Home / ಕವನ / ಕವಿತೆ / ಹೊಸ ಬಾಳ ಬೆಳಕು

ಹೊಸ ಬಾಳ ಬೆಳಕು

(೧೫-೮-೪೭)

ಆ ಮಹಾತ್ಮರ ತಪವೊ ಭಕ್ತಿಭಾವದ ಗುಣವೊ
ಭಾರತಿಯ ಕಣ್ಣೀರೊ ಉಳಿದವರ ಹಸಿವೊ
ಜವಾಹರ ವಲ್ಲಭರ ರಾಜೇಂದ್ರ ಮೌಲನರ
ನಿರುತ ಪೌರುಷವೆನಲು ಬಂದುದೀ ಬೆಳಕು.

ನಿರುತ ತಾರುಣ್ಯದಲಿ ರಂಜಿಸುವ ಭಾರತಿಯು
ಪರತಂತ್ರ ಬಂಧನದಿ ಮುದುಕಿಯಂತಾಗಿ
ಇನ್ನೊಮ್ಮೆ ಸೆರೆಮನೆಯನೊಡೆದು ಹೊರ ತಾ ಬಂದು
ನೋಡುವಳು ಎಮ್ಮನ್ನು ಬಾಷ್ಪವನೆ ತುಂಬಿ.

ಕುಂಕುಮವ ತಳೆದಿಂದೆ ಮುತ್ತೈದೆತನದಿಂದ
ಆ ಮೊದಲ ತಾರುಣ್ಯ-ಲಾವಣ್ಯವೆಸೆಯೆ
ತಾಯಿ ನೋಡುವಳಿತ್ತ ನಗುಮೊಗದಿ ಕೃಪೆ ಬೀರಿ
ಎದೆಯರಳಿ ಕರೆಯುವಳು-ಅಡಿಗರಗಿ ನಮಿಸಿ-

ಪರದಾಸ್ಯ ಶೃಂಖಲೆಯ ಮುರಿದು ಬಂದಿಹಳೀಚೆ
ಎಲ್ಲ ಭಯಗಳ ತಳ್ಳಿ ಫಡ ನೂಕುತಾಚೆ
ಸ್ವಾತಂತ್ರ್ಯ ಬಾವುಟವ ಮೇಲೇರಿಸುವಳದಕೊ
ನಿರ್ಮಲಿನ ತೇಜದಲಿ ಬಹ ಭಂಗಿಯದಕೊ.

ಸೇತುವೆಯಲಾ ಸಾದ ವಿಂಧ್ಯವೇ ತಾಯ್ನಡುವು
ತುಹಿನಗಿರಿ ಮಣಿಮುಕುಟ ನಮ್ಮ ತಾಯ್ಗೆ
ಎಡ ಬಲಕೆ ಕೈ ನೀಡಿ ಮಕ್ಕಳನು ಹರಸುವಳು
ಆ ನಿಲುವ ನೂಡುತೀ ದರ್ಶನವ ಮಾಡಿ.

ಹೆತ್ತ ಭೂಮಿಯ ಪುಣ್ಯ ಬೆಳೆದ ಮಣ್ಣಿನ ಧರ್ಮ
ಸೂರ್ಯ-ಚಂದ್ರರ ಸತ್ಯ ಭಾರತಿಯ ತಪವು.
ನಮಗೆ ಬೆಳಕಾಯ್ತಿಂದು ನಮ್ಮ ನೆನಪಾಯ್ತೆಮಗೆ
ಎಲ್ಲಿ ನೋಡಿದರಲ್ಲಿ ತಾಯ ಪ್ರತಿಬಿಂಬ.

ಹಲವು ಕಾಲದ ತಪದಿ ಬೆಂದು ನೊಂದಿಹ ಕರುಳು
ತನ್ನ ಮಕ್ಕಳು ಕಳೆದ ನಲೆಯ ನೆನೆಯುವಳು
ವೀರ ಧರ್ಮಾಸನದಿ ಪರರೇರಿ ನಲಿಯುತಿರೆ
ಕೈದುಗಳ ಕೆಳಗಿರಿಸಿ ಕಂದಿದಳು ಚದುರೆ.

ಹಾರುತಿದೆ ತಾಯ್ಸೆರಗು ಮೇಲೇರಿ ಧ್ವಜವಾಗಿ
ಅದೊ ಕಂಪು-ಬಿಳಿ-ಹಸುರು – ಮಧ್ಯೆ ವರ ಚಕ್ರ
ಆಗಸದಿ ಮೊಗದೋರಿ ಇನ್ನೊಮ್ಮೆ ಕೆಳಗಿಳಿಯೆ
ನೆಂದೊರೆವ ತೆರದಿಂದ ಅಭಯ ತೋರುತಿದೆ.

ಮೈತ್ರಿಯಲಿಬೀಳ್ಕೊಟ್ಟು ಆಂಗ್ಲರಂ ಕಳುಹುವಳು
ತೊಡೆಯ ಸಿಂಹಾಸನದಿ ಮಕ್ಕಳನು ನಿಲಿಸಿ-
ತಾಯಿಯನಲಂಕರಿಸಿ ಶಾಂತಿಯಂ ಪೊಂದುತಲಿ
ಜೈವುಘೇಯೆನುತವರು ನಡಯುತಿಹರದಕೊ-

ಸ್ವಾತಂತ್ರಗೀತವನು ಹಾಡುತಲಿ ಭೂಮಾತೆ
ಭಾರತಿಯ ಹರಸುವಳು ನಗುಮೊಗದಿ ಬಂದು.
ಹತ್ತು ದಿಕ್ಕಿನ ಗಾಳಿ ಹಾಡುತಿದೆ ಕೀರ್ತಿಯನು
ಭರತ ಮಾತೆಯ ಪಾದರಜವಿರಿಸಿ ಪಣೆಗೆ-
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...