Home / ಕಥೆ / ಜನಪದ / ಶಿವಪಾರ್ವತಿಯರ ಸೋಲು

ಶಿವಪಾರ್ವತಿಯರ ಸೋಲು

ಕುರುಬ ಬೀರನು ಕುರಿ ಕಾಯುತ್ತ ಒಂದು ಹಳ್ಳದ ದಂಡೆಗೆ ಬಂದನು. ಅಲ್ಲಿಯ ನೀರು ನೆರಳು ನೋಡಿ, ಕುರುಬನು ತನ್ನ ಕುರಿಗಳಿಗೆ ದಡ್ಡಿಹಾಕಲು ತಕ್ಕ ಸ್ಥಳವೆಂದು ಬಗೆದನು. ಅದರಂತೆ ದಡ್ಡಿಹಾಕಲು ತೊಡಗಿದನು.

ಅಷ್ಟರಲ್ಲಿ ಅತ್ತಕಡೆಯಿಂದ ಶಿವಪಾರ್ವತಿ ಬಂದರು. “ಇಲ್ಲೇಕೆ ದಡ್ಡಿ” ಎಂದು ಕೇಳಿದರು.

“ಅದಕ್ಕೇನೂ ಆಗುವದಿಲ್ಲ” ಎಂದನು ಬೀರನು.

“ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತುಂಬಿ ಬರುವದಿಲ್ಲವೇ?” ಎಂದು ಶಿವ ಪಾರ್ವತಿ ಕೇಳಿದರು.

“ಮಳೆ ಹೋಯಿತು ತನ್ನ ನಾಡಿಗೆ ಮೂರು ತಿಂಗಳು” ಎಂದು ಬೀರನು ಅವರಿಗೆ ಮರುನುಡಿದನು.

ಶಿವಪಾರ್ವತಿಯರು ಅಲ್ಲಿ ನಿಲ್ಲದೆ ಹೋಗಿಬಿಟ್ಟರು. ಅವರು ನೇರವಾಗಿ ವರುಣನ ಲೋಕಕ್ಕೆ ತೆರಳಿ – “ಈಗಲೇ ಮಳೆರಾಯನನ್ನು ಕಳಿಸಿಕೊಡು” ಎಂದು ಹೇಳಿದರು.

“ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ. ಅವನು ಬರುವುದು ಮೂರು ತಿಂಗಳು ಕಳೆದ ಬಳಿಕ” ಎಂದು ವರುಣನು ತಿಳಿಸಿದನು.

ಆ ಮಾತು ಕೇಳಿ ಶಿವಪಾರ್ವತಿಯರ ಮುಖ ಬಾಡಿಹೋದವು. ಮರುನುಡಿಯದೆ ಅವರು ಕೈಲಾಸಕ್ಕೆ ಹೊರಟುಹೋದರು.

ಬೀರನ ದಡ್ಡಿ ಹಳ್ಳದಲ್ಲಿ. ಅವನ ಕುರಿಗಳು ಹಳ್ಳದ ದಂಡೆಯಲ್ಲಿ ಬೀಡುಬಿಟ್ಟು ತಂಗಿದವು. ಹಳ್ಳದ ದಡದಲ್ಲಿ ಬೆಳೆದು ನಿಂತ ಹುಲ್ಲು ಮೇದು ಹಳ್ಳದ ನೀರು ಕುಡಿಯುತ್ತ ಮೂರು ತಿಂಗಳು ಕಳೆದವು.

ಆ ಸಂದರ್ಭದಲ್ಲಿ ಅತ್ತ ಕಡೆಯಿಂದ ಶಿವಪಾರ್ವತಿಯರು ಬಂದರು. ಕೇಳಿದರು – “ಬೀರಾ, ದಡ್ಡಿ ಕಿತ್ತಿದೆಯಲ್ಲ ! ಯಾಕೆ ?” “ಮಳೆರಾಜ ಬಂದಿರುವನಲ್ಲವೇ ನಮ್ಮ ನಾಡಿಗೆ” ಇದು ಬೀರನ ಮರುನುಡಿ. “ಎಷ್ಟು ಸೊಕ್ಕು ಈ ಕುರುಬನಿಗೆ ? ಮಳೆ ಬರುವದೆಂದು ಸ್ಪಷ್ಟವಾಗಿ ಹೇಳುತ್ತಿರುವನಲ್ಲ! ಏತರ ಮೇಲಿಂದ ಹೇಳುತ್ತಾನೆ ಹೀಗೆ ?” ಎಂದು ಶಿವಪಾರ್ವತಿ ತಮ್ಮತಮ್ಮಲ್ಲಿಯೇ ಅಂದುಕೊಂಡು, ನೇರವಾಗಿ ದೇವಲೋಕಕ್ಕೆ ನಡೆದರು. ಅಲ್ಲಿ ವರುಣನ ಬಳಿಗೆ ಹೋಗಿ ಹೇಳಿದರು – “ಮಳೆರಾಯನನ್ನು ಮರಳಿ ಕರೆಯಿಸು.”

ವರುಣ ಬಿನ್ನಯಿಸಿದನು – “ಆ ಹೊತ್ತು ನೀವು ಸೂಚಿಸಿದಂತೆ ಆತನನ್ನು ಇಂದೇ ಅತ್ತಕಡೆ ಕಳಿಸಿದ್ದೇನೆ. ಮೋಡಗಳು ಮುಂದೆ ಮುಂದೆ, ಸಿಡಿಲು ಮಿಂಚುಗಳು ಹಿಂದೆ ಹಿಂದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ ? ಕೊಟ್ಟ ಹುಕುಮು ಅವರ ಕೈಯಲ್ಲಿದೆ.”

ಆ ಮಾತು ಕೇಳಿ ಶಿವಪಾರ್ವತಿಯರು ಅಂದುಕೊಂಡರು – “ನಾವಿಂದು ಕುರುಬನಿಗೆ ಸೋತೆವು.”
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್