Home / ಲೇಖನ / ಹಾಸ್ಯ / ಅವರ ‘ಸರ್ವಿಸು’

ಅವರ ‘ಸರ್ವಿಸು’

“ಜಿ. ಬಿ.” ಕ್ಲಬ್ಬಿನ ಮೂವತ್ತು ಸದಸ್ಯರಿಗೂ ತಮ್ಮ ಫೋಟೋ ತೆಗೆಸಬೇಕೆಂದು, ಒಂದು ವಸಂತ ಋತುವಿನ ರಾತ್ರೆಯಲ್ಲಿ, ಕ್ಲಬ್ಬಿನಲ್ಲಿ ಕುಳಿತು ಐಸ್ ಕ್ರೀಮನ್ನು ತಿನ್ನುತ್ತಾ, ಆಲೋಚನೆಯಾಯಿತು. ಊರಲ್ಲಿ ಯಾವ ಫೋಟೋಗ್ರಾಫರನು ಅತಿ ಕುಶಲನೆಂಬ ಪ್ರಶ್ನೆ, “ಯೋಶ್ವ” ಎಂದನೊಬ್ಬ; “ಹೈಮನ್ಸ್” ಎಂದನು ಮತ್ತೊಬ್ಬ; “ಫೋನ್ಸ್” ಎಂದನು ಮಗದೊಬ್ಬ; “ಕಪಾಲರಾಯರು” ಎಂದನು ಇನ್ನೊಬ್ಬ. ಚರ್ಚೆ ನಡೆದು ವೋಟು ತೆಗೆಯಲಾಗಿ… ನಿಮಗೆ ಆಶ್ಚರ್ಯವೆನಿಸಬಹುದು-… ಆ ನಾಲ್ವರಲ್ಲಿ ಯಾರನ್ನೂ ಆರಿಸದೆ, ಆಕಸ್ಮಿಕವಾಗಿ ಸಿ. ವಿ ಕೋಮಟಿಯವರ ಕಡೆಗೆ ಬಹುಮತವು ಮಾಲಿತು! ಮಂಗಳೂರಿಗೆ ಬಂದ ಮೊದಲನೇ ಕೆಮರವನ್ನು ಕೊಂಡುಕೊಂಡವರೇ ಇವರಂತೆ! “ಸರ್ವಿಸು” ಹೆಚ್ಚಾದ ಇವರೇ ಒಳ್ಳೆಯ ಫೋಟೋ ಎತ್ತಬಲ್ಲರೆಂದು ಬಹುಮತವು ನಿರ್ಧರಿಸಿತ್ತು.

ಮರುದಿನ ಬೆಳಿಗ್ಯೆ ಏಳು ಘಂಟೆಯೊಳಗೆ ಸದಸ್ಯರೆಲ್ಲ ಸಾಲಂಕೃತರಾಗಿ ಹಾಜರಾದರು. ಮೀಸೆಗಳು ಕಾಣಬಾರದೆಂದು ಬೋಳಿಸಿ ಕೊಂಡವನೊಬ್ಬ; ಕ್ರಾಪ್ ಹೊಳೆಯ ಬೇಕೆಂದು ಅರ್ಧ ಬಾಟಲಿ ವೆಸಲೀನ್ ಹಚ್ಚಿದವನೊಬ್ಬ; ಗಡ್ಡವೇನೂ ತೋರಬಾರದೆಂದು, ಮುಂಜಾನೆ ೪ ರಿಂದ ೬ ರ ತನಕ ಪ್ರಯತ್ನ ಪೂರ್ವದ ಕ್ಷೌರ ತೆಗೆಸಿದವನೊಬ್ಬ; ಅಳುಮೊಗವು ತೋರಬಾರದೆಂದು, ಕಳೆದ ರಾತ್ರೆಯ ಹೆಂಡತಿಯ ತೀಕ್ಷ್ಣ ನುಡಿಗಳನ್ನು ಮರೆಯಲೆತ್ನಿಸಿ, ನಗಲು ಸಾಹಸ ಗೊಂಡವನೊಬ್ಬ.

ಫೋಟೋಗ್ರಾಫರ ಕೋಮಟಿಯವರು, ಕೈಝರನ ಗಾಂಭೀರ್‍ಯವನ್ನು ಜತೆಯಲ್ಲಿ ಕರಕೊಂಡು ಬಂದು, ಕೆಮರವಿಟ್ಟರು, ಕ್ಲಬ್ ಮೆಂಬರರೆಲ್ಲ ಒಂದು ಮಾವಿನ ಮರದ ಕೆಳಗೆ ಕುಳಿತುಕೊಂಡರು. ಕೋಮಟಿಯವರು ಶಾಲಾ ಆಧ್ಯಾಪಕನಂತೆ, ಅವರೆಲ್ಲರನ್ನೂ ಕ್ರಮವಾಗಿ ಕುಳ್ಳಿರಿಸಿದರು. ಎಂಟರ ತನಕ ಹೀಗೆ ಅವರನ್ನು ದಣಿಸಿ, ಕೊನೆಗೆ “ನಗುತ್ತಿರ್ರಿ!” ಎಂದರು. ಮೆಂಬರರೆಲ್ಲ ಏಕಕಾಲದಲ್ಲಿ, ತಂತಮ್ಮ ಸಂಸಾರ ತಾಪತ್ರಯಗಳನ್ನೆಲ್ಲ ಆ ಒಂದು ಕ್ಷಣಕ್ಕೆ ಮರೆತು, ಕಿಸಕ್ಕೆಂದು ನಕ್ಕರು. ಕೋಮಟಿಯವರು “ಇನ್ನು ನೀವು ಏಳಬಹುದು” ಎಂದು ಅನುಜ್ಞೆಯಿತ್ತು, ಫೋಟೋ ಪ್ರತಿಯೊಂದೊಂದನ್ನು ಒದಗಿಸುವ ಬಗ್ಗೆ ಮೂವತ್ತು ಸದಸ್ಯರಿಂದ ಮೂವತ್ತು ರೂಪಾಯಿಗಳನ್ನು ಪಡಕೊಂಡು, ಗಾಡಿಯಲ್ಲಿ ಕುಳಿತು, ತಮ್ಮ ಮನೆಗೆ ತೆರಳಿದರು.

ವಸಂತ‌ಋತುವಿನ ಮೇಲೆ ಎರಡು ಋತುಗಳು ಕಳೆದುವು; ಛಳಿಗಾಲ ಬಂತು. ಕೋಮಟಿಗಳು ಫೋಟೋ ಪ್ರತಿಗಳನ್ನು ಇನ್ನೂ ತಯಾರಿಸುತ್ತಲೇ ಇದ್ದರು. ಬೇಸರ ಹುಟ್ಟಿ ನಾನು….

ಹಣ ಕೊಟ್ಟವರಲ್ಲಿ ನಾನೂ ಒಬ್ಬನು!

….ನಾನು ಅವರ ಮನೆ ತನಕವೂ ಪ್ರಯಾಣ ಬೆಳೆಸಿ ಕೇಳಿದೆ:- “ಕೋಮಟಿಯವರೇ, ಹೇಗೆ ಬಂದಿದೆ ಫೋಟೋ? ಪ್ರತಿಗಳು ಸಿದ್ಧವಾಗಿವೆಯೇ?”

ಕೋಮಟಿಯವರು ತಮ್ಮ ದೀರ್ಘಕಾಲದ ಸರ್ವಿಸಿನ ಮುಖವನ್ನು ಅವರೇ ಕಾಳಿನಷ್ಟು ಸಣ್ಣದು ಮಾಡಿ ಒಂದು ಪಂಕ್ತಿಯನ್ನು ಪ್ರಯತ್ನಪೂರ್ವಕವಾಗಿ ಉಸಿರಿದರು:- “ಸ್ವಾಮಿ, ಕ್ಷಮಿಸಿರಿ; ಆ ದಿನ ನಾನು ಕೆಮರದೊಳಗೆ ಪ್ಲೇಟನ್ನಿಡಲು ಮರೆತಿದ್ದೆನು, ಇನ್ನೊಮ್ಮೆ ಅತ್ತ ಬರಲು ನಾಚಿಕೆಯಾಯಿತು! ನಿಮ್ಮ ಫೋಟೋವನ್ನು ತೆಗೆಯಲೇ ಇಲ್ಲ!!”
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...