Home / ಲೇಖನ / ಹಾಸ್ಯ / ಅವರ ‘ಸರ್ವಿಸು’

ಅವರ ‘ಸರ್ವಿಸು’

“ಜಿ. ಬಿ.” ಕ್ಲಬ್ಬಿನ ಮೂವತ್ತು ಸದಸ್ಯರಿಗೂ ತಮ್ಮ ಫೋಟೋ ತೆಗೆಸಬೇಕೆಂದು, ಒಂದು ವಸಂತ ಋತುವಿನ ರಾತ್ರೆಯಲ್ಲಿ, ಕ್ಲಬ್ಬಿನಲ್ಲಿ ಕುಳಿತು ಐಸ್ ಕ್ರೀಮನ್ನು ತಿನ್ನುತ್ತಾ, ಆಲೋಚನೆಯಾಯಿತು. ಊರಲ್ಲಿ ಯಾವ ಫೋಟೋಗ್ರಾಫರನು ಅತಿ ಕುಶಲನೆಂಬ ಪ್ರಶ್ನೆ, “ಯೋಶ್ವ” ಎಂದನೊಬ್ಬ; “ಹೈಮನ್ಸ್” ಎಂದನು ಮತ್ತೊಬ್ಬ; “ಫೋನ್ಸ್” ಎಂದನು ಮಗದೊಬ್ಬ; “ಕಪಾಲರಾಯರು” ಎಂದನು ಇನ್ನೊಬ್ಬ. ಚರ್ಚೆ ನಡೆದು ವೋಟು ತೆಗೆಯಲಾಗಿ… ನಿಮಗೆ ಆಶ್ಚರ್ಯವೆನಿಸಬಹುದು-… ಆ ನಾಲ್ವರಲ್ಲಿ ಯಾರನ್ನೂ ಆರಿಸದೆ, ಆಕಸ್ಮಿಕವಾಗಿ ಸಿ. ವಿ ಕೋಮಟಿಯವರ ಕಡೆಗೆ ಬಹುಮತವು ಮಾಲಿತು! ಮಂಗಳೂರಿಗೆ ಬಂದ ಮೊದಲನೇ ಕೆಮರವನ್ನು ಕೊಂಡುಕೊಂಡವರೇ ಇವರಂತೆ! “ಸರ್ವಿಸು” ಹೆಚ್ಚಾದ ಇವರೇ ಒಳ್ಳೆಯ ಫೋಟೋ ಎತ್ತಬಲ್ಲರೆಂದು ಬಹುಮತವು ನಿರ್ಧರಿಸಿತ್ತು.

ಮರುದಿನ ಬೆಳಿಗ್ಯೆ ಏಳು ಘಂಟೆಯೊಳಗೆ ಸದಸ್ಯರೆಲ್ಲ ಸಾಲಂಕೃತರಾಗಿ ಹಾಜರಾದರು. ಮೀಸೆಗಳು ಕಾಣಬಾರದೆಂದು ಬೋಳಿಸಿ ಕೊಂಡವನೊಬ್ಬ; ಕ್ರಾಪ್ ಹೊಳೆಯ ಬೇಕೆಂದು ಅರ್ಧ ಬಾಟಲಿ ವೆಸಲೀನ್ ಹಚ್ಚಿದವನೊಬ್ಬ; ಗಡ್ಡವೇನೂ ತೋರಬಾರದೆಂದು, ಮುಂಜಾನೆ ೪ ರಿಂದ ೬ ರ ತನಕ ಪ್ರಯತ್ನ ಪೂರ್ವದ ಕ್ಷೌರ ತೆಗೆಸಿದವನೊಬ್ಬ; ಅಳುಮೊಗವು ತೋರಬಾರದೆಂದು, ಕಳೆದ ರಾತ್ರೆಯ ಹೆಂಡತಿಯ ತೀಕ್ಷ್ಣ ನುಡಿಗಳನ್ನು ಮರೆಯಲೆತ್ನಿಸಿ, ನಗಲು ಸಾಹಸ ಗೊಂಡವನೊಬ್ಬ.

ಫೋಟೋಗ್ರಾಫರ ಕೋಮಟಿಯವರು, ಕೈಝರನ ಗಾಂಭೀರ್‍ಯವನ್ನು ಜತೆಯಲ್ಲಿ ಕರಕೊಂಡು ಬಂದು, ಕೆಮರವಿಟ್ಟರು, ಕ್ಲಬ್ ಮೆಂಬರರೆಲ್ಲ ಒಂದು ಮಾವಿನ ಮರದ ಕೆಳಗೆ ಕುಳಿತುಕೊಂಡರು. ಕೋಮಟಿಯವರು ಶಾಲಾ ಆಧ್ಯಾಪಕನಂತೆ, ಅವರೆಲ್ಲರನ್ನೂ ಕ್ರಮವಾಗಿ ಕುಳ್ಳಿರಿಸಿದರು. ಎಂಟರ ತನಕ ಹೀಗೆ ಅವರನ್ನು ದಣಿಸಿ, ಕೊನೆಗೆ “ನಗುತ್ತಿರ್ರಿ!” ಎಂದರು. ಮೆಂಬರರೆಲ್ಲ ಏಕಕಾಲದಲ್ಲಿ, ತಂತಮ್ಮ ಸಂಸಾರ ತಾಪತ್ರಯಗಳನ್ನೆಲ್ಲ ಆ ಒಂದು ಕ್ಷಣಕ್ಕೆ ಮರೆತು, ಕಿಸಕ್ಕೆಂದು ನಕ್ಕರು. ಕೋಮಟಿಯವರು “ಇನ್ನು ನೀವು ಏಳಬಹುದು” ಎಂದು ಅನುಜ್ಞೆಯಿತ್ತು, ಫೋಟೋ ಪ್ರತಿಯೊಂದೊಂದನ್ನು ಒದಗಿಸುವ ಬಗ್ಗೆ ಮೂವತ್ತು ಸದಸ್ಯರಿಂದ ಮೂವತ್ತು ರೂಪಾಯಿಗಳನ್ನು ಪಡಕೊಂಡು, ಗಾಡಿಯಲ್ಲಿ ಕುಳಿತು, ತಮ್ಮ ಮನೆಗೆ ತೆರಳಿದರು.

ವಸಂತ‌ಋತುವಿನ ಮೇಲೆ ಎರಡು ಋತುಗಳು ಕಳೆದುವು; ಛಳಿಗಾಲ ಬಂತು. ಕೋಮಟಿಗಳು ಫೋಟೋ ಪ್ರತಿಗಳನ್ನು ಇನ್ನೂ ತಯಾರಿಸುತ್ತಲೇ ಇದ್ದರು. ಬೇಸರ ಹುಟ್ಟಿ ನಾನು….

ಹಣ ಕೊಟ್ಟವರಲ್ಲಿ ನಾನೂ ಒಬ್ಬನು!

….ನಾನು ಅವರ ಮನೆ ತನಕವೂ ಪ್ರಯಾಣ ಬೆಳೆಸಿ ಕೇಳಿದೆ:- “ಕೋಮಟಿಯವರೇ, ಹೇಗೆ ಬಂದಿದೆ ಫೋಟೋ? ಪ್ರತಿಗಳು ಸಿದ್ಧವಾಗಿವೆಯೇ?”

ಕೋಮಟಿಯವರು ತಮ್ಮ ದೀರ್ಘಕಾಲದ ಸರ್ವಿಸಿನ ಮುಖವನ್ನು ಅವರೇ ಕಾಳಿನಷ್ಟು ಸಣ್ಣದು ಮಾಡಿ ಒಂದು ಪಂಕ್ತಿಯನ್ನು ಪ್ರಯತ್ನಪೂರ್ವಕವಾಗಿ ಉಸಿರಿದರು:- “ಸ್ವಾಮಿ, ಕ್ಷಮಿಸಿರಿ; ಆ ದಿನ ನಾನು ಕೆಮರದೊಳಗೆ ಪ್ಲೇಟನ್ನಿಡಲು ಮರೆತಿದ್ದೆನು, ಇನ್ನೊಮ್ಮೆ ಅತ್ತ ಬರಲು ನಾಚಿಕೆಯಾಯಿತು! ನಿಮ್ಮ ಫೋಟೋವನ್ನು ತೆಗೆಯಲೇ ಇಲ್ಲ!!”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...