Home / ಲೇಖನ / ಹಾಸ್ಯ / ಅವರ ‘ಸರ್ವಿಸು’

ಅವರ ‘ಸರ್ವಿಸು’

“ಜಿ. ಬಿ.” ಕ್ಲಬ್ಬಿನ ಮೂವತ್ತು ಸದಸ್ಯರಿಗೂ ತಮ್ಮ ಫೋಟೋ ತೆಗೆಸಬೇಕೆಂದು, ಒಂದು ವಸಂತ ಋತುವಿನ ರಾತ್ರೆಯಲ್ಲಿ, ಕ್ಲಬ್ಬಿನಲ್ಲಿ ಕುಳಿತು ಐಸ್ ಕ್ರೀಮನ್ನು ತಿನ್ನುತ್ತಾ, ಆಲೋಚನೆಯಾಯಿತು. ಊರಲ್ಲಿ ಯಾವ ಫೋಟೋಗ್ರಾಫರನು ಅತಿ ಕುಶಲನೆಂಬ ಪ್ರಶ್ನೆ, “ಯೋಶ್ವ” ಎಂದನೊಬ್ಬ; “ಹೈಮನ್ಸ್” ಎಂದನು ಮತ್ತೊಬ್ಬ; “ಫೋನ್ಸ್” ಎಂದನು ಮಗದೊಬ್ಬ; “ಕಪಾಲರಾಯರು” ಎಂದನು ಇನ್ನೊಬ್ಬ. ಚರ್ಚೆ ನಡೆದು ವೋಟು ತೆಗೆಯಲಾಗಿ… ನಿಮಗೆ ಆಶ್ಚರ್ಯವೆನಿಸಬಹುದು-… ಆ ನಾಲ್ವರಲ್ಲಿ ಯಾರನ್ನೂ ಆರಿಸದೆ, ಆಕಸ್ಮಿಕವಾಗಿ ಸಿ. ವಿ ಕೋಮಟಿಯವರ ಕಡೆಗೆ ಬಹುಮತವು ಮಾಲಿತು! ಮಂಗಳೂರಿಗೆ ಬಂದ ಮೊದಲನೇ ಕೆಮರವನ್ನು ಕೊಂಡುಕೊಂಡವರೇ ಇವರಂತೆ! “ಸರ್ವಿಸು” ಹೆಚ್ಚಾದ ಇವರೇ ಒಳ್ಳೆಯ ಫೋಟೋ ಎತ್ತಬಲ್ಲರೆಂದು ಬಹುಮತವು ನಿರ್ಧರಿಸಿತ್ತು.

ಮರುದಿನ ಬೆಳಿಗ್ಯೆ ಏಳು ಘಂಟೆಯೊಳಗೆ ಸದಸ್ಯರೆಲ್ಲ ಸಾಲಂಕೃತರಾಗಿ ಹಾಜರಾದರು. ಮೀಸೆಗಳು ಕಾಣಬಾರದೆಂದು ಬೋಳಿಸಿ ಕೊಂಡವನೊಬ್ಬ; ಕ್ರಾಪ್ ಹೊಳೆಯ ಬೇಕೆಂದು ಅರ್ಧ ಬಾಟಲಿ ವೆಸಲೀನ್ ಹಚ್ಚಿದವನೊಬ್ಬ; ಗಡ್ಡವೇನೂ ತೋರಬಾರದೆಂದು, ಮುಂಜಾನೆ ೪ ರಿಂದ ೬ ರ ತನಕ ಪ್ರಯತ್ನ ಪೂರ್ವದ ಕ್ಷೌರ ತೆಗೆಸಿದವನೊಬ್ಬ; ಅಳುಮೊಗವು ತೋರಬಾರದೆಂದು, ಕಳೆದ ರಾತ್ರೆಯ ಹೆಂಡತಿಯ ತೀಕ್ಷ್ಣ ನುಡಿಗಳನ್ನು ಮರೆಯಲೆತ್ನಿಸಿ, ನಗಲು ಸಾಹಸ ಗೊಂಡವನೊಬ್ಬ.

ಫೋಟೋಗ್ರಾಫರ ಕೋಮಟಿಯವರು, ಕೈಝರನ ಗಾಂಭೀರ್‍ಯವನ್ನು ಜತೆಯಲ್ಲಿ ಕರಕೊಂಡು ಬಂದು, ಕೆಮರವಿಟ್ಟರು, ಕ್ಲಬ್ ಮೆಂಬರರೆಲ್ಲ ಒಂದು ಮಾವಿನ ಮರದ ಕೆಳಗೆ ಕುಳಿತುಕೊಂಡರು. ಕೋಮಟಿಯವರು ಶಾಲಾ ಆಧ್ಯಾಪಕನಂತೆ, ಅವರೆಲ್ಲರನ್ನೂ ಕ್ರಮವಾಗಿ ಕುಳ್ಳಿರಿಸಿದರು. ಎಂಟರ ತನಕ ಹೀಗೆ ಅವರನ್ನು ದಣಿಸಿ, ಕೊನೆಗೆ “ನಗುತ್ತಿರ್ರಿ!” ಎಂದರು. ಮೆಂಬರರೆಲ್ಲ ಏಕಕಾಲದಲ್ಲಿ, ತಂತಮ್ಮ ಸಂಸಾರ ತಾಪತ್ರಯಗಳನ್ನೆಲ್ಲ ಆ ಒಂದು ಕ್ಷಣಕ್ಕೆ ಮರೆತು, ಕಿಸಕ್ಕೆಂದು ನಕ್ಕರು. ಕೋಮಟಿಯವರು “ಇನ್ನು ನೀವು ಏಳಬಹುದು” ಎಂದು ಅನುಜ್ಞೆಯಿತ್ತು, ಫೋಟೋ ಪ್ರತಿಯೊಂದೊಂದನ್ನು ಒದಗಿಸುವ ಬಗ್ಗೆ ಮೂವತ್ತು ಸದಸ್ಯರಿಂದ ಮೂವತ್ತು ರೂಪಾಯಿಗಳನ್ನು ಪಡಕೊಂಡು, ಗಾಡಿಯಲ್ಲಿ ಕುಳಿತು, ತಮ್ಮ ಮನೆಗೆ ತೆರಳಿದರು.

ವಸಂತ‌ಋತುವಿನ ಮೇಲೆ ಎರಡು ಋತುಗಳು ಕಳೆದುವು; ಛಳಿಗಾಲ ಬಂತು. ಕೋಮಟಿಗಳು ಫೋಟೋ ಪ್ರತಿಗಳನ್ನು ಇನ್ನೂ ತಯಾರಿಸುತ್ತಲೇ ಇದ್ದರು. ಬೇಸರ ಹುಟ್ಟಿ ನಾನು….

ಹಣ ಕೊಟ್ಟವರಲ್ಲಿ ನಾನೂ ಒಬ್ಬನು!

….ನಾನು ಅವರ ಮನೆ ತನಕವೂ ಪ್ರಯಾಣ ಬೆಳೆಸಿ ಕೇಳಿದೆ:- “ಕೋಮಟಿಯವರೇ, ಹೇಗೆ ಬಂದಿದೆ ಫೋಟೋ? ಪ್ರತಿಗಳು ಸಿದ್ಧವಾಗಿವೆಯೇ?”

ಕೋಮಟಿಯವರು ತಮ್ಮ ದೀರ್ಘಕಾಲದ ಸರ್ವಿಸಿನ ಮುಖವನ್ನು ಅವರೇ ಕಾಳಿನಷ್ಟು ಸಣ್ಣದು ಮಾಡಿ ಒಂದು ಪಂಕ್ತಿಯನ್ನು ಪ್ರಯತ್ನಪೂರ್ವಕವಾಗಿ ಉಸಿರಿದರು:- “ಸ್ವಾಮಿ, ಕ್ಷಮಿಸಿರಿ; ಆ ದಿನ ನಾನು ಕೆಮರದೊಳಗೆ ಪ್ಲೇಟನ್ನಿಡಲು ಮರೆತಿದ್ದೆನು, ಇನ್ನೊಮ್ಮೆ ಅತ್ತ ಬರಲು ನಾಚಿಕೆಯಾಯಿತು! ನಿಮ್ಮ ಫೋಟೋವನ್ನು ತೆಗೆಯಲೇ ಇಲ್ಲ!!”
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...