Home / ಕವನ / ಕವಿತೆ / ಪ್ರಾಣದೇವತೆಗಳ ಪರಮಸ್ವರ್ಗ

ಪ್ರಾಣದೇವತೆಗಳ ಪರಮಸ್ವರ್ಗ

ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು.
ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು.
ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು,
ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು.

ಆದೇವದೇವನಾ ಸೋಮರಸವು ಮೈಗಿಳಿದ ಮತ್ತಿನಲ್ಲಿ
ಎಂದೆಂದು ತನ್ನ ದಿವ್ಯತೆಯಲುಳಿದು ಮುಳುಗಿಹುದು ಬೆಳಕಿನಲ್ಲಿ.
ಎಲ್ಲ ದೇವರಿಗೆ ಮುದ್ದುಬಹದು, ಬಲು ಸಲುಗೆಯಲ್ಲಿ ಬಳೆದು.
ಹಿಗ್ಗಿನೊಂದೆ ಕಾಯಕದೊಳಿಹುದು ಅದು ದೇವನಾಜ್ಞೆ ತಳೆದು.

ತನ್ನ ತಾನೆ ಆಳುವದು ತನ್ನ ಸ್ವಾನಂದದಲ್ಲಿ ಬಾಳಿ
ಅದರ ಬಲದ ಸ್ವಾರಾಜ್ಯಗಳಲಿ ಅರಸೊತ್ತು ತಾನೆ ತಾಳಿ.
ಎಲ್ಲ ರೂಪಗಳು ಯಾವ ಮೋದವನು ನೆಮ್ಮಿ ನೆಚ್ಚಿ ಇಹವು
ಕ್ಷಣ-ಕ್ಷಣಕು ಅಳಿವಂಥ ಕಾಲಕೂ ಬೆಚ್ಚಿಬೆದರದಿಹವು.

ಮುತ್ತಲರಿಯದೆಂದೆಂದು ಅದನ್ನು ಪ್ರತಿಕೂಲ ಸ್ಥಿತಿಯು ಕೂಡ.
ಇಂಥ ಸಹಜ ವಿಶ್ರಾಂತಿಯಲ್ಲಿ ಅದು ವಿಲಸಿಸುವದು ನೋಡ.
ಆ ಮರಣಕೌತಣವ ಕೊಡುವ ಮೈಯ ಕ್ಷಣಭಂಗುರತ್ವವಿಲ್ಲ.
ಅಡಿಗೊಮ್ಮೆ ಎಡವಿ ಭಯದಲ್ಲಿ ಇರುವ ಸಂಕಲ್ಪವಲ್ಲಿ ಸಲ್ಲ.

ಆ ರಾಗಭೋಗದಾವೇಗಗಳನು ಬಿಗಿಹಿಡಿವುದಲ್ಲಿ ಏಕೆ?
ಸಂತೃಪ್ತವಾದ ಸುಖದೊಂದು ತಕ್ಕೆ ಇರೆ ಬೇರೆ ಪುಲಕ ಬೇಕೆ?
ಅಬ್ಬಬ್ಬ ಏನು ಅದ್ಭುತದ ಓಟ, ಕುಡಿಬೆಂಕಿ ನೋಟ, ಕೂಗು
ತನಿಪ್ರಾಣದೂರ್ಮಿ ನಿಗಿನಿಗಿಯೆ ಹರಿವ ನೆತ್ತರಿನ ತುಂಬು ತೇಗು.

ಅದು ಇಹುದು ದೇವನಗೆಯಲ್ಲಿ ಒಗೆದ ನವರತ್ನನಗರದಲ್ಲಿ
ಒರಗಿಹುದು ಎದೆಗೆ ಬೆರಗಾಗಿ ಪ್ರೇಮ ಹರಿದಿರಲು ಆಗಿ ಬಳ್ಳಿ.
ಅದಕಾವ ಬಂಧ? ಸ್ವಚ್ಛಂದದಿಂದ ಆನಂದ ಕೀರ್ತಿಸುವದು;
ಬಿಸಿಲೊಡ್ಡು ಮೈಯ್ಸಿ, ಬೆಳುದಿಂಗಳುಣಿಸಿ, ಜ್ಯೋತಿಯನೆ ಮೂರ್ತಿಸುವದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...