Home / ಕವನ / ಕವಿತೆ / ದೇವರು ನಗುವುದಾ ಕಂಡೆ

ದೇವರು ನಗುವುದಾ ಕಂಡೆ

ಪೇಪರಿನ ಬಾಣಬತ್ತಳಿಕೆಗಳ ಹಿಡಿದು
ಒಬ್ಬರನ್ನೊಬ್ಬರು ಗುರಿಯಿಟ್ಟು ಕೊಲ್ಲಲು
ಪುರಾವೆ ಪತ್ರಗಳ ಹಿಡಿದು
ದೇವರಿಗೆ ಹೊರಟಿವೆ ರಾಜಕೀಯ ಪಾತ್ರಧಾರಿಗಳು*
ಬಣ್ಣಬಣ್ಣದ ಹುಲಿವೇಷದವುಗಳು.

ಆಣೆ ಪ್ರಮಾಣ ಪ್ರತಿಜ್ಞೆಗಳಿಗೆ
ಎಚ್ಚರಿದ್ದಂತೆಯೇ ಇದ್ದ ದೇವರು
ಇಬ್ಬದಿಯ ಗಂಟುಮುಖಗಳ ನಡುವೆ
ಗುಮ್ಮಾಗಿ ನಗುವುದಾ ಕಂಡೆ.

ಕಂಡೆಕಂಡೆ ತುಕ್ಕುಹಿಡಿದ ಖಾಲಿಕೊಡಗಳ
ಬುಡಬುಡಿಕೆ ಭರ್‍ಚಿ ಗುರಾಣಿ ಎಸೆದಾಟ
ದೇವರು ಕಾಣಿಸಿಯೇ ಕಾಣುವನೆಂಬ
ಭರವಸೆ ಹೊತ್ತು ಕಣ್ಣುಮುಚ್ಚಿ ತುಟಿಬಿಚ್ಚಿ
ಪಿಟಿಪಿಟಿಸುವ ಸಮಯಸಾಧಕರ.

ತಣ್ಣನೆಯ ಬೆಳಕಿನಾ ನಡುವೆ
ಕಿವುಡ ಮೂಕ ಹೆಳವನಾಗಿ ಕಲ್ಲಿನೊಳಗೆ
ಕಣ್ಣು ಪಿಳಿಕಿಸದೆ ಕತ್ತಲೆ ಕೋಣೆಯಲಿ
ಇವರಂಥವರೇ ತೊಡಿಸಿದ ಮುಖವಾಡದೊಳಗೆ
ಉಸಿರು ಬಿಗಿಹಿಡಿದು ಇವರಂತೆಯೇ
ಮೇಲೆ ನಗುಮುಖ ಹೊಂದಿರುವ ದೇವರು ನಗುವುದಾ ಕಂಡೆ.

ಜರತಾರಿ ಪಂಚೆ ಉಟ್ಟ ಪಾತ್ರಧಾರಿಗಳು
ಹತ್ತೂ ಬೆರಳ ಹರಳಿನ ನಕ್ಷತ್ರಕರು
ಕುಂಕುಮ ಶ್ರೀಗಂಧ ಪೂಸಿತರು
ದೇವರನು ಮಾತನಾಡಿಸಿಯೇ ಬಂದಂತೆ
ಕಚ್ಚಾಡಿದ್ದೇ ಕಚ್ಚಾಡಿ ನಂಜೇರಿಸಿಕೊಂಡು
ಸುರಿವ ಮಳೆಯೊಳಗೆ ಭಾಷಣ ಬಿಗಿದದ್ದು ನೋಡಿ
ದೇವರು ನಕ್ಕ.
ಮಂತ್ರಿಗಳಂತೆ ಇವು ಅಲ್ಲಲ್ಲ ತಂತ್ರಿಗಳು.
ಕಂಡೆ ಕಂಡೆ ಮತ್ತೊಮ್ಮೆ ಇನ್ನೊಮ್ಮೆ
ದೇವರು ನಗುವುದಾ ಕಂಡೆ.

ರಾತ್ರಿಗೆ ಸುಸ್ತಾದ ದೇವನ ಹೂಹಾರ
ಮುಖವಾಡ ತೆಗೆದಿಟ್ಟು ಪೂಜಾರಿ
ಹಗುರಾಗಿ ಹಣ್ಣು ಹಂಪಲ ಹೊತ್ತುಕೊಂಡು ಹೋದದ್ದೇ-
ಬೆತ್ತಲೆ ದೇವರು ಸುಸ್ತಾಗಿ
ಗಡದ್ದಾಗಿ ನಿದ್ದೆಗೆ ಜಾರಿದಾಗಲೂ
ಈ ಯಂತ್ರ ಮಂತ್ರ ತಂತ್ರದವರ
ಕಂಬಿ ಕಟಕಟೆಯ ಶಿಕ್ಷೆ ನೋಡಿ
ಕೈಯಲೊಂದು ಏಕತಾರಿ ಕೊಡಬೇಕಿವಕೆನ್ನುತ
ದೇವರು ಗಹಗಹಿಸಿ ನಗುವುದಾ ಕಂಡೆ
ದೇವರು ಬಿದ್ದು ಬಿದ್ದು ನಗುವುದ ಕಂಡೆ.

* [ಮಾಜಿ ಮಂತ್ರಿಗಳು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ – ಧರ್ಮಸ್ಥಳದ ಮಂಜುನಾಥನ ಎದುರು. ಮಂತ್ರಿ ಕಿಮ್ಮನೆ ರತ್ನಾಕರ – ಮಾರಿಕಾಂಬ ದೇವಸ್ಥಾನದಲ್ಲಿ.]
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...