Home / ಕವನ / ಕವಿತೆ / ಬಾಯ ಬಂಧಿಸಿದ ಬಸವ

ಬಾಯ ಬಂಧಿಸಿದ ಬಸವ

(ಒಂದು ರೂಪಕ ಕಥನ)

ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು,
ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು.
ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ
ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ!

ಹುರುಳಿ ಹೆಸರು ಅಲಸಂದೆಯವರೆಗಳ ಬಳ್ಳಿಯು ಬಿತ್ತರಿಸಿ,
ಧರಣಿಯು ಧರಿಸಿದ ಹಸಿರುಡಿಗೆಯ ತೆರ ತೋರಿತು ಕಂಗೊಳಿಸಿ,
ಕರಿಯ ಕುಪ್ಪಸಕೆ ಹಸಿರು ನವಿರೆಳೆಯ ಸುಳಿವು-ಮೊಗ್ಗೆ ತಗೆದು,
ಧರಿಸಿದ ಪರಿಯಲಿ ಎರೆಯ ನೆಲದ ಹತ್ತಿಯ ಬೆಳೆ ಮಿರುಗಿದುದು.

ಕಿರುಮುತ್ತುಗಳೊಳು ಸಮೆದ ಪೆಂಡೆಯದ ದಂಡೆಯ ತೆರದಿಂದೆ
ಹುರಿನವಣೆಯ ತೆನೆಗಳು ತೊನೆದಾಡುತ ಮೆರೆದುವಂದದಿಂದೆ.
ಜೋಳದ ಬೆಳೆಯನು ಕೊಯಿದೊಟ್ಟಿದ ಗೂಡುಗಳೋರಣದಿಂದೆ
ತೋರಿದುವಾ ಭೂರಮಣಿಯ ಧಾನ್ಯಾಗಾರದಂದದಿಂದೆ.

ಇಂತಿದನೆಲ್ಲವ ನೋಡುತ ನಡೆದಿರೆ, ಬಾಯಿಜಾಳಿಗೆಯಲಿ
ಬಾಯನು ಬಿಗಿದಾ ಹೋರಿಯೊಂದು ನಿಂದಿಹುದಾ ಹೊಲದಲ್ಲಿ.
ಸುತ್ತಲೆಲ್ಲವೂ ಕತ್ತಲಿಸಿರೆ ಬೆಳೆ, ಅದನು ನೋಡದಿಹುದು;
ಕುದಿ ಸಿಲುಕಿದವೊಲು ಕಂಬನಿಗಳ ಸುರಿಸುತ ತಾನಿಹುದು

ಮರುಕ ಮೂಡೆ ನಾನದರ ಬಳಿಗೆ ನಡೆತಂದು ವಿಚಾರಿಸಿದೆ :
ಹಿರಿಯ ಹೋರಿ ನೀನೇತಕೆ ಅಳುತಿಹೆ ? ಹೇಳೆನ್ನಯ ಮುಂದೆ
ಇನಿತು ಕೇಳಲಾ ಬಸವನು ಬಿಸಿಯುಸಿರನ್ನು ಬಿಡುತಲಂದು,
ಬಿತ್ತರಿಸಿತು ತನ್ನಯ ಬನ್ನದ ಕತೆಯನು ಬಗೆಯೊಳು ಬೆಂದು:

‘ಏನು ಹೇಳುವುದು ನನ್ನ ಬವಣೆಯನು ದೀನಜೀವಿ ನಾನು,
ಮಾನವರೆನ್ನನು ಕಾಡುವ ರೀತಿಯನ್ನು ಬಣ್ಣಿಸುವೆನು?
ಸಕಲ ಜೀವಿಗಳ ಸಲಹಲು ದೇವನು ನೆಲವನು ನಿಲಿಸಿಹನು;
ವಿಕಲಮತಿಯ ಮನುಜರು ತಮ್ಮೊಬ್ಬರದೆಂದು ತಿಳಿವರಿದನು.

ಉತ್ತು ನೆಲವ ನಾ ಬಿತ್ತುವೆ; ಕಸ-ಕಳೆ ಕಿತ್ತು ಬೆಳೆಗಳನ್ನು
ನಿತ್ಯದಿ ಸಲಹುತ ಹೊತ್ತಿಗೆ ಹೊಸ ಹೊಸ ತುತ್ತ ನೊದವಿಸುವೆನು.
ಹವಳದಂತೆ ಹಸನಾದ ಗೋದಿಗಳು ಹವಣದ ಕಡಲೆಗಳು.
ನವಣೆ-ರಾಗಿಗಳು ಮುತ್ತಿನ ತೆರದಲಿ ಮಿನುಗುವ ಜೋಳಗಳು!

ಮಲ್ಲಿಗೆ ಮೊಗ್ಗೆಯ ಪೋಲ್ವ ಕುಸಿಬೆ, ಮೆಲ್ಲುವ ನೆಲಗಡಲೆಗಳು
ಎಲ್ಲವು ನನ್ನಯ ದುಡಿಮೆಯಿಂದಲೇ ಮನುಜಗೆ ದೊರೆಯುವವು.
ಹಿರಿಹಿರಿಗಾಳನು ಹರುಷದಲೊಯ್ಯುತೆ ಹೊರೆಯುವರೊಡಲನ್ನು,
ತವುಡು ಸಿವುಡು ಕಸಗಾಳು, ಹೊಟ್ಟ ನೆನಗೀವರು ಕೆಟ್ಟುದನು.

ಮಿದುವಾಸಿಗೆ ಬಗೆಬಗೆಯ ಬೆಲೆಯ ಬಟ್ಟೆಗಳನ್ನು ನಿರ್‍ಮಿಸುವ
ಹದದ ಹತ್ತಿಯನ್ನು ಒದವಿಸಿ ಸಂತತವೀಯುವ ಸಮ್ಮುದವ.
ಪರಿಪರಿ ಪಯಿರು-ಬೆಳೆಗಳಿಂದಲಿ ನೆಲಸಿರಿಯನು ಸಿಂಗರಿಸಿ,
ನಿರುತವು ಸಂತಸವೀಯುವೆ ಸರ್ವಜನಂಗಳ ಮನರಮಿಸಿ.

ನನ್ನ ನೆರವಿನೊಳೆ ಮಣ್ಣು ಕಲ್ಲು-ಮರ-ಮಟ್ಟುಗಳನು ತರುತ
ಚೆನ್ನು ಚೆನ್ನು ಮನೆಯನ್ನು ಮಾಡಿ ವಾಸಿಸುವರು ಸುಖಪಡುತ.
ನೀರುಣಿಸಲಾ ತೋಟಕೆ ನೀರಿನ ಮೊಟ್ಟೆಯನೆಳೆಯುವೆನು;
ಭಾರವ ಹೊರುತಲಿ ಎಲ್ಲ ಧಾನ್ಯಗಳ ಮನೆಗೊಯಿದೀಯುವೆನು.

ಇಂತು ಮನುಜರಿಗೆ ಸೌಖ್ಯದ ಸಾಧನೆ ನಿಂತು ಒದವಿಸಿದರೂ
ಸಂತತವೂ ನನ್ನಯ ಸುಖ ನೋಡದೆ ಪೀಡೆಯ ಕೊಡುತಿಹರು.
ಸದಾಕಾಲ ನನ್ನನೆ ದುಡಿಸುತೆ ಇಂತಹ ಬೆಳೆ ಪಡೆಯುವರು;
ಇದೋ ನೋಡು, ಈ ಬಗೆ ಬಾಯ್‌ಬಿಗಿಯುತ ನನಗೇ ತಿನಗೊಡರು.

ಹೇಳಿದಂತೆ ಕೇಳಲು ಹೆಣೆವರು ಹದಿನೆಂಟು ಹೊಂಚುಗಳನು,
ಕೋಲುಬಾರು ಹಣೆಹಗ್ಗ ಗುದಿಗೆಯಾ ಮೂಗುದಾರಗಳನು
ಹೂಂಕರಿಸೆನ್ನಯ ಬಂಧುವರ್ಗಕೀಯಲು ಎಚ್ಚರಿಕೆಯನು-
ಆಂಕಿತವಿಲ್ಲವು ನನಗೆ; ನೋಡು ಬಿಗಿದಿರುವರು ಬಾಯನ್ನು.

ನನ್ನ ದುಡಿಮೆಯೊಳೆ ಸುಮ್ಮಾನವ ಪಡೆದೆನ್ನನು ಲೆಕ್ಕಿಸದೆ
ಬನ್ನವು ! ಗೋದಲೆಯೊಳಗೆ ಬಿಗಿಯುವರು ಕೊರಳುಗಣ್ಣಿಯಿಂದೆ
ಅನುಭವಿಸಲು ಸ್ವಾತಂತ್ರ್ಯವನಿಚ್ಛಿಸಿ, ಯೋಚಿಸಿ ಮನದೊಳಗೆ-
ಘನಗರ್ಜನೆಯಲಿ ಕೂಗುತ ನಾ ನಸು ಚರಿಸಲಡವಿಯೊಳಗೆ-

ದುರುಳ ಮನುಜನೀಕ್ಷಿಸಿ ಶಿಕ್ಷಿಸುವನು ಬಿಗಿದೆನ್ನನು ಕಟ್ಟಿ,
ಮರುಳನು ನಾನೀ ಧರೆಯೊಳು ಜನ್ಮಿಸಿ ಏನು ಸೌಖ್ಯ ಪಟ್ಟೆ ?
ಮಾನವರಿವರಲ್ಲವು ದಾನವರೇ! ಸತ್ಯವು ತಿಳಿ ನೀನು!
ಏನು ಮಾಡಲೀ ಕ್ರೂರರ ಬಲೆಯಿಂ ಜಾರಲುಪಾಯವನು ?

ನಂದಿವಾಹನಾ | ಚಂದ್ರಶೇಖರಾ | ವೃಂದಾರಕ ವಿನುತಾ |
ಬಂಧದಿಂದ ನಮ್ಮವರೆಲ್ಲರನೂ ತಾರಿಸೆನ್ನ ತಾತಾ !’
ಇಂತು ಬೆಸಸಿ ಬಿಸುಸುಯಿದು ವ್ಯಸನದಲಿ ಮಿಂದು ಗೊಂದೆ ತಾನು
ನಿಂತಿತು ಮುಗಿಲನು ನೋಡುತ ಸ್ಮರಿಸುತ ಪರಮೇಶ್ವರನನ್ನು

ಎತ್ತಿನ ಕುತ್ತದ ವೃತ್ತವನ್ನು ಕೇಳುತ್ತ ಚಿತ್ತದಲ್ಲಿ
ಒತ್ತರಿಸಿದ ವ್ಯಥೆಯನು ಹತ್ತಿಕ್ಕುತ ಮನೆಗೆ ಬಂದೆ ಮರಳಿ
ಎತ್ತಿನ ಕಧೆಗೀ ಭುವನದ ದೀನ-ದರಿದ್ರರ ಬಾಳ್ಗತೆಯು
ಸತ್ಯವು ಸಮವಿಹುದೆನ್ನುತ ಬಂದಿತು ಬಗೆಯೊಳು ಭಾವನೆಯು !

‘ಸರುವ ಜೀವಿಗಳಿಗೂ ಸ್ವಾತಂತ್ರ್ಯದ ಸುಖವನಿತ್ತು ನೀನು
ಪೊರೆಯೊ!’ ಎನುತ ಪರಮಾತ್ಮನ ಮನದೊಳಗಂದು ಧ್ಯಾನಿಸಿದನು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...