Home / ಕವನ / ಕವಿತೆ / ಗುಣಾಕಾರಿ

ಗುಣಾಕಾರಿ

ಯಾವುದು ಇಲ್ಲವೆಂದು ನಾನು ಕೂಗಿದ್ದು?
ಪಬ್ಲಿಕ್ಕಾಗಿ ಕೂಗಿ, ರಣಾರಣ ರೇಗಿ
ಎಲ್ಲರೆದುರು ಬೀಗಿದ್ದು?
“ನನ್ನ ಬುದ್ಧಿ ನನ್ನ ಉತ್ತರ ಮುಖಿ,
ಅಳೆದ ಸತ್ಯ ದಡ ದೂರದ ಮುಳುಗು ತತ್ವವಾದರೂ ಸರಿ
ಅದರಲ್ಲೇ ಪೂರ್ತಿ ಸುಖಿ,
ನೋವಿಗೊಂದು ರಕ್ಷಯೆಂದು ನಂಬಿ ಬಾಳಲೇ” ಎಂದು
ಯಾಕಾಗಿ ನಂಬುವವರನ್ನು ಗುದ್ದಿ ಬಂದದ್ದು?
ತರ್ಕದಲ್ಲಿ ನೆಲ ಹೊರಳಿಸುತ್ತೇನೆ,
ಹೂವರಳಿಸುತ್ತೇನೆ
ನದಿ ಮರಳಿಸುತ್ತೇನೆ
ಏನು ಅಂಕೆ ತಪ್ಪಿತಾ ಎಲ್ಲ?” –
ಎಂದು ಅಬ್ಬರಿಸಿ ಮಲಗಿದ್ದು?

ನಡುರಾತ್ರಿ ಏನೋ ಮಂಪರ
ದೀಪಕಚ್ಚಿದ ರೂಮಿನಲ್ಲಿ ಕಿರಿಬೆಳಕಿನೆಚ್ಚರ;
ಸುತ್ತ ನೀರು
ನಡುಗಡ್ಡೆ ಮನೆ
ತಳಸೇರಿದ್ದ ದೆವ್ವಭೂತ ಏಣಿಹತ್ತುವ ಶಬ್ದ
ಕಿಲಕಿಲಲಹೋ ಕೇಕೆ
ಮೂಳೆ ಕೈ ಕಾಲುಗಳ ತಾಳಲಯದಲ್ಲಿ ತೂಗಿ
ಸದ್ಯಕ್ಕೇ ಬಂದುವು;
ಎದೆ ಕಲ್ಲುಮಾಡಿ
‘ಗೊತ್ತು ಹೋಗಿ ಪ್ರಾಚೀನಗಳೆ’ ಎಂದು ನಕ್ಕೆ
ಬಂದವರು
‘ಬಂದಿದ್ದೇವೆ ನಾವು
ಪಿತಾಮಹರು’ – ಎಂದರು.

ತಿಥಿ ಮಾಡಿದ್ದೇನೆ
ಜನಿವಾರ ಎಡಕ್ಕೆ ಹಾಕಿ ಸ್ತುತಿಮಾಡಿದ್ದೇನೆ. ಆದರೂ
ಮುಖದಲ್ಲಿ ನೀರೊಡೆಯುವ ದೈನ್ಯ
‘ಇಟ್ಟುಕೋ’ ಎಂದು ಕರುಳಬಳ್ಳಿಯಲ್ಲಿ ಬರೆದರು.
ತರ್ಕಶಾಸ್ತ್ರ ತೋರಿಸಿ
‘ಯಾಕೆ ಕಾಡುತ್ತೀರಿ ಹೀಗೆ? ಎಲ್ಲಿದೆ ಶ್ರದ್ದೆ?
ಗುಣಾಕಾರ ತಿಳಿಯದ? ಮನೆ ಬಿಡಿ’ ಎಂದು
ಅಟ್ಟಿ ಅಗುಳಿ ಹಾಕಿದೆ.
ಅಂತೂ ಸಾಲ ತೀರಿತೋ ಸದ್ಯಕ್ಕೆ?
ಈಗ ನಾನೇ ಪಾಯ
ನಾನೇ ಕಂಬ
ನಾನೇ ಶಿಖರ
ಸಾಗಲಿ ಎಂದೆನೋ-

ದೀಪದ ಕೊಚ್ಚೆಬೆಳಕು ಫಳಾರನೆ ಮಿಂಚಿ
ಎದುರಿನ ಕನ್ನಡಿಯಲ್ಲಿ ಚಿತ್ರ ಉರಿದವು.
ಸೃಷ್ಟಿ-ಪ್ರಳಯ
ಪ್ರಪಂಚದ ಮರಗಳೆಲ್ಲ ಮತ್ತೆ ಮತ್ತೆ ಒಣಗಿ ಚಿಗುರಿದವು
ಪಕ್ಷಿಲೋಕ ಹುಟ್ಟಿ ಸತ್ತು ಹುಟ್ಟಿ ಸತ್ತು ಹುಟ್ಟಿ
ಪ್ರಾಣಿಗಳೆಲ್ಲ ಒಡಲು ಮಗುಚಿದವು
ಎದ್ದು ಅರಚಿದವು.
ನಾಟಿ ಕೊಯಿಲು ಭೇಟಿಯಾಗಿ
ಕೈಕೈ ಹಿಡಿದು
ಕಣ್ಣು ಹೊಡೆದು
ನನ್ನ ಕಡೆ ತಿರುಗಿ ಕೇಳಿದವು
‘ಹೌದಾ, ಎಲ್ಲ ಗುಣಾಕಾರವಾ?’

ಸಮುದ್ರ ತರೆ ತರೆಗೂ ಬಾಯಿ ತೆರೆದು
ಒಡಲೊಳಗಿನ ಅಗಾಧಲೋಕ ಮೈ ಮುರಿದು
ಮಂದರದಂಥ ದನಿ ಮೇಲೆದ್ದು ಅಬ್ಬರಿಸಿತು
‘ಹೌದಾ, ಎಲ್ಲ ಗುಣಾಕಾರವಾ’?

ಗ್ರಹಗಳೆಲ್ಲ ಗತಿಗೆಟ್ಟು ಹಾಯುತ್ತ
ನಕ್ಷತ್ರ ಗಂಗೆಗಳು ಭೀಕರವಾಗಿ ತೂಗುತ್ತ
ಪರ್‍ವತ ಕಕ್ಕಿದ ಉರಿಹೊಳೆ ದಿಕ್ಕು ದಿಕ್ಕಿಂದ ಹರಿದು
ಕಾಲ ಬಳಿಗೆ ಬಂದು ಮೊರೆಯುವ ಮೊದಲೇ
ಚೀರಿ ಎದ್ದು ಓಡಿದೆ,
ಗೂಡೆಲ್ಲ ಕೆದಕಾಡಿ
ಹಾಳು ಸ್ಕೇಲನ್ನು ತಂದು
ನೀರೊಲೆಗೆ ಹಾಕಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...