Home / ಕವನ / ಕವಿತೆ / ಮಹಾಕವಿ ಕುಮಾರವ್ಯಾಸನಿಗೆ

ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ
ದೀ ಮಹಾಕೃತಿಯಿಂದೊಲವು ಮಿಗೆ
ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ|
ಕೌಮುದಿಯೊಲೀ ಕನ್ನಡದೊಳಾ
ಸೀಮಮೆನೆ ನೆಲಸಿಹುದಿದಂ ನೆಗ
ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧||

ಮೊದಲ ಮಗನಾ ಶುಕನು ಭಾಗವ
ತದ ಪುರಾಣದೊಳದ್ದಿ ಕುರುಕುಲ
ಕದನದೀ ಕಥೆಯೊರೆದನಿಲ್ಲಕಟೆಂದು ಮನಮರುಗಿ|
ಪದೆಯಲನ್ಯ ಕುಮಾರನನು ವೇ
ದದ ಮಹಾಮುನಿ ಕನ್ನಡದ ಶಾ
ರದೆಯೆ ಕನ್ನಡವಕ್ಕಿಯೊಲು ಬೆಸಲಾದಳಲೆ ನಿನ್ನ? ||೨||

‘ಅಂದು ಕಂಡುದ ಕಾಣಿಸಿದೆ, ಬಳಿ
ಸಂದ ಕಬ್ಬಿಗರವರ ದೇಸಿಯ
ಚಂದದಿಂ ಕೇಳಿಸಿದರಲ್ಲದೆ ಕಾಣಿಸಿದರುಂಟೆ?’|
ಎಂದು ಲೋಕಕೆ ಭಾರತವ ಕಂ
ಡಂದದಿಂ ಕಾಣಿಸಲು ನಿನಗಣು
ಗಿಂದ ಸಂಜಯಗಿತ್ತ ದೃಷ್ಟಿಯ ನೀಡಿದನೆ ಮುನಿಪ? ||೩||

ಈಕ್ಷಿಸದೆ ಭಕ್ತಿಪ್ರಭೆಯ ವಿರ
ಜಾಕ್ಷಿಯಿಂ ೧ಕ್ರತುಪುರದೊಡೆಯನನ
ಧೋಕ್ಷಜನ ನೀ ವಿಶ್ವಕವಿಗವಗೆಂತು ಲಿಪಿಗಾರ?|
ಅಕ್ಷಯಂ ತವ ಕಂರಮದು! ವ್ಯಾ
ಚಕ್ಷಣಮಿದಾತನದೊ? ನಿನ್ನದೊ?
ಸಾಕ್ಷಿಯೆಮಗಿದು ವೀರನಾರಾಯಣನ ದರುಶನದ! ||೪||

ನಿನ್ನ ಹಿಂಗಬ್ಬಿಗರಿಗೂಡಿದ
ಕನ್ನಡದ ನುಡಿವೆಣ್ಣ ಮೊಲೆ ನಿನ
ಗಿನ್ನು ಸಾಲದೆನುತ್ತ ವಿಧಿ ಮುಂಬಗೆದು ನಿನ್ನುದಯಂ|
ಚನ್ನೆಯಿವಳಿಗೆ ಮೂರನೆಯ ಮೊಲೆ
ಯನ್ನವಾಯಿಸಲದರಿನೊದವಿದ
ಬಿನ್ನಣಮಿದೇಂ ನಿನ್ನ ನುಡಿಯ ನವೀನ ನಿವಡಿಕೆಗೆ? ||೫||

ಕಾವ್ಯಮಿದೊ ಜೀವಂತರಾ ಕೌ
ರವ್ಯರನುಗಂತವ್ಯಮಿದೊ? ಸು
ಶ್ರಾವ್ಯ ಪುಣ್ಯ ಚರಿತ್ರೆಯಿದೊ ಭಾರತದ ಯಾತ್ರೆಯಿದೊ? |
ಭವ್ಯರಿವರಾರಲ್ಲ? ಬಹುಮಂ
ತವ್ಯರಿವರೊಡನೆಮಗೆ ಕೆಳೆ ಕ
ರ್ತವ್ಯಮೆನಿಸುವುದವರವರ ಬಾಂಧವ್ಯಕೆದೆಸಿಲುಕಿ ||೬||

ರವಿಯ ಸಪ್ತಾಶ್ವಗಳ ಸಪ್ತ
ಚ್ಛವಿಯ ಸೇರುವೆ ಬಿಳಿಗಲೆತು ಲೋ
ಕವನು ಧವಳಿಸುವಂತೆ, ಕವನದಿ ನಿನ್ನ ಸವನಿಸಿದ |
ನವರಸದ ಸಂಯುಕ್ತಿಯದೊ ಮಾ
ಧವನ ನವವಿಧ ಭಕ್ತಿಯದೊ ಮನ
ದೆವೆದೆರಸಿ ಪುಳುಕಿಸುತಿದೆ ಸುಧಾಂಬುಧಿಯ ಮಧುರಿಮೆಗೆ! ||೭||

ಪ್ರಕಟಿಸಿದೆ ನೀನೈಹಿಕಾಮು
ಷ್ಮಿಕದ ನಡು ಪರುರವಿಸಿದೊಖ್ಖಾ
ಣಿಕೆಯ ಸೇತುವೊಲಿದರ ನುಡಿಗಟ್ಟಿನ ಸಗಾಢಿಕೆಯ |
ಅಕುಟಿಲದ ಸೊಬಗೆಮಗೆ ಬಗೆಗಾ
ಣಿಕೆಯ ಪಯಣದಿ ಸಂದಿಸುವ ನ
ನ್ನಿಕೆಯಿವರುಹವೆ ಸತ್ಯಸೌಂದರ್ಯಗಳನನ್ಯತೆಯ? ||೮||

ನಿಡುಗತೆಯೊ ಬಾನೆಡೆಯೊ? ಬೆಡಗಿನ
ನುಡಿಯ ಠೀವಿಯೊ ಗುಡುಗೊ ? ಬಣ್ಣದ
ಮಿಡುಕೊ ಮಿಸುಕುವ ಮಿಂಚೊ? ಕವಿತಾರಸವೊ ತನಿಮಳೆಯೊ? |
ತಡಿಯ ಹರಿವರ್ಥ ಪ್ರವಾಹವೊ?
ಮಡಲ್ವ ನಿರತೆಯೊ ಹಸುರ ನೆರತೆಯೊ?
ನಡೆನಲಿವ ಮನ್ಮನವೊ ಸೋಗೆಯೊ ನಿನ್ನ ಕಾವ್ಯದಲಿ? ||೯||

ಹೊತ್ತಿಸುತ ಸುರಿಮುಗಿಲ ಹಗಲಲಿ
ಬತ್ತಿಯೆಯ್ದರ ಸೊಡರ, ಸಯ್ಪೆದೆ
ಯೊತ್ತ ಕೇಳುತ ಲೇಸ ಸಂಚಿಸೆ ನೆರೆದರಿಗೆ ನಿನ್ನ |
ಹೊತ್ತಗೆಯ ಹಾಡುವಿನಮರ್ಥವ
ಬಿತ್ತರಿಸುವಿನಮಳ್ತಿಯಲಿ ಕಿವಿ
ಯಿತ್ತು ಕೇಳ್ದುದನೆನಗೆ ಕೇಳಿಪುದಿನ್ನೆಳೆಯ ನೆನವು! ||೧೦||

ಪಂಪನಲಿ ಬನವಾಸಿದೇಶದ
ಸೊಂಪ, ರನ್ನನೊಳಾ ಚಳುಕ್ಯರ
ಲಂಪ, ಲಕ್ಷ್ಮ್ಮೀಶನಲಿ ಪಂಪೆಯನಾಳ್ದವರ ಪೆಂಪ |
ಆಂಪಡೇನಿನ್ನಖಿಲ ಕನ್ನಡ
ದಿಂಪು ನಿನ್ನ ಈ ಭಾರತಿದಿ ಮೆ
ಯ್ಯಂ ಪಡೆವೊಲೇಂ ನೆಳಲನಿಕ್ಕಿತೆ ಬೇರೆ ಭಾರತದಿ? ||೧೧||

ಸಕ್ಕದದ ಭಾರತದಿ ಕೊಳುಗುಳ
ದೆಕ್ಕತುಳದೊಳೆ ಭೇರಿ ಮೊಳಗುವೊ
ಡಕ್ಕಜವಿದೇಂ ನಿನ್ನ ಕಬ್ಬದಿ ತುದಿಮೊದಲ್ವರೆಗೆ |
ಧಕ್ಕಡದ ಕನ್ನಡದ ರವಣೆಯೊ?
ಸೊಕ್ಕು ಭಟರುರವಣೆಯ ಢವಣೆಯೊ?
ಮಿಕ್ಕ ಕವಿಗಳ ಕುಣಿಸಿ ನಗುವೀ ಹೊಸ ಬಜಾವಣೆಯೊ? ||೧೨||

ಕನ್ನಡದ ನುಡಿದೇಗುಲದಿ ಸಂ
ಪನ್ನಮಿಹ ಶ್ರೀಕೃಷ್ಣಮೂರುತಿ
ಯನ್ನಿರೀಕ್ಷಿಸುವೊಡನೆ ಲಕ್ಷ್ಮೀಶನದು ನಿನ್ನದಿವು |
ನನ್ನ ಕಣ್ಮನದಿಂದ ಭಕ್ತಿಯ
ಜಾನ್ನವಿಯ ಸರಿವರಿಸಲಿವರೊಳ
ಗಿನ್ನರಿಯೆ ಮಿಗಿಲಾತನೆರಕವೊ ನಿನ್ನ ಕೆತ್ತಿಗೆಯೊ? ||೧೩||

ಕುರುಪತಿಯ ಮರಣಾಂತ ಛಲದಲಿ
ಮರುಳನಹ ಕವಿ ರನ್ನನವನಲಿ
ಮರಸಿದೊಲು ತನ್ನಯ ಕಥಾನಾಯಕನನನಿಲಜನ |
ಇರದೆ ಕರ್ಣನ ಜೋಳವಾಳಿಯೊ
ನಿರತಿಶಯ ಚಾಗವೊ ಮನಂಬುಗೆ,
ಮರೆತಡೇಂ ನೀ ನರನನಂದಂದಿನನ ತನಯನಲಿ? ||೧೪||

ಕಾಳುಗೆಡೆವರೆ ನಿನ್ನ ಕೃಷ್ಣೆಯ
ನೇಳಿಸದೆ ಗಂಡುಡುಗಿದಾ ಗಂ
ಡಾಳುಗಳ ತೆರಪುಂಟೆ ಧರುಮದ ಬಾಳ್ಗೆ? ಕುರುಕುಲದ |
ಕಾಳರಾತ್ರಿಯೆ ? ಇರುಳಿನಲ್ಲದೆ
ನಾಳೆ ಮೂಡಿತೆ? ಶಿಖಿಜೆ ಗಡ ಪಾಂ
ಚಾಳಿ ಗಿರಿಜೆಯೊಲರ್ಧನಾರಿ ರಣಾಗ್ರ ಸಹಕಾರಿ! ||೧೫॥

ಸಹಜವೇನ್ನುಡಿದಡೆ ತುರಾರಿಸಿ
ಯಹಿತರಾ ಕೌರವರು ನಿನಗೆಂ
ದಹಹ ಧರ್ಮದ ಪಕ್ಷಪಾತವನಾವ ಗುಣಿಯೊಲ್ಲ? |
ಕಹುಕಿಗಳ ಕೌಳಿಕವ ಹಳಿದೊಡೆ,
ಸಹಸದಲಿ ಪಗೆಯುಂಟೆ? ಬೇವಿನ
ಕಹಿಯ ಕಯ್ಪೆನೆ ಗುಣಕೆ ಕಯ್ಪೆಯೆ ? ಗುಣಕೆ ಮಚ್ಚರವೆ? ||೧೬||

ಅರಿಯೆವಣಮಿನ್ನಕಟ ನಿನ್ನನು
ಕುರಿತ ಹದನವನೇಂ ವಶಿಷ್ಠನ
ಮರೆಯರುಂಧತಿಯಂತೆ ಕಾವ್ಯವೆ ನಿನ್ನ ಮರಸಿದುದೆ? |
ಕಿರಿದೆನದೆ ಕಂಡಗೆ ಚಿರಾಯುವ
ನೊರೆವರಂತೆಮಗವಟಯಿಸಿ ತವ
ಚರಿತವಂ ಪೊರೆಯಳೆ ಚರಿತ್ರವಿಧಾತ್ರಿ ಕನ್ನಡವ? ||೧೭||

ಯಾವ ರಾಯನ ನಾಡೊಳಿರ್ದೆಯೊ,
ಯಾವ ಕಾಲದಿ ಬಾಳಿದೆಯೊ, ಮ
ತ್ತಾವ ಕಾವ್ಯವ ರಚಿಸಿದೆಯೊ ನೀನೊಬ್ಬನದನರಿವೆ, |
ಏವರಂ ಭಾರತದ ಕೇಳಿಕೆ
ಯೇವರಂ ಕನ್ನಡದ ಬಾಳಿಕೆ
ಯಾವರಂ ನೀ ಬಾಳ್ದೆಯೆಂದಿದನೊಬ್ಬ ನೀನರಿಯೆ ||೧೮||

ಅರಸರೊಲಿದೇಂ ನಿನಗೆ ಕಾರ್ತ
ಸ್ವರದ ಕಂಕಣ ತೊಡಸಿದರೆ ನಾ
ನರಿಯೆ, ನಿನಗಿಂದೊಂದೆ ಸತ್ತಿಗೆಯಾಗಿ ಕನ್ನಡದ|
ಸರಸರಿದೊ ನಿನ್ನನು ಯಶೋವಿ
ಷ್ಟರದಿ ಕುಳ್ಳಿರಿಪಂದು ನಿನ್ನಡಿ
ಗೆರಗುತೀ ಹುಲು ಪದ್ಯದಂದುಗೆ ಚಾಚುತಿಂತೆರೆವೆ- ||೧೯||

ಬಚ್ಚಿದಳೆ ಕನ್ನಡದ ಭಾರತಿ?
ಮುಚ್ಚುವಳೆ ಮಧುಮಧುರ ಕಂಠವ
ನೆಚ್ಚರಿಸಳೇನಚ್ಚರಿಯ ಕನ್ನಡದ ಕಚ್ಛಪಿಯ? |
ಬೆಚ್ಚಿದಿಂತೆಮುಗಳಿಯದೆಮ ನ
ಮ್ಮಚ್ಚ ಕನ್ನಡವೆಂದು ನಚ್ಚಿಸ
ಲುಚ್ಚ ಕವಿಗಳ ತವರೊಳವತರಿಸಾತ್ಮದೀಧಿತಿಯ! ||೨೦||

ಮಂಗಳಂ ನಿನ್ನೊರೆದ ಕಬ್ಬಕೆ,
ಮಂಗಳಂ ಕಿವಿಮನದ ಹಬ್ಬಕೆ,
ಮಂಗಳಂ ಕನ್ನಡದ ಭಾಮಿನಿ ಮನದಿನಿಯ ನಿನಗೆ |
ಮಂಗಳಂ ನಿನ್ನಮರ ಮೂರ್ತಿಗೆ,
ಮಂಗಳಂ ನಿನ್ನಜರ ಕೀರ್ತಿಗೆ,
ಮಂಗಳಂ ನಿನಗೊಲಿದ ಗದುಗಿನ ವೀರ ನರಯಣಗೆ ||೨೧||
*****
೧ ಕ್ರತುಪುರ ಎಂದಕೆ ಧಾರವಾಡ ಜಿಲ್ಲೆಯಲ್ಲಿರುವ ಗದಗು.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...