Home / ಕವನ / ಭಾವಗೀತೆ / ಕೂಸಿನ ಹಾಡು

ಕೂಸಿನ ಹಾಡು

ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ|
ಮಂಡಲದಾಗಾಡೊ ಮಗನ ಗೋವಿಂದಾ||
ಕೂಸ ಕಂಡೀಽರೆ| ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೧||

ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ|
ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ||
ಕೂಸ ಕಂಡಿಽರೇ| ಅವ್‌ ನನ್ನ|
ಬಾಲಽನ ಕಂಡಿಽರೆ ||೨||

ಹೆಸರಂಗಿ ತೊಡೆಸಿಽದ ಹಾಲಗಡಗ ಇಡಸಿಽದ|
ಕುಸಲದ ಟಿಪ್ಪಿಽಗಿ ತೆಲಿಮ್ಯಾಲಿತ್ತವ್ವಾ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೩||

ಭಾಂಯಿ ಮ್ಯಾಲ ನಿಂತಿತ್ತು ಬಾಯಿ ಮಾಡಿ ಅಳತಿತ್ತು|
ಕಂಡ ಬಾಲ್ಯಾರಿಗಿಽ ಕೈಮಾಡಿತವ್ವಾ ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೪||

ಬಿಳಿ ಅಂಗಿ ತೊಡಸಿಽದ ಬಿಳಿಮುತ್ತ ನಿಡಸಿಽದ
ಅಂಗಳದಾಗ ಕೂಸಾ ಮಾಯಾಯಿತವ್ವಾ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೫||

ಗಂಡೆಹೆಂಡರು ಕೂಡಿ ಖಂಡಗ ಹರಕೀ ಮಾಡಿ|
ನಾ ಗಂಡಸಮಗನಽ ಹೆಡೆದಿದ್ದ ನವ್ವಾ|| ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೬||

ಜನವ ಜಾತ್ರಿಽಗ್ಹೊಯ್ತ ನಾನೂ ಜಾತ್ರಿಽಗ್ಹ್ವಾದ|
ಜನಕಿಲ್ಲದ ಕೇಡಾ ನನಗಾಯಿತವ್ವಾ ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೭||
*****

ಭಾವಗೀತಗಳು

ಹೃದಯೋದ್ರೇಕಕ್ಕೆ ಕಾರಣವಾಗುವ ಯಾವುದೊಂದು ಒಂಟಿ ಸಂಗತಿಯನ್ನು ಕುರಿತು ಅದರ ಬೇರೆಬೇರೆ ಮಗ್ಗಲುಗಳನ್ನು ಒಂದೊಂದಾಗಿ ಬಣ್ಣಿಸುತ್ತ ಬಂದ ಹಾಗೆಲ್ಲ ಶ್ರೋತೃವಿನ ಅಂತರಂಗದಲ್ಲಿ ಭಾವಾವೇಗವು ಏಳುತ್ತದೆ. ಇಂತಹ ಹಾಡುಗಳಿಗೆ “ಭಾವಗೀತಗಳೆ”ಂದು ನಾಮಕರಣ ಮಾಡಲಾಗಿದೆ. ಈ ಹಾಡುಗಳಲ್ಲಿ ಒಂದೇ ಪಾತ್ರವು ತನ್ನ ಸ್ವಗತವನ್ನು ಕಲ್ಲು ಕರಗುವಂತೆ ಬಣ್ಣಿ ಸುತ್ತಿರುವುದುಂಟು.

ಕೂಸಿನ ಹಾಡು

ಜಾತ್ರೆಗೆ ಹೋದ ಒಬ್ಬ ಹೆಣ್ಣುಮಗಳು ಬಾವಿಯ ದಂಡೆಯ ಮೇಲೆ ನೀರು ಕುಡಿಯುವಾಗ ಜನರ ದಟ್ಟಣೆಯಲ್ಲಿ ಅವಳ ಕೂಸು ತಪ್ಪಿಸಿಕೊಂಡು ಬಿಟ್ಟಿದೆ. ಎಷ್ಟು ಹುಡುಕಿದರೂ ಸಿಗದಂತಾಗಲು ಅವಳು ನೆನೆನೆನೆಸಿ ಅಳುತ್ತಾಳೆ.

ಛಂದಸ್ಸು:— ತ್ರಿಪದಿಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಕುಂದಲ=ಕುಂದಣ. ಮಂಡಲ=ಬರಿದಾದ ಸ್ಥಳ. ಹಲ್ಲಿ=ಚಿಕ್ಕ ರೊಟ್ಟಿ. ಇಡಸೀದ=ಇಡಿಸಿರುವೆನು. ತೆಲಿ=ತಲೆ. ಹ್ವಾದ=ಹೋದೆನು.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...