Home / ಕವನ / ಕವಿತೆ / ಪಕ್ಷಿಸಂದೇಶ

ಪಕ್ಷಿಸಂದೇಶ

ಸೂರ್ಯ ಬರುವುದ ಕಂಡು ಚಿಂತೆಯ ತೊರೆದು ಪಕ್ಷಿಗಣಂಗಳು
ಮರದ ಕೊಂಬೆಯ ಮೇಲೆ ಬರುತಲಿ ಜಗವನೆಬ್ಬಿಸ ಬಯಸುತ
ಮಲಗಿ ನಿದ್ರಿಪ ಜನರ ಕಿವಿಯಲಿ ಮಧುರಗಾನವ ಹಾಡುತ
ಸವಿಯ ದನಿಯಿಂದುಲಿದು ತೊಟ್ಟಿಲ ಮಗುವ ಕಿಲಿಪಿಲಿ ನಗಿಸುತ.

ಒಂದು ದನಿಯೇ ಒಂದು ರಸವೇ ರಾಗಭಾವದ ಮೇಳವೇ
ಯಾರಿಗೋ ಆನಂದವೀಯುತ ಸ್ವಾರ್ಥ ಬುದ್ದಿಯ ಮರೆತಿವೆ.
ಗೂಡತೊರೆಯುತ ಜಗವ ಕರೆಯುತ ಬದುಕಿನಿರವನು ಹೇಳವೇ
ಅದನು ಹೊಗಳುವ ಜನರನರಿಯದು ತಮ್ಮ ಹೆಮ್ಮೆಯ ನೆನೆವುವೇ.

ಕಾಡ ಮರದಲಿ ಮನೆಯ ಮಾಡುತ ಬೆಳೆಸಿ ಮಕ್ಕಳ ಮೋಹದಿ
ನೋಡದೀ ಜಗದಾಗು-ಹೋಗನು ಮನಕೆ ತಾರದೆ ಸೋಕದೆ
ತನ್ನ ವಂಶಕೆ ಬಂದ ಶಾಂತಿಯ ತಾಳ್ದು ಹಿಂಸೆಯ ಬಗೆಯದೆ
ಆಗ ದೊರೆತುದೆ ದೇವನಿತ್ತುದೆ ಮಹತು ಎನ್ನುತ ಕೊಳ್ವುದು.

ನಿಮ್ಮ ಕರೆಯಂ ಕಾಯದೀ ಖಗ ಬಂದು ಅಂಗಳಕೆರಗುತ
ನಿಮ್ಮ ಕರುಣಾಹೃದಯವರಿಯುತ ನಿಂದು ಹೊಸ್ತಿಲಕೆರೆಯುತ
ಬಂದು ಸಂತಸದಿಂದ ಬಾಲವನಲುಗಿಸುತ್ತಲಿ ಹಾಡುತ
ಶುಭವ ನೀಡುತ ಹೋಗಿಬರುವೆನು ಎಂದು ನುಡಿವುದು ಹಾರುತ.

ಕಣ್ಣ ತೆರೆಸುತ ಎದೆಯನರಳಿಸಿ ಅಂತರಂಗವ ಕೆರಳಿಸಿ
ಹಾರಿಹೋಯಿತು ದನಿಯು ಮರುದನಿಗೂಡಲು ಆತ್ಮವು ಚಿಮ್ಮಿತು
ಆವ ಬಣ್ಣವು ಬೆಡಗು ಬಿನ್ನಣ ಚಲುವು ನಿಲ್ಲುವ ಭಂಗಿಯು
ಆರಿಗಿಹುದೀ ಭಾವ ವೈರಾಗ್ಯಗಳು ಸುಮ್ಮನೆ ದೊರೆವುದೆ?

ಒಂದು ದನಿಯಲಿ ಹಲವು ದುಃಖದ ಮಬ್ಬು ಮರೆಸುವ ಶಕ್ತಿಯೆ
ಚಪಲ ನೋಟದಿ ಜಗದ ಬಗೆಗಳನಳಿಸಿ ತೋರುವ ಮಾಟವೆ!
ಒಳಗಿನೊಳಗಿನ ಚೇತನವನೆಳ್ಚರಿಸಿ ಸಲಹದೆ ಒಮ್ಮೆಲೆ
ಪಕ್ತಿಯಿಂಚರದಿಂದ ದೇವರು ತೊಟ್ಟರೇ ಮೌನವ್ರತ.

ಲೋಕದೆಲ್ಲೆಡೆಯಲ್ಲಿ ತನ್ನ ಗಂಭೀರಮೂರ್ತಿಯ ಹರಿಸುತ
ನಲಿವ ಪೆರ್ಮೆಯದೊಂದು ಆರನು ಲೆಕ್ಕಿಸದ ಬಿಸವಂದವು
ಸಾವು ನೋವಿನ ಬಾಧೆಗಳುಕದೆ ತನ್ನಯದಿ ಹರಿದಾಡುತ
ಇಂತು ಜೀವನಮೋಕ್ಷವೆಂಬುದ ಸಾರಿ ಲೋಕದಿ ನಡೆವುದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...