Home / ಕವನ / ಕವಿತೆ / ಕುರಿಯಮಾತು

ಕುರಿಯಮಾತು

ಹೈಮವತಿಯೇ ತಾಯಿ- ಬಗೆ ಬಗೆಯ ರೂಪದಲಿ
ಭೂಮಿಯೊಳು ತಾ ಬಂದು- ನಲಿಯುವಳು ದೇಹದಲಿ
ಅವಳ ಕಿಡಿ ನಮ್ಮೊಳಗೆ
ನಲಿಯುತಿದೆ ಒಳಗೊಳಗೆ.

ಅವಳೆಮಗ ಹೆತ್ತಬ್ಬೆ- ಆದರೊಂದೇ ಚಿಂತೆ
ನರರೆಂಬ ಸೋದರರು- ಪ್ರೇಮ ತೊರೆದವರಂತೆ
ಬಲಿಯೀವರೆಮ್ಮನ್ನು
ಕೇಳುವವರಾರಿನ್ನು.

ಪರದೇಶಿ ಕುರಿಗಳಾವ್, ಎಮ್ಮ ನೆತ್ತರು ಮಾಂಸ
ಸವಿಯಂತೆ, ಬಯಸುವಳು-ಕೂಲಿಸುತ್ತ ಅವಳಂಶ
ಮಾತು ಬಾರದ ಜಂತು
ಪ್ರಾಣ ಕೊಡುತಿಹುದೆಂತು.

ಕರುಣದಿಂ ಕಣ್ಣೀರ- ಸುರಿಸುವಳ ದೂರುವರು
ಸಹೃದಯೆಯ ಕಲುಹೃದಯಳಂ ಮಾಡಿ ತೋರುವರು
ಎಮ್ಮ ಹೆಣ ತಿನ್ನುವರು
ರಕ್ತಮಂ ಕುಡಿಯುವರು.

ಚೋರ ಕರ್ಮಿಗಳಲ್ಲಿ- ಪ್ರಾಣಹಿಂಸಕರಲ್ಲ
ಹಸಿ ಹುಲ್ಲು ಎಲೆ ತರಗು- ಇದು ನರರ ಸ್ವತ್ತಲ್ಲ
ಸೊಪ್ಪುಸದೆ ದೇವಿಯದು
ಹರಿವ ಜಲ ತಾಯಿಯದು.

ಮತಿಯುಂಟು ಹಿತರುಂಟು- ಬಂಧು ಬಾಂಧವರುಂಟು
ಪರಮಾತ್ಮನರಿವುಂಟು-ಕಷ್ಟಸುಖದರಿವುಂಟು
ನಮಗಾರು ದಿಕ್ಕಿಲ್ಲ
ತಂದೆತಾಯಿಗಳಿಲ್ಲ.

ನಿಮ್ಮ ಕುಲ ಬಾಯ್ತುತ್ತು – ಮೂಕಜಂತುಗಳರರೆ
ತಾಯ್ಬೆಳಸಿ ಸಲಹಿರುವ- ಈ ದೇಹ ನಿಮಗೆ ಸೆರೆ
ನಾವಿರಲು ನಿಮಗಾಗಿ
ಕೂಲಲೇಕೆ ಮರೆಯಾಗಿ.

ಎಮ್ಮ ಮೈ ರೋಮಗಳು- ತೊಗಲು ಮಾಂಸವು ರಕ್ತ
ನಿಮಗೆರವು ಮಾಡಿದಳು- ಜನಕ ಇದುವೇ ಭುಕ್ತ
ಎಮ್ಮ ಕೊರಳನು ಕೊಯ್ವ
ಕಟುಕರಾದಿರಿ ಹೊಯ್ವ.

ಕುತ್ತಿಗೆಯ ಕೊಯ್ವಾಗ- ನಿಮಗಾಗಿ ಮರುಗುವೆವು
ಅತ್ತಲಾ ಹೈಮವತಿ- ಕರವಾಳ ಮಸೆಯುವಳು
ನಿಮ್ಮಸುವ ಸೆಳೆಯುವಳು
ಆಮೇಲೆ ಕುಣಿಯುವಳು.

ನರಕುರಿಯು ನೀವಂತ- ಕುರಿಜನ್ಮ ನಿಮಗಂತೆ
ನರರಾವು ಮುಂದಂತೆ- ನಿಮ್ಮನುಳಿಸುವೆವಂತೆ
ಇಂತಬ್ಬೆ ಹೇಳುವಳು
ಕಣ್ಣೀರ ಹರಿಸುವಳು.

ಹಿಡಿಕಾಳು ಬಯಸಿಲ್ಲ- ನಿಮ್ಮಿಂದ ಬದುಕಿಲ್ಲ
ಕೆಡಕುಗಳ ಮಾಡಿಲ್ಲ- ಬಲ್ಲಳಿದನವಳೆಲ್ಲ
ನಿಮಗಾಗಿ ಆ ರೂಪ
ತಾಳಿದಳು ಬಹು ಕೋಪ.

ನಮ್ಮಿಂದ ನಿಮ್ಮಿರವು-ನಿಮ್ಮಿಂದ ನಾವಲ್ಲ
ನಮ್ಮ ಮುಕ್ತಿಗೆ ಮಾತೆ-ಹೊಣೆಯಂತೆ ನೀವಲ್ಲ
ಕೋಪದಲಿ ಸಾಯದಿರಿ
ಪಾಪದೊಳು ಬೀಳದಿರಿ.

ನಮ್ಮ ಕೊಂದರೆ ವ್ಯಾಧಿ-ಮಾರಿ ರೂಪದಿ ಬಂದು
ನಿಮ್ಮ ತನು ಕುರಿಹೆಣವು-ಬಿದ್ದಂತೆ ನೆಲೆ ನಿಂದು
ಬಲಿಗೊಳ್ವುದರಿಯುವಿರಿ
ಸೆಳೆವುದನು ಕಾಣುವಿರಿ.

ತಾಯಿಯಂ ಪೂಜಿಸಿರಿ-ಫಲಪುಷ್ಪಚಯಗಳಿಂ
ಆ ವಿಮಲೆ ಕಾಯುವಳು-ನಲಿದೆಲ್ಲ ಕರಗಳಿಂ
ಕಾಯಬೇಹುದಹಿಂಸೆ
ಪಾಪವದುವೇ ಹಿಂಸ.

ಸಾವೆವೆಂಬಾ ದುಃಖ-ನಮಗಿಲ್ಲ ಲೋಕದಲಿ
ಕೊಲ್ಲದಿರಿ ಕುರಿಗಳಂ-ಸೋದರರೆ ಮೋಸದಲಿ
ನಿಮಗೆಮಗೆ ಹೈಮವತಿ
ತಾಯಹುದು ಗುಣವಂತಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...