Home / ಕವನ / ಕವಿತೆ / ನನ್ನ ಹಾಡು

ನನ್ನ ಹಾಡು

ಭೈರವಿ


‘ಬರಿಯೆ ಬಿಸುಸುಯಿಲಿಂದಲೀ ಹಗ-
ಲಿರುಳ ಕಳೆಯುವುದೇನು-
ಸರಿಯೆ!’ ಎನುತೇನೇನೊ ಹಾಡುತ-
ಲಿರುವೆನೇಗಲು ನಾನು.

ನನ್ನ ಹಾಡುಗಳೆಲ್ಲವಿವು ಮನ-
ದನ್ನ ನಿನಗಾಗಿರುವವು;
ನನ್ನ ಹಾಡಿನ ವರ್ಣ-ವರ್ಣವು
ನಿನ್ನನೇ ಕುರಿತಿರುವುವು;

ನಿನ್ನ ನೆನಹನೆ ಮೊರೆವುವು….!
ನಿನ್ನ ನೆನಹನೆ ಮೊರೆವುವೆಲ್ಲವು
ನಿನ್ನ ಕರೆಯುತಲಿರುವುವು.


ಹಾಡ ಕೇಳುತ ಜನಗಳೆಲ್ಲರು
ಖೋಡಿಗಳೆಯುತೆ ನನ್ನ
ಏಡಿಸುತ ನಗೆಯಾಡುತಿರುವುದ
ನೋಡುತಿರುವೆನು ಚೆನ್ನ!

“ಏನು ಹಾಡಿನ ರಾಗ! ಅಳುವಿನ
ತಾನಗಳೆ ತುಂಬಿರುವುವು!”
“ಎನು ಮಾತಿನ ರೀತಿ! ಬರಿ ತಿ-
ಲ್ದಾಣವೋ ಎಂದೆನಿಪುವು!”

ಎಂಬವರ ನುಡಿ ಕೇಳಿ….
ಎಂಬವರ ನುಡಿ ಕೇಳಿ `ಅಯ್ಯೋ!’
ಎಂಬೆ ಮರುಕವ ತಾಳಿ,


ಬಾಳು ನನ್ನದು ಅಳಲ ಹೊಳೆಯೊಳೆ
ತೇಲಿ ಮುಳುಗುತಲಿರುವುದು.
ಹೇಳುವೀ ಹಾಡೊಳಗೆ ಬೇರೆಯ
ಭಾವವೆಂತದು ಬರುವುದು?

ಹಾಡು ಕವನಗಳಲ್ಲಿ ಬದುಕೇ
ಮೂಡಿಕೊಂಡಿರದೇನು?
ನೋಡಿರದ ವಸ್ತುವನು ಚಿತ್ರದಿ
ಕೂಡಿಸಲು ಬಹುದೇನು?

ಏನೆ ಜನವೆನಲೀಗ….
ಏನೆ ಜನವೆನಲೀಗ ಹಾಡುವೆ
ನಾನು ನನ್ನಯ ರಾಗ !


ಉರಿವ ಬೇಗೆಗೆ ಸಿಲುಕಿಕೊಂಡವ-
ನೊರಲುವಾ ನುಡಿಯರ್ಥವು
ಹೊರಗೆ ನಿಂತವಗಾಗುವುದೆ ಅವ-
ನರಿಯೆನೆಂಬುದು ವ್ಯರ್ಥವು

ಇರುಳು ಹಗಲಿನ ಸಿರಿಯ ಬಣ್ಣಿಸೆ
ಕುರುಡನರಿಯುವನೇನು!
ಇರುಹು ತಿಳಿಯದೆ ನನ್ನ ಹಾಡನು
ಜರಿದರಾಗುವುದೇನು!

ಬರಿಯೆ ತರನನವೆಂದು….
ಬರಿಯೆ ತರನನವೆಂದು ಬಗೆವರ
ಮರುಳಿಗೇನೆನಲಿಂದು!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...