Home / ಕವನ / ಕವಿತೆ / ಜಾತ್ರೆಯಲ್ಲಿ ಶಿವ

ಜಾತ್ರೆಯಲ್ಲಿ ಶಿವ


ಅದೇ ಆ ಶಿವನ ವೇಷಧಾರಿ
ನಾನಿದ್ದ ಬಸ್ಸಿನಲ್ಲಿಯೇ ಇದ್ದ
ನನ್ನೊಂದಿಗೆ ಬಸ್ಸಿನಿಂದಿಳಿದ

ತೇಗದ ಮರದ ಹಾಗೆ
ಉದ್ದಕೆ ಸಪೂರ
ಮೋಡದ ಮೈ ಬಣ್ಣ, ಮಿಂಚಿನ ನಗು
ಮುಡಿಗೆ ತಗಡಿನ ಚಂದ್ರನನು ಮುಡಿದಿದ್ದ
ತೋಳಿಗೆ ಕಣಗಿಲೆಯ ಹೂವು
ಕೊರಳಲ್ಲಿ ಪ್ಲಾಸ್ಟಿಕ್ ಹಾವು
ಹುಲಿ ಚರ್ಮದ ಚಿತ್ರವಿರುವ
ಮಾಸಿದ ಹಳದಿ ಬಣ್ಣದ ಅರ್ಧ ಲುಂಗಿ
ಹವಾಯಿ ಚಪ್ಪಲಿ ಧರಿಸಿದ್ದ…

ನನ್ನ ಬೆರಗಿಗೆ ಉತ್ತರ
ನೀಡುವವನಂತೆ
ಡಮರುಗ ನುಡಿಸಿ
ತ್ರಿಶೂಲ ಆಡಿಸಿ
ಕಾಲ್ಗೆಜ್ಜೆ ಗಲಗಲ ಕುಣಿಸಿ
ನ…ಶಿವ ಎಂದ


ನಾ…ಮುಂದೆ ಅವ…ಹಿಂದೆ
ಜಾತ್ರೆಯ ಕೌಂಟರಿನಲ್ಲಿ
ಟಿಕೀಟು ಕೊಳ್ಳುವಾಗಲೂ
ಬೆನ್ನ ಹಿಂದೆಯೇ ಇದ್ದ
ಗಿಲೀಟು ಒಡವೆಯಂಗಡಿಯಲ್ಲಿ

ಕಣ್ಣ ಮುಂದೆಯೇ ಬಂದ
ಫಳಫಳ ಹೊಳೆಯುವ
ಮೂಗುತಿಯನು ಅಂಗೈಯೊಳಗೆ
ಹೊರಳಾಡಿಸಿ
ಈ ವಜ್ರಕ್ಕೆಷ್ಟಪ್ಪಾ ಬೆಲೆ
ಎಂದು ಅಂಗಡಿಯಾತನ ಛೇಡಿಸಿದ

ಪುಗ್ಗೆಯಂಗಡಿಯಲ್ಲಿ ಒಂದೊಂದೂ
ಪುಗ್ಗೆಯ ಮೇಲೂ ಮೃದುವಾಗಿ ಕೈಯಾಡಿಸಿ
ಪರಪರ ಶಬ್ದಕ್ಕೆ ಕಿವಿಯಾನಿಸಿ
ಬಾಗಿಲು ದಾಟುವುದರೊಳಗೆ
ಠುಸ್ಸೆನ್ನುವುದೀ ಪುಗ್ಗೆ, ಜೊತೆಗೆ
ಹಿಗ್ಗಿನ ಬಗ್ಗೆ ಎಂದು ಅಲ್ಲೇ ಪದ ಕಟ್ಟಿ ಹಾಡಿ
ಒಂದು ಪೀಪಿ, ಒಂದು ವಾಚು ಪುಕ್ಕಟೆ ಪಡೆದ

ಬಣ್ಣ ಬಣ್ಣದ ಪರಕಾರಗಳ ತೆಗೆಸಿ
ಪೂರ ಅಂಗಡಿಯನೆ ಎಳೆದಾಡಿಸಿ
ಚೌಕಾಸಿ ಬೆಲೆಯಲ್ಲೇ
ಒಂದು ಗಜ ರವಿಕೆಯ ಬಟ್ಟೆ ಕೊಂಡ

ಕೆಂಪು ನೀರಿನ ಶರಬತ್ತಿನಂಗಡಿಯಲ್ಲಿ
ಗಿಣಿ ಶಾಸ್ತ್ರದವನೊಡನೆ ಹರಕು
ಛತ್ರಿಯ ಅಡಿಯಲ್ಲಿ…
ಕರಡಿ ಮಜಲು ಕುಣಿತದ
ಕರಡಿಯಾಸದವನೊಡನೆ
ಅಲ್ಲಿ…ಇಲ್ಲಿ…ಇಲ್ಲಿ…ಅಲ್ಲಿ
ಜಾತ್ರೆಯ ಉದ್ದಗಲ ಹಬ್ಬಿ ನಿಂತವನು
ಮೋಟು ಬೀಡಿಯ ಸೇದುತ್ತ
ಕಡಲೆಯ-ಪುರಿಯ
ಗುಡ್ಡವ ದಾಟಿ ಹೋದ


ಹೋದ ಎನ್ನುವಷ್ಟರಲ್ಲಿಯೇ
ಬತ್ತಾಸಿನ ಅಂಗಡಿಯಲ್ಲಿ
ಪರಿಚಿತ ನಗೆಯೊಡನೆ ಪ್ರತ್ಯಕ್ಷ!

ಮೆಲ್ಲನೆ ಬಳಿ ಸರಿ ಗೋಣ ಬಗ್ಗಿಸಿ
ಮಗ ಹಸಿದಿದ್ದಾನೆ-
ಹೆಂಡತಿಗೆ ಕಾಯಿಲೆ ಅಂದ
ಬಾಡಿದ ಮುಖ, ಬಸಿದಿತ್ತು ದುಃಖ

ಗಣಪ ಹಸಿದಿದ್ದಾನೆ
ಗಿರಿಜೆಗೆ ಕಾಯಿಲೆ…
ಹೆಂಡತಿ-ಮಕ್ಕಳಿಗಾಗಿ
ಶಿವನಲ್ಲದೆ ಭವಿ ಅಳುವನೆ?!

ಪುಟ್ಟ ಪರ್ಸಿನ ಮೂಲೆ ಮೂಲೆಯನು ತಡವಿ
ರುದ್ರನೊಡ್ಡಿದ ಬೊಗಸೆಗೆ
ಐದರ ನೋಟಿರಿಸಿ ಇಷ್ಟೇ ಅಂದೆ!

ಮಿಂಚಂತ ಹೊಳೆದು
ತಳಾಂಗು ತದಿಗಿಣ ತೋಂ ಎಂದು
ನಾಟ್ಯದ ಮಟ್ಟಿನಲಿ ಕುಣಿದು
ಅರ್ಧ ನಿಮೀಲಿತ ನೇತ್ರವಾಗಿ
ನಟರಾಜನ ಭಂಗಿಯಲ್ಲಿ ನಿಂತುಬಿಟ್ಟ!

ಬಿಟ್ಟ ಬಾಯಿ ಬಿಟ್ಟಂತೆಯೇ
ನೆಟ್ಟ ಕಣ್ಣು ನೆಟ್ಟಂತೆಯೇ
ಎರಡೂ ಕೈ ಜೋಡಿಸಿ
ಮೈದುಂಬಿ ನುಡಿದು ಬಿಟ್ಟೆ…

ಸಾಕ್ಷಾತ್ ಶಿವ…
ಸಾಕ್ಷಾತ್ ಶಿವ!!
*****

Tagged:

One Comment

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...