Home / ಬಾಲ ಚಿಲುಮೆ / ಕವಿತೆ / ವಿದ್ಯೆ ಕಲಿತ ರಕ್ಕಸ

ವಿದ್ಯೆ ಕಲಿತ ರಕ್ಕಸ

ಹಿತ್ತಲಿಂದ ಬರುತಲೊಮ್ಮೆ
ಬೆಚ್ಚಿ ಬಿದ್ದೆನು
ದೂರದಲ್ಲಿ ಕಪ್ಪು ಕಪ್ಪು
ಏನೋ ಕಂಡೆನು

ತಲೆಯ ಮೇಲೆ ಕೋಡು
ಕೋರೆಗಳಿವೆ ಜೋಡು
ವಿಕಾರವಾದ ಮುಖ
ಉದ್ದುದ್ದನೆಯ ನಖ

ಮಾರಿಗೊಂದು ಹೆಜ್ಜೆ
ತಿನುವ ಮಾಂಸ ಮಜ್ಜೆ
ಝಲ್ಲೆಂದಿತು ಎದೆಯು
ಬಿರಿಯ ಬಾರ್ದೆ ಭುವಿಯು

ಆನೆಗಿಂತ ಎತ್ರ
ಅವನ ಆ ಗಾತ್ರ
ನಡುಗುತ್ತಲೆ ನಿಲುವುದ್ಹೇಗೆ
ಅಯ್ಯೋ ಬಂದ ಹತ್ರ

ಇವನೆ ಇವನೆ ರಕ್ಕಸ
ಏರಿಳಿಯಿತು ಪುಪ್ಪಸ
ರಾಮ, ಭೀಮ, ಹನುಮರೆಲ್ಲ
ಕೊಂದ ರಕ್ಕಸ

ಓಡಲೆಂದು ನೋಡಿದೆ
ಕಾಲು ಮರವೆ ಆಗಿದೆ
ಕೂಗಲೆಂದು ಬಾಯಿತೆರೆದೆ
ಅದೂ ಹೊಲೆದು ಕೊಂಡಿದೆ

ಗಣಪನನ್ನು ನೆನೆದೆ
ಮೇಷ್ಟ್ರರನ್ನು ಕರೆದೆ
ಬರಲಿಲ್ಲ ಯಾರು ಪಾಲಿಗೆ
ಮಗನಿಲ್ಲ ನನ್ನತಾಯಿಗೆ

ದಡಬಡನೆ ಬಂದೆಬಿಟ್ಟ
ಮುಷ್ಟಿಯಲ್ಲಿ ಎತ್ತಿಬಿಟ್ಟ
ಮುದ್ದು ಮರಿಯೆ ಎಂದ
ಕೊಟ್ಟ ಮುತ್ತನೊಂದ

ಹೆದರಬೇಡ ನಡುಗಬೇಡ
ಕೇಳೋ ಇಲ್ಲಿ ಪೋರ
ತಿನ್ನೋದಿಲ್ಲ ನಿನ್ನ ನಾನು
ಗೆಳೆಯ ನೀನು ಬಾರ

ಗೆಳೆಯನಲ್ಲ ನೀನು
ಹೆದರಿಹೆನು ನಾನು
ನೀನು ನರ ಭಕ್ಷಕ
ನಾನು ಶಾಲಾ ಬಾಲಕ

ನಾನು ಶಾಲೆಗೆ ಬರುವೆ
ನಿನ್ನ ಜೊತೆಗೆ ಆಡುವೆ
ಬಿಸಿಊಟವನ್ನೆ ಮಾಡುವೆ
ಆಪ್ ಎಂದು ತೇಗುವೆ

ಬೇಡ, ಬೇಡ ರಕ್ಕಸ
ನನ್ನ ಕಾಡಬೇಡ
ನೀನು ಜೊತೆಗೆ ಬಂದರೆ
ನನಗೆ ಭಾರಿ ತೊಂದರೆ

ತಂಟೆ ಮಾಡೆನು
ಮಾಂಸ ಮಜ್ಜೆ ಕೇಳೆನು
ಗೆಳೆಯನಲ್ವೆ ನೀನು
ಪಪ್ಪಿ ಕೊಡುವೆ ನಾನು

ಶಾಲೆಗೆ ಬಂದ್ರೆ ನೀನು
ಪಾಠಕಲಿಯ ಬೇಕು
ಹೋಂವರ್ಕ ಮಾಡಬೇಕು
ಅಲ್ಲಿ ಏಟು ತಿನ್ನಬೇಕು

ಪಾಠ ಗೀಟ ಓದುವೆ
ಮಗ್ಗಿ ಹಾಡು ಹೇಳುವೆ
ಏಟು ಕೊಡಲು ಮೇಷ್ಟ್ರು ಬಂದ್ರೆ
ಅವರನ್ನೆ ಮಾಯ ಮಾಡುವೆ

ನರ-ರಾಕ್ಷಸ ಒಂದಾದರು
ಸಂತಸದೀ ಕುಣಿದರು
ಶಾಲೆ ಕಡೆಗೆ ನಡೆದರು
ಗೇಟು ತೆರೆದು ಬಿಟ್ಟರು

ರಕ್ಕಸನ ಕಂಡರು
ಮಕ್ಕಳು ಬೆರಗಾದರು
ಚಿಳ್ಳೆ ಪಿಳ್ಳೆ ಎಲ್ಲರೂ
ಚೆಡ್ಡಿ ತೋಯಿಸಿಕೊಂಡರು

ಹೆದರಬೇಡಿ ಮಕ್ಕಳೆ
ಮುದ್ದು ಮುದ್ದು ಹೂಗಳೆ
ನಾನು ನಿಮ್ಮ ತಿನ್ನೆನು
ಆಗುವೆ ನಿಮ್ಮ ಗೆಳೆಯನು

ಮಕ್ಕಳೆಲ್ಲ ನಕ್ಕರು
ಹತ್ತಿರಕ್ಕೆ ಬಂದರು
ಕೈಯ ಹಿಡಿದು ಎಳೆದರು
ಭಾರಿ ಖಷಿಯಪಟ್ಟರು

ಮಾಸ್ತರ್ ಮಾತು ಮರೆತರು
ಶಿಕ್ಷಕಿ ಶಿಲೆಯಾದರು
ಕನಸೆ ಇರಬೇಕೆಂದುಕೊಂಡು
ಕೈಯ ಚಿವುಟಿಕೊಂಡರು

ಪುರದ ಜನರು ನೆರೆದರು
ಬಡಿಗೆ ಹಿಡಿದು ಬಂದರು
ರಕ್ಕಸನ ಕಂಡ ಅವರು
ಅವಾಕ್ಕಾಗಿ ನಿಂತರು

ಕೇಳಿ ಪುರದ ಜನಗಳೇ
ಇಲ್ಲ ನನ್ನಿಂದ ತೊಂದರೆ
ಬೇರೆ ಏನು ಬಯಸೆನು
ವಿದ್ಯೆ ಕಲಿಯ ಬಂದೆನು

ಬಡಿಯ ಬೇಡಿ ನನ್ನ
ತಿನ್ನುವುದಿಲ್ಲ ನಿಮ್ಮ
ವಿದ್ಯೆ ಕಲಿಸಿ ನನಗೆ
ನಾನು ಶರಣು ನಿಮಗೆ

ಟೀಚರ್ ಒಪ್ಪಿಬಿಟ್ಟರು
ಶಾಲೆಯೊಳಗೆ ಕರೆದರು
ಸ್ಟೇಟು ಬಳಪ ಕೊಟ್ಟರು
ಅಕ್ಷರ ಕಲಿಸಿ ಬಿಟ್ಟರು

ವಿದ್ಯೆ ಕಲಿತ ರಕ್ಕಸ
ವಿರೂಪ ಕಳಚಿ ಬಿಟ್ಟನು
ಕೋರೆ, ದಾಡೆ, ಕೋಡು ಎಲ್ಲ
ಮಾಯವಾಗಿ ಬಿಟ್ಟವು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...