ನಿನ್ನ ಮರೆಯಲಾರೆ;
ನೂರಾರು ಮೈಲುಗಳ ಗಡಿಯಾಚೆ ನಿಂತರೂ
ಎದೆಯ ಹಂಬಲವನ್ನು ತೊರೆಯಲಾರೆ.
೩
ಅರೆಬೀಳು ಕೋಟೆಗಳು ಆ ಹಾಳು ಗೋರಿಗಳು
ಕೂಗಿ ಕರೆದಿವೆ ಕವಿಯ, ಬಾರೋ ಎಂದು;
ತಮ್ಮ ಮೇಲೊಂದೊಂದು ಕಾವ್ಯಕೃತಿ ರಚಿಸೆಂದು
ಅಂಗಲಾಚಿವೆ ಕಣ್ಗೆ ನೀರ ತಂದು.
೪
ದುಃಖದಲ್ಲಿ ಬಿಕ್ಕಿರುವ ನಗುನಗುತ ಬಾಳಿರುವ
ನಿಮ್ಮ ನೆರಳೇ ನನಗೆ ತೌರಾಗಿದೆ;
ಮರಣ ಶಯ್ಯೆಯ ಮೇಲೆ ಕೊನೆಯ ಉಸಿರೆಳೆಯದಿರಿ
ಕವಿಯ ಕರುಳೇ ಕರಗಿ ನೀರಾಗಿದೆ.
೫
ನನ್ನ ಹೃದಯವ ನೋಡಿ ಕಾವ್ಯ ಕಲ್ಪನೆ ನೀಡಿ
ನಿಮ್ಮತನ ಸರ್ವಸ್ವದೌದಾರ್ಯಕೆ;
ಕಾವ್ಯ ಕೃತಿಯಲ್ಲೊಂದು ಸ್ಮೃತಿಯ ದೀಪಸ್ತಂಭ
ನಿಲ್ಲಿಸಿದರಾದಿನವೆ ಋಣ ತೀರಿತೆ?
೬
ನಿತ್ಯ ನಿಲ್ದಾಣದಲಿ ಸಿಳ್ಳು ಹೊಡೆಯುವ ಗಾಡಿ
ಹೊತ್ತು ತರದಿಹುದಲ್ಲ ಕವಿಯನೊಮ್ಮೆ
ಎಂದು ಪ್ರತಿ ಉಸುರಿನಲಿ ಅಳಲ ಚೀತ್ಕಾರದಲಿ
ಎದೆಗೆಟ್ಟು ಕೂಗದಿರಿ-ಬರುವೆನೊಮ್ಮ.
೭
ಹಗಲಿರಲಿ ಇರುಳಿರಲ್ಲಿ ಯಾವ ದಿನವೇ ಇರಲಿ
ತೇಲಿ ಬರುವೆನು ಮುಗಿಲ ತೇರನೇರಿ;
ಸುಳಿಗಾಳಿಯೊಡಗೂಡಿ ಸುತ್ತು ಸೌರಭ ಸೂಸಿ
ಬರುವೆ ಬೀದಿಯ ತುಂಬ ಬೆಳಕ ಬೀರಿ!
*****
















