Home / ಕವನ / ಕವಿತೆ / ದೇವರು ನಗುವುದಾ ಕಂಡೆ

ದೇವರು ನಗುವುದಾ ಕಂಡೆ

ಪೇಪರಿನ ಬಾಣಬತ್ತಳಿಕೆಗಳ ಹಿಡಿದು
ಒಬ್ಬರನ್ನೊಬ್ಬರು ಗುರಿಯಿಟ್ಟು ಕೊಲ್ಲಲು
ಪುರಾವೆ ಪತ್ರಗಳ ಹಿಡಿದು
ದೇವರಿಗೆ ಹೊರಟಿವೆ ರಾಜಕೀಯ ಪಾತ್ರಧಾರಿಗಳು*
ಬಣ್ಣಬಣ್ಣದ ಹುಲಿವೇಷದವುಗಳು.

ಆಣೆ ಪ್ರಮಾಣ ಪ್ರತಿಜ್ಞೆಗಳಿಗೆ
ಎಚ್ಚರಿದ್ದಂತೆಯೇ ಇದ್ದ ದೇವರು
ಇಬ್ಬದಿಯ ಗಂಟುಮುಖಗಳ ನಡುವೆ
ಗುಮ್ಮಾಗಿ ನಗುವುದಾ ಕಂಡೆ.

ಕಂಡೆಕಂಡೆ ತುಕ್ಕುಹಿಡಿದ ಖಾಲಿಕೊಡಗಳ
ಬುಡಬುಡಿಕೆ ಭರ್‍ಚಿ ಗುರಾಣಿ ಎಸೆದಾಟ
ದೇವರು ಕಾಣಿಸಿಯೇ ಕಾಣುವನೆಂಬ
ಭರವಸೆ ಹೊತ್ತು ಕಣ್ಣುಮುಚ್ಚಿ ತುಟಿಬಿಚ್ಚಿ
ಪಿಟಿಪಿಟಿಸುವ ಸಮಯಸಾಧಕರ.

ತಣ್ಣನೆಯ ಬೆಳಕಿನಾ ನಡುವೆ
ಕಿವುಡ ಮೂಕ ಹೆಳವನಾಗಿ ಕಲ್ಲಿನೊಳಗೆ
ಕಣ್ಣು ಪಿಳಿಕಿಸದೆ ಕತ್ತಲೆ ಕೋಣೆಯಲಿ
ಇವರಂಥವರೇ ತೊಡಿಸಿದ ಮುಖವಾಡದೊಳಗೆ
ಉಸಿರು ಬಿಗಿಹಿಡಿದು ಇವರಂತೆಯೇ
ಮೇಲೆ ನಗುಮುಖ ಹೊಂದಿರುವ ದೇವರು ನಗುವುದಾ ಕಂಡೆ.

ಜರತಾರಿ ಪಂಚೆ ಉಟ್ಟ ಪಾತ್ರಧಾರಿಗಳು
ಹತ್ತೂ ಬೆರಳ ಹರಳಿನ ನಕ್ಷತ್ರಕರು
ಕುಂಕುಮ ಶ್ರೀಗಂಧ ಪೂಸಿತರು
ದೇವರನು ಮಾತನಾಡಿಸಿಯೇ ಬಂದಂತೆ
ಕಚ್ಚಾಡಿದ್ದೇ ಕಚ್ಚಾಡಿ ನಂಜೇರಿಸಿಕೊಂಡು
ಸುರಿವ ಮಳೆಯೊಳಗೆ ಭಾಷಣ ಬಿಗಿದದ್ದು ನೋಡಿ
ದೇವರು ನಕ್ಕ.
ಮಂತ್ರಿಗಳಂತೆ ಇವು ಅಲ್ಲಲ್ಲ ತಂತ್ರಿಗಳು.
ಕಂಡೆ ಕಂಡೆ ಮತ್ತೊಮ್ಮೆ ಇನ್ನೊಮ್ಮೆ
ದೇವರು ನಗುವುದಾ ಕಂಡೆ.

ರಾತ್ರಿಗೆ ಸುಸ್ತಾದ ದೇವನ ಹೂಹಾರ
ಮುಖವಾಡ ತೆಗೆದಿಟ್ಟು ಪೂಜಾರಿ
ಹಗುರಾಗಿ ಹಣ್ಣು ಹಂಪಲ ಹೊತ್ತುಕೊಂಡು ಹೋದದ್ದೇ-
ಬೆತ್ತಲೆ ದೇವರು ಸುಸ್ತಾಗಿ
ಗಡದ್ದಾಗಿ ನಿದ್ದೆಗೆ ಜಾರಿದಾಗಲೂ
ಈ ಯಂತ್ರ ಮಂತ್ರ ತಂತ್ರದವರ
ಕಂಬಿ ಕಟಕಟೆಯ ಶಿಕ್ಷೆ ನೋಡಿ
ಕೈಯಲೊಂದು ಏಕತಾರಿ ಕೊಡಬೇಕಿವಕೆನ್ನುತ
ದೇವರು ಗಹಗಹಿಸಿ ನಗುವುದಾ ಕಂಡೆ
ದೇವರು ಬಿದ್ದು ಬಿದ್ದು ನಗುವುದ ಕಂಡೆ.

* [ಮಾಜಿ ಮಂತ್ರಿಗಳು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ – ಧರ್ಮಸ್ಥಳದ ಮಂಜುನಾಥನ ಎದುರು. ಮಂತ್ರಿ ಕಿಮ್ಮನೆ ರತ್ನಾಕರ – ಮಾರಿಕಾಂಬ ದೇವಸ್ಥಾನದಲ್ಲಿ.]
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...