Home / ಕವನ / ಗಝಲ್ / ಹಾರಯ್ಕೆ

ಹಾರಯ್ಕೆ


ಕೆಳದಿಯರನೊಡಗೊಂಡು ಕೆಲೆಕೆಲೆ-
ದುಲಿದು ಮೇಲಕೆ ಹಾರಿ,
ಇಳೆಯವರನಣಕಿಸುತೆ ಪಕ್ಕವ
ಕೆಳರಿ ಬಾನೆಡೆಗೇರಿ,

ತಳರುತಿಹೆ ನೀನೆಲ್ಲಿ? ಹಕ್ಕಿಯ-
ಕುಲದರಸೆ ಹೇಳಿಲ್ಲಿ!
ಗೆಳೆಯನೆಡೆ ದೊರೆಯುವುದೆ ನೀನಡೆ-
ದುಳಿವ ದಾರಿಯೊಳೆಲ್ಲಿ?

ದೊರೆತರಾತಗೆ ನೀನು….
ದೊರೆತರಾತಗೆ ನನ್ನ ಬಾಳಿನ
ಕೊರಗನರುಹುವೆಯೇನು?


ಅಳತೆಯಿಲ್ಲದ-ಹೊಳೆವ-ಕೈಗಳ
ಕಳುಹಿ ವಿಶ್ವದೊಳೆಲ್ಲಾ
ಬೆಳಕುಬಣ್ಣವ ಬಳೆವ ತಾವರೆ-
ಗೆಳೆಯ ಲಾಲಿಸು ಸೊಲ್ಲಾ!

ನನ್ನ ಮನದಳಲನ್ನು ಬರೆದಾ
ಬಿನ್ನವತ್ತಳೆಯನ್ನು
ಚೆನ್ನನಿರುವಲಿ ಕಳುಹಲಿಹೆ, ನೆರ-
ವನ್ನು ನೀಡುವೆಯೇನು?

ಒಂದೆ ಒಂದಾ ಕೈಯ….
ಒಂದೆ ಕಿರುಗೈ ಕಳುಹಿ ಓಲೆಯ-
ನೊಂದಿಸಾತಗೆ ಜೀಯ!


ಮುಮ್ಮಳೆಯ ಕಮ್ಮುಗಿಲ ಸಿಡಿಲೇ
ಹೆಮ್ಮಗಳ ಮೊರೆಕೇಳಿ
ಒಮ್ಮೆ ಒಂದೇ ನಿಮಿಷ ಕೊಡುವಿರೆ
ನಿಮ್ಮ ಗುಡುಗನು? ಹೇಳಿ!

ನಲ್ಲನೆಲ್ಲಿಹನೇನೊ! ನನ್ನದು
ಮೆಲ್ಲಲಿಯ ದನಿ ಕೇಳದು,
ಎಲ್ಲಿಯೇ ಇರಲವಗೆ ಸುದ್ದಿಯ
ಸಲ್ಲಿಸಲೆ ಬೇಕಿರುವುದು,

ಗುಡುಗಿನಾ ಮೊಳಗಿಂದೆ…
ಗುಡುಗಿ ಗರ್ಜಿಸಿ ನನ್ನ ನೆನಹನು
ಕೊಡುವೆನಾತನಿಗಿಂದೆ..


ಗಗನದೊಳು ತೇಲಾಡುತಾಡುತ
ನಗುವ ಚುಕ್ಕಿಯ ಬಳಗವೆ,
ಸೊಗಸು ನಿಮ್ಮದು ಬದುಕು ನೀವೀ
ಜಗದ ಸಾಕ್ಷಿಗಳಲ್ಲವೇ?

ಮಿಣುಕುನೋಟದೊಳೇನನೆಲ್ಲವ-
ನಿಣುಕುತಿಹ ಧ್ರುವತಾರೆಯೆ,
ಕ್ಷಣವೆ ನಿನ್ನಯ ಕಣ್ಣ ಬಲುಹನು
ನನಗೆ ನೀಡುಪಕಾರಿಯೆ!

ಅವನನೊಮ್ಮೆಯೆ ನೋಡಿ….
ಅವನ ನೋಡುತ ನಲಿದು ಹಾಡುವೆ
ಕವನ ನಿನ್ನದು ಮಾಡಿ.


ಬೇಸಗೆಯ ಬಿರುಗಾಳಿ, ನಿನ್ನದಿ-
ದೇಸು ನಡಿಗೆಯ ವೇಗ?
ತಾಸುಹೊತ್ತೆರವದನು ಕೊಟ್ಟರೆ
ಗಾಸಿ ನಿನಗೇನೀಗ?

ನಿನ್ನ ತೆರದೊಳೆ ನೀರು-ನೆಲ-ಮುಗಿ-
ಲೆನ್ನದೆಯೆ ನಾ ಹಾರಿ,
ಚೆನ್ನನಿರುವಲಿ ತೆರಳುವೆನು, ಆ-
ನನ್ನಿ ಕಾರನ ಸೇರಿ

ಬೆರೆಯುವೆನು ನಾನಾಗ….
ಬೆರೆಯುವೆನು ನಾನಾಗ ಪಡೆವುದು
ಮರಳಿ ನಿನ್ನಯ ವೇಗ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...