Home / ಕವನ / ಕವಿತೆ / ಪಕ್ಷಿಸಂದೇಶ

ಪಕ್ಷಿಸಂದೇಶ

ಸೂರ್ಯ ಬರುವುದ ಕಂಡು ಚಿಂತೆಯ ತೊರೆದು ಪಕ್ಷಿಗಣಂಗಳು
ಮರದ ಕೊಂಬೆಯ ಮೇಲೆ ಬರುತಲಿ ಜಗವನೆಬ್ಬಿಸ ಬಯಸುತ
ಮಲಗಿ ನಿದ್ರಿಪ ಜನರ ಕಿವಿಯಲಿ ಮಧುರಗಾನವ ಹಾಡುತ
ಸವಿಯ ದನಿಯಿಂದುಲಿದು ತೊಟ್ಟಿಲ ಮಗುವ ಕಿಲಿಪಿಲಿ ನಗಿಸುತ.

ಒಂದು ದನಿಯೇ ಒಂದು ರಸವೇ ರಾಗಭಾವದ ಮೇಳವೇ
ಯಾರಿಗೋ ಆನಂದವೀಯುತ ಸ್ವಾರ್ಥ ಬುದ್ದಿಯ ಮರೆತಿವೆ.
ಗೂಡತೊರೆಯುತ ಜಗವ ಕರೆಯುತ ಬದುಕಿನಿರವನು ಹೇಳವೇ
ಅದನು ಹೊಗಳುವ ಜನರನರಿಯದು ತಮ್ಮ ಹೆಮ್ಮೆಯ ನೆನೆವುವೇ.

ಕಾಡ ಮರದಲಿ ಮನೆಯ ಮಾಡುತ ಬೆಳೆಸಿ ಮಕ್ಕಳ ಮೋಹದಿ
ನೋಡದೀ ಜಗದಾಗು-ಹೋಗನು ಮನಕೆ ತಾರದೆ ಸೋಕದೆ
ತನ್ನ ವಂಶಕೆ ಬಂದ ಶಾಂತಿಯ ತಾಳ್ದು ಹಿಂಸೆಯ ಬಗೆಯದೆ
ಆಗ ದೊರೆತುದೆ ದೇವನಿತ್ತುದೆ ಮಹತು ಎನ್ನುತ ಕೊಳ್ವುದು.

ನಿಮ್ಮ ಕರೆಯಂ ಕಾಯದೀ ಖಗ ಬಂದು ಅಂಗಳಕೆರಗುತ
ನಿಮ್ಮ ಕರುಣಾಹೃದಯವರಿಯುತ ನಿಂದು ಹೊಸ್ತಿಲಕೆರೆಯುತ
ಬಂದು ಸಂತಸದಿಂದ ಬಾಲವನಲುಗಿಸುತ್ತಲಿ ಹಾಡುತ
ಶುಭವ ನೀಡುತ ಹೋಗಿಬರುವೆನು ಎಂದು ನುಡಿವುದು ಹಾರುತ.

ಕಣ್ಣ ತೆರೆಸುತ ಎದೆಯನರಳಿಸಿ ಅಂತರಂಗವ ಕೆರಳಿಸಿ
ಹಾರಿಹೋಯಿತು ದನಿಯು ಮರುದನಿಗೂಡಲು ಆತ್ಮವು ಚಿಮ್ಮಿತು
ಆವ ಬಣ್ಣವು ಬೆಡಗು ಬಿನ್ನಣ ಚಲುವು ನಿಲ್ಲುವ ಭಂಗಿಯು
ಆರಿಗಿಹುದೀ ಭಾವ ವೈರಾಗ್ಯಗಳು ಸುಮ್ಮನೆ ದೊರೆವುದೆ?

ಒಂದು ದನಿಯಲಿ ಹಲವು ದುಃಖದ ಮಬ್ಬು ಮರೆಸುವ ಶಕ್ತಿಯೆ
ಚಪಲ ನೋಟದಿ ಜಗದ ಬಗೆಗಳನಳಿಸಿ ತೋರುವ ಮಾಟವೆ!
ಒಳಗಿನೊಳಗಿನ ಚೇತನವನೆಳ್ಚರಿಸಿ ಸಲಹದೆ ಒಮ್ಮೆಲೆ
ಪಕ್ತಿಯಿಂಚರದಿಂದ ದೇವರು ತೊಟ್ಟರೇ ಮೌನವ್ರತ.

ಲೋಕದೆಲ್ಲೆಡೆಯಲ್ಲಿ ತನ್ನ ಗಂಭೀರಮೂರ್ತಿಯ ಹರಿಸುತ
ನಲಿವ ಪೆರ್ಮೆಯದೊಂದು ಆರನು ಲೆಕ್ಕಿಸದ ಬಿಸವಂದವು
ಸಾವು ನೋವಿನ ಬಾಧೆಗಳುಕದೆ ತನ್ನಯದಿ ಹರಿದಾಡುತ
ಇಂತು ಜೀವನಮೋಕ್ಷವೆಂಬುದ ಸಾರಿ ಲೋಕದಿ ನಡೆವುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...