Home / ಕವನ / ಕವಿತೆ / ಬೆಂಗಳೂರು ’೭೨

ಬೆಂಗಳೂರು ’೭೨

ಪರಚಿಕೊಂಡ ಪರಿಚಯದ ರಸ್ತೆ
ಉರುಳು
ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು
ಬದುಕು ಬಿರುಕು
ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ
ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ
ಕಾಲ
ಚಕ್ರದ
ಕೆಳಗೆ ಕರುಳ ಕಣ್ಣೊಡೆದು ಕೆಂಪು ಭೂಪಟ
ಬಿಡಿಸುತ್ತವೆ; ಇಲ್ಲಿ ಸಲ್ಲದೆ ಅಲ್ಲಿ ಸಲ್ಲುತ್ತವೆ.

ಇಲ್ಲಿ- ಪ್ರಜಾಪ್ರಭುತ್ವಕ್ಕೆ ಹೆಸರಾದ ಫುಟ್‍ಪಾತಿನಲ್ಲಿ
ಕಾಲುಗಳು ಇಂಟುಮಾರ್ಕು ಹಾಕುತ್ತವೆ ಸತತ.
ಮಧ್ಯೆ ಹರಿಯುವ ಮೀನು ಮೊಸಳೆಗಳ ಹೊಳೆ
-ಯಾಚೆ ದಡಕ್ಕೆ ಮತ್ತಕಣ್ಣು ಮುಕ್ಕಳಿಸಿ ಸುತ್ತುತ್ತವೆ ವೃತ್ತ.
ದಡದಿಂದ ದಡಕ್ಕೆ ಬ್ರಿಡ್ಜು ಕಟ್ಟಿ ನಿಂತಕಡೆಯೆ ಬದುಕಿ
-ನ ಬ್ಯಾಡ್ಜು ಧರಿಸಿ ಕೈಚಾಚಿ ಬರುತ್ತ
ಮಧ್ಯ ಹೊಳೆಯಲ್ಲಿ ತಣ್ಣನೆಯ ನೀರಲ್ಲಿ
ಬೆಚ್ಚನೆಯ ಬಂಧನದಲ್ಲಿ ಮತ್ತೆ
ಚುಂಬನದಲ್ಲಿ ಡೈವೊರ್‍ಸಿಗೆ ಸಹಿಮಾಡುತ್ತವೆ.

ಗುಪ್ತ
ಮಾರ್ಕೆಟ್ಟಿನ ಮುಂದೆ ಸುಪ್ತ ಚಿತ್ತ ಬಿಚ್ಚುತ್ತವೆ
ಅತ್ತ ಇತ್ತ ಸುತ್ತಮುತ್ತ ಮೆಲುಕುತ್ತ
ಆ ಈ ಭಾಷೆಗಳ ಕ್ರಾಸ್ ಬ್ರೀಡಿನಲ್ಲಿ
ಹೊಸದೊಂದು ಹುಟ್ಟಿಸುತ್ತವೆ; ಕಿವಿಬೆದರಿಸುತ್ತವೆ
ಅಲಂಕಾರದಲ್ಲಿ ಮುಳುಗಿ ಕಲ್ಪನಾಕ್ಕೆ ಪ್ರಭಾತ್ ಭೇರಿಹಾಕಿ
ಮೇನಕಾ ಮೈಯಲ್ಲಿ ಬಾಳು ಬರೆಯುತ್ತ
ಹಿಮಾಲಯ ಹತ್ತುತ್ತವೆ; ಹಡೆಯುತ್ತವೆ.

ಇಲ್ಲಿ ಈ ಸಿಟಿ
ಮಾರ್ಕೆಟ್ಟಿನಲ್ಲಿ ಮೀನುಬಲೆ ಮಾತು
ಬಿಡಿಸಲಾಗದ ಜಟಿಲತೆ ಜಂಜಾಟ ಜೀಕು
ಅಮಾವಾಸ್ಯೆಯಲ್ಲಿ ಬೆಳದಿಂಗಳ ಬಯಕೆ
ಬೆನ್ನಮೇಲೆ ಹೊತ್ತು ಬೆವರು ಬಸಿಯುತ್ತವೆ.
ಬಿಡುವು ಸಿಕ್ಕಾಗ ಸಿಳ್ಳು ಸಂಭ್ರಮದಲ್ಲಿ ಬಣ್ಣಕ್ಕೆ ಕಣ್ಣು
ಕೆನೆಸುತ್ತ ಕಳ್ಳು ಕುಡಿಯುತ್ತವೆ; ಸ್ವರ್ಗದ ಬಾಗಿಲಿಗೆ ಡಿಕ್ಕಿ
ಹೊಡೆದು ದುಡುಮ್ಮನೆ ಬೀಳುತ್ತವೆ.
ಸಿಳ್ಳು ಕಳ್ಳುಗಳ ದಡದಲ್ಲಿ ಮಾಮೂಲು ಮುಳ್ಳುಗಳು
ಬಿಲದಲ್ಲಿದ್ದು ನೆಲದ ನೈಜವಾಸನೆ ಕುಡಿತ ಕಡಿತಗಳು
ಬಾಯಿಗೆ ಬೆಣೆ ಬಡಿಸಿಕೊಂಡು ಬಂಡೆ ಸಂದಿಯಲ್ಲೂ ಬದುಕು
ಬಿಕ್ಕುತ್ತವೆ; ಬರೆಯುತ್ತವೆ.
‘ಅವು ಇವು’ಗಳ ಬದಲು ‘ಅವರು ಇವರು’ ಆಗಲು ಒದ್ದಾಡುತ್ತವೆ
ಇವು ಕೊಳಚೆ ಕಾವ್ಯದ ನಾಯಕ ನಾಯಕಿಯರು.
ನರನರಕ್ಕೆ ಬರದ ಬರೆ ಬಿದ್ದು ಬೆಣೆಯೆದ್ದು
ಬಾಯಿ ಬಿಟ್ಟರೆ ಸಾಕು
ಮೂರಂತಸ್ತಿನ ತುಟ್ಟ ತುದಿಯಲ್ಲಿ ವಾಯುವಿಹಾರದಲ್ಲಿ
‘ಅವು’
ಸ್ಲೋ-ಗನ್ನುಗಳ ಗೋಡನ್ನು ತೋರಿಸಿ ಕೋಟೆ ಕಟ್ಟುತ್ತವೆ.
‘ಇವರು’
ಹತ್ತಲು ಉಡವಾಗುತ್ತಾರೆ; ಉಡ ಬಡವಾಗುತ್ತದೆ.
ಇಷ್ಟಿಷ್ಟೇ ಹಿಡಿತ ಇಲ್ಲವಾಗುತ್ತ
ಅರ್ಥ ಹುಡುಕುತ್ತ ಹುಡುಕುತ್ತ ನೆಲವಾಗುತ್ತದೆ.

ಎಲೆಕ್ಟ್ರಿಸಿಟಿ ಬೋರ್ಡು ಅದರದೇ ಹತ್ತಾರು ವಾರ್ಡು
ಇರುವ ಬೆಳ್ಳಂಬೆಳಗಿನ ಬೆಂಗಳೂರಲ್ಲಿ
ಏನು ಮಾಡುವುದು ಸ್ವಾಮಿ ತಂತಿ ಕತ್ತರಿಸುತ್ತದೆ ಇಲ್ಲ ಕಂಬ ಬೀಳುತ್ತದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ