Home / ಕವನ / ಕವಿತೆ / ಬೀಳ್ದ ಕುಸುಮ

ಬೀಳ್ದ ಕುಸುಮ

ಆವದೇವನ ಬನವೋ! ದೇವದೇವನ
ಬನವೋ! ದೇವನಾಡಿದ ಬನವೋ! ಮತ್ತೆ
ದೇವಾನುದೇವತೆಗಳೆಲ್ಲ ಕೂಡಿದ
ಬನವೋ! ಇದು ಇಂದ್ರವನ! ಸಗ್ಗವನ!
ಆವುದಾದರು ಇರಲಿ; ನಾನಿರ್ಪ
ಒನವಿದೇಂ ದಿವ್ಯ ಬನವೋ!
ಪೂರ್ವಜನ್ಮದ ಫಲವೋ! ಪುಣ್ಯ
ಪೆಚ್ಚಿದ ಫಲವೋ! ದೇವನೊಲುಮೆಯ
ಫಲವೋ! ಏನಿರ್ದೊಡೇನಿಂದು
ಸುಪ್ರಭಾತದ ಸಮಯ! ಏವೇಳ್ವೆ
ಬನಸಿರಿಯನೆಡೆವಿಡದಲೀಕ್ಷಿಸುವ
ಕಂಗಳಿವು ನಿಜ ಧನ್ಯ! ಧನ್ಯ!!

ಬನದಸುತ್ತಲು ಮತ್ತೆ ಬೆಟ್ಟಗಳು!
ಬೆಟ್ಟದೊಳು ಅಲ್ನೋಡು ದಿವ್ಯ ಬೆಟ್ಟ!
ಹಿಂಜಿದರಳೆಯಬೆಟ್ಟ! ಹಿಮದಬೆಟ್ಟ!
ಮುಗಿಲರಸಿಯನ್ನೊಮ್ಮೆ ಮುದ್ದಿಡುವಬೆಟ್ಟ!
ಆರವರು? ಬೆಟ್ಟವಂ ಅಡರಿಹರು?
ಅಡರಿ ಇಳಿಯುತಲಿಹರು ಇತ್ತ ಕಡೆ
ಮೇಲುನಡಿಗೆಯಿಂ ಬರುತಿಹರು. ಓ, ನನ್ನ
ಗಂಗೆ, ಯಮುನೆಯರು! ಸಂಚರಿಸಿ ಅಲ್ಲಲ್ಲಿ
ಏವೇಳ್ವರೇನೊ, ಎಂತೊ, ಮನೆಗಂತು
ಬರಲಿ. ಅಯ್ಯೊ, ಏಂ ಪ್ರಮಾದವನರಿಯೆ
ಸಾಗರದಿ ಧುಮುಕಿದರು ಎಂದೇಳ್ವರೋ!
ಇದನೋಡು ಇತ್ತಲೂ ಸಮದೃಶ್ಯ!
ಭೀಮೆ, ಕೃಷ್ಣೆ, ಕಾವೇರಿಯರು ಅತ್ತಿಂದ
ಬಂದೊಡನೆ ಸಾಗರದಿ ಧುಮುಕಿದರು ಸುಳಿವಿಲ್ಲ.
ವಿಧವೆಯರೆ ಅವರೆಲ್ಲರೂ? ಅಲ್ಲಲ್ಲ!
ಅವರ ನಲ್ಲರ ನೆನಹು ನನಗಿರ್ಪುದೈ!
ಏಂ ಕಾರಣವೊ ನಾನರಿಯೆನಲ್ಲಾ!
ಅಯ್ಯೋ, ನಾನೆಂಥ ಜಾಣೆ? ಎನಗಿರ್ಪ
ಉದಯದಾನಂದದಲಿ ಕಾಳತಾಪವ ಮತ್ತೆ
ಬೆರೆಸಲೆತ್ನಿಸುತಿರ್ಪೆ, ಹುಚ್ಚು! ಹುಚ್ಚು!
ಸುಪ್ರಭಾತದಲೇಳ್ದು, ಸೃಷ್ಟಿ ಸೊಬಗಂ ಕಾಣ್ದು
ಅವರೆಲ್ಲರೂ ಜಲಕ್ರೀಡೆಯಾಡುತಿರ್ಪರ್,

ಇದು ನೋಡು, ಇಲ್ಲಿರ್ಪ ಸೋಜಿಗದ ಕಾರಂಜಿ!
ಪೂರ್ವಜರ ಕೌಶಲ್ಯ ಹೊರಹೊಮ್ಮುತಿದೆ! ಮತ್ತೆ
ಪುಟಿಯುತಿದೆ! ಎಂಪೋಲ್ವರಾರೆಂದೇನೊ
ಅಂದಂದು, ಜಿಗಿಜಿಗಿದು, ಪುಟಿಯುತಿದೆ!
ಇಂದೇಕೊ ಕಾರಂಜಿ ಜಲದಿ ತುಂಬಿಲ್ಲವೇನೋ!
ಜಲವಿರ್ದರೂ ಪುಟಿವ ಶಕ್ತಿಯಿಲ್ಲೇನೋ!
ಶಕುತಿಯಿರುತಿರ್ದರೂ ಮಾರ್ಗವಿಲ್ಲೇನೋ!

ಇರಲಿ, ಇದುನೋಡು ಕುಸುಮಗಳ ಉದ್ಯಾನ!
ಅಲ್ಲಿ ಸೇವಂತಿಗೆಯು! ಇಲ್ಲಿ ಸಂಪಿಗೆಯು!
ಎಲ್ಲೆಲ್ಲು ಮಲ್ಲಿಗೆ ಪಾರಿಜಾತಗಳು!
ಎಲ್ಲವೂ ಎಲ್ಲರಿಗೆ ಸೌಗಂಧ ಪೂಸುತಿವೆ!
ಮಂದಮಾರುತಗಂತು ಕೇಳ್ವರಾರೊಬ್ಬರಿಲ್ಲ!
ಕುಸುಮ ಬೇಡದ ಕುವರಿಯಿರುತಿರ್ಪಳೇ?
ಮತ್ತೆ ದೇವನಿರ್ಪನೆ ಪೇಳಿ ಪೇಳಿ!
ಕೆಲರು ತಮ್ಮಯ ನಲುಮೆಗೋಸುಗ ಕುಸುಮ-
ಗಳನಾಯುತಿಹರಲ್ಲಿ! ಕೆಲರು ದೇವನಪೂಜೆ-
ದಾಯುತಿಹರದದೊ! ಕೆಲರು ತಮ್ಮಯ
ನಲ್ಲೆ ಯರಿಗಾಗಿ? ಏಂ ಕುಸುಮಗಳೋ! ಎಷ್ಟು
ಜನಕೀವವೋ! ಮೊದಲೆಷ್ಟು ಅರಳಿದವೋ!
ಮುಂದೆಷ್ಟು ಅರಳುವವೋ! ಇಂದೆಷ್ಟು ನಾನರಿಯೆ!

ಏನಿದೀ ಅನ್ಯಾಯ! ಘೋರತರ ಅನ್ಯಾಯ!!
ಈ ಬೀಳ್ದ ಕುಸುಮವಂ ಆಯ್ದರಾರೊಬ್ಬರಿಲ್ಲ.
ನನ್ನ ನಲ್ಲನೆ ಅಂದು ಎಂದೋ ಒಮ್ಮೆ
ಕೆಡಹಿದಂತೆಯೊ ಏನೊ ಭಾಸವಾಗುತಿದೆ;
ಅಥವಾ ಅವರಪ್ಪ ತಾತ ಮುತ್ತಾತ
ಕೆಡಹಿರಬಹುದು. ಆದೊಡೇನದನೊಮ್ಮೆ
ಕಣ್ಣೆರೆದು ನೋಡದಿರ್ಪುದೆ ನಲ್ಲ?
ಅದದೊ ನನ್ನಯ ನಲ್ಲ ನಿದ್ರೆಯಿಂದೆಚ್ಚತ್ತು
ಈಗೀಗ ಕಣ್ಣೊರಿಸಿಕೊಳ್ಳುತ್ತ ಮೆಲ್ಲನೆ
ಆಗಮಿಸುತ್ತಿರುವಂತೆ ತೋರುತಿದೆ!

ಕಲ್ಲುದೇವನ ಕಂಠ ಪೂಮಾಲೆಯಿಂ
ಶೋಭಿಸುತಿರ್ತಾದೋಡೇಂ ಬೀಳ್ದ ಕುಸುಮಕೆ
ಆ ಮಾಲೆಯೋಳ್ ತಾಣವಿರಲಿಲ್ಲ. ಮತ್ತೊಮ್ಮೆ
ಕೆರೆಗೆ ನಾನೈತಂದೆ. ಕುವರಿಯರ ಮುಡಿಗಳಲಿ
ಮಲ್ಲಿಗೆಗಳೆಷ್ಟಿರ್ದೊಡೇಂ ಬೀಳ್ದ ಕುಸುಮ
ಆರೊಬ್ಬರಲ್ಲಿಯು ಕಾಣೆ! ಎಲ್ಲಿಯೂ ಕಾಣೆ ಕಾಣೆ!

ನಾನಾರೆ ಮುಡಿಯಲಾ? ನನ್ನ ನಲ್ಲನ ಭಯವು!
ಕೇಳದಲೆ ಮುಡಿದಳೆಂದೆಲ್ಲಿ ಮುನಿಯುವನೋ!
ಬಿಟ್ಟುಬಿಡಲಾ? ಮತ್ತೆ ಮರುಕ ಬಪ್ಪುದು!
ಬರಲಿ ಎನ್ನೊಡೆಯ ಕೇಳಿಯೆ ಬಿಡುವೆ!
`ಬತ್ತಿಹುದು ಬಾಡಿಹುದು ಬಿಸುಡೆ’ ನ್ನುವನು!
`ಅದಕೆಲ್ಲ ಕಾರಣರು ನೀವೆಂ’ ದು ನಾನುಡಿವೆ.

ಸ್ವಾಗತವು ಸ್ವಾಗತವು ಓ, ನನ್ನನಲ್ಲ!
ಬೀಳ್ದ ಕುಸುಮವನ್ನಿಲ್ಲಿ ಬಿಟ್ಟು ಬಿಡುವುದೇ?
ಆವಕರ್ಮದ ಫಲವೋ! ಏಂ ನಿಮ್ಮ ಛಲವೋ!
ಬೀಳ್ದ ಕುಸುಮವೆ ಇರಲಿ; ಏಳ್ದುದಿರಲಿ;
ಏನಾದೊಡೇಂ ಕುಸುಮ! ಕುಸುಮ!
ನನ್ನೊಡೆಯ, ನನ್ನೊಡೆಯ, ಓ ನನ್ನ ಒಡೆಯ
ಮೆಯ್ಯೊಳಿಹ ಬಿಸಿರಕ್ತ ತಣ್ಣಗಾಗುವ ಮುನ್ನ,

ಶಕುತಿಯದು ಕುಗ್ಗಿ ಕುಂದದ ಮುನ್ನ,
ಕಪ್ಪಿನೀ ಕೇಶಗಳು ಬಿಳಿಯವಾಗುವ ಮುನ್ನ
ನನ್ನೊಡೆಯ, ನನ್ನೊಡೆಯ, ಓ ನನ್ನ ಒಡೆಯ
ಬೀಳ್ದ ಕುಸುಮವನೆನ್ನ ಮುಡಿಯೊಳಿಡು!
ಬಿಟ್ಟ ಹೊಲೆಯರನೊಮ್ಮೆ ಮುಟ್ಟಿ ಬಿಡು!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...