ಹಾರಯ್ಕೆ


ಕೆಳದಿಯರನೊಡಗೊಂಡು ಕೆಲೆಕೆಲೆ-
ದುಲಿದು ಮೇಲಕೆ ಹಾರಿ,
ಇಳೆಯವರನಣಕಿಸುತೆ ಪಕ್ಕವ
ಕೆಳರಿ ಬಾನೆಡೆಗೇರಿ,

ತಳರುತಿಹೆ ನೀನೆಲ್ಲಿ? ಹಕ್ಕಿಯ-
ಕುಲದರಸೆ ಹೇಳಿಲ್ಲಿ!
ಗೆಳೆಯನೆಡೆ ದೊರೆಯುವುದೆ ನೀನಡೆ-
ದುಳಿವ ದಾರಿಯೊಳೆಲ್ಲಿ?

ದೊರೆತರಾತಗೆ ನೀನು….
ದೊರೆತರಾತಗೆ ನನ್ನ ಬಾಳಿನ
ಕೊರಗನರುಹುವೆಯೇನು?


ಅಳತೆಯಿಲ್ಲದ-ಹೊಳೆವ-ಕೈಗಳ
ಕಳುಹಿ ವಿಶ್ವದೊಳೆಲ್ಲಾ
ಬೆಳಕುಬಣ್ಣವ ಬಳೆವ ತಾವರೆ-
ಗೆಳೆಯ ಲಾಲಿಸು ಸೊಲ್ಲಾ!

ನನ್ನ ಮನದಳಲನ್ನು ಬರೆದಾ
ಬಿನ್ನವತ್ತಳೆಯನ್ನು
ಚೆನ್ನನಿರುವಲಿ ಕಳುಹಲಿಹೆ, ನೆರ-
ವನ್ನು ನೀಡುವೆಯೇನು?

ಒಂದೆ ಒಂದಾ ಕೈಯ….
ಒಂದೆ ಕಿರುಗೈ ಕಳುಹಿ ಓಲೆಯ-
ನೊಂದಿಸಾತಗೆ ಜೀಯ!


ಮುಮ್ಮಳೆಯ ಕಮ್ಮುಗಿಲ ಸಿಡಿಲೇ
ಹೆಮ್ಮಗಳ ಮೊರೆಕೇಳಿ
ಒಮ್ಮೆ ಒಂದೇ ನಿಮಿಷ ಕೊಡುವಿರೆ
ನಿಮ್ಮ ಗುಡುಗನು? ಹೇಳಿ!

ನಲ್ಲನೆಲ್ಲಿಹನೇನೊ! ನನ್ನದು
ಮೆಲ್ಲಲಿಯ ದನಿ ಕೇಳದು,
ಎಲ್ಲಿಯೇ ಇರಲವಗೆ ಸುದ್ದಿಯ
ಸಲ್ಲಿಸಲೆ ಬೇಕಿರುವುದು,

ಗುಡುಗಿನಾ ಮೊಳಗಿಂದೆ…
ಗುಡುಗಿ ಗರ್ಜಿಸಿ ನನ್ನ ನೆನಹನು
ಕೊಡುವೆನಾತನಿಗಿಂದೆ..


ಗಗನದೊಳು ತೇಲಾಡುತಾಡುತ
ನಗುವ ಚುಕ್ಕಿಯ ಬಳಗವೆ,
ಸೊಗಸು ನಿಮ್ಮದು ಬದುಕು ನೀವೀ
ಜಗದ ಸಾಕ್ಷಿಗಳಲ್ಲವೇ?

ಮಿಣುಕುನೋಟದೊಳೇನನೆಲ್ಲವ-
ನಿಣುಕುತಿಹ ಧ್ರುವತಾರೆಯೆ,
ಕ್ಷಣವೆ ನಿನ್ನಯ ಕಣ್ಣ ಬಲುಹನು
ನನಗೆ ನೀಡುಪಕಾರಿಯೆ!

ಅವನನೊಮ್ಮೆಯೆ ನೋಡಿ….
ಅವನ ನೋಡುತ ನಲಿದು ಹಾಡುವೆ
ಕವನ ನಿನ್ನದು ಮಾಡಿ.


ಬೇಸಗೆಯ ಬಿರುಗಾಳಿ, ನಿನ್ನದಿ-
ದೇಸು ನಡಿಗೆಯ ವೇಗ?
ತಾಸುಹೊತ್ತೆರವದನು ಕೊಟ್ಟರೆ
ಗಾಸಿ ನಿನಗೇನೀಗ?

ನಿನ್ನ ತೆರದೊಳೆ ನೀರು-ನೆಲ-ಮುಗಿ-
ಲೆನ್ನದೆಯೆ ನಾ ಹಾರಿ,
ಚೆನ್ನನಿರುವಲಿ ತೆರಳುವೆನು, ಆ-
ನನ್ನಿ ಕಾರನ ಸೇರಿ

ಬೆರೆಯುವೆನು ನಾನಾಗ….
ಬೆರೆಯುವೆನು ನಾನಾಗ ಪಡೆವುದು
ಮರಳಿ ನಿನ್ನಯ ವೇಗ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕೆ ಗೆಳತಿ ವಿರಹವೇದನೆ?
Next post ಬೆಳಕು

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…