Home / ಲೇಖನ / ಇತರೆ / ಮೈ ಝುಮ್ಮಾಗುವ ಸುಳ್ಳು

ಮೈ ಝುಮ್ಮಾಗುವ ಸುಳ್ಳು

ರಘುವೀರನು ನನ್ನ ಗೆಳೆಯ, ನಮಗೆ ಪರಿಚಯವಾದುದು ಮೊದಲು ಲೇಖನಿಯಿಂದ, ಅವನು ಸಂಪಾದಕನು. ನಾನು, ‘ಸಂಪಾದಕ’ರೆಂಬವರನ್ನು ಪ್ರೀತಿಯಿಂದ ನೋಡುವವನು. “ಹೃದಯರಂಜನ” ಪತ್ರಿಕೆಯನ್ನು ರಘುವೀರನು ಆರಂಭಿಸಿದ ಮೇಲೆ ನಮ್ಮ ಪರಿಚಯವೂ ಫಕ್ಕನೆ ಉಂಟಾಗಿ, ಕೆಲವೇ ಕಾಲದಲ್ಲಿ ಬಲವಾಯಿತು. ಈಗ ರಘುವೀರನು ‘ಸಂಪಾದಕ’ನಲ್ಲ; “ಭೂತಪೂರ್ವ….”ವಾಗಿದ್ದಾನೆ. ಅವನ “ಹೃದಯರಂಜನ”ವು ಹೃದಯಭೇದಕವೆನಿಸುವಂತೆ ಹುಟ್ಟಿದ ದಿನವೇ ಸತ್ತಿತೆಂಬುದು ದುಖಃಪೂರ್ಣವಾದ ‘ಬಹಿರಂಗ ರಹಸ್ಯ.’

ನಿಂತು ಹೋಗಲು ಕಾರಣವೇನು? –
(೧) ಕನ್ನಡಿಗರ ಆದರದ ಅಭಾವ
(೨) ಆರ್ಥಿಕ ದುರ್ದಶೆ
(೩) ಪ್ರಚಾರ ಕಾರ್ಯದ ಅಪೂರ್ಣತೆ
(೪) ಪತ್ರಿಕೆಯು ಆಕರ್ಷಕವಾಗಿಲ್ಲದಿರುವದು

– ಇವು ಒಂದು ಪ್ರತಿಕೆಯ ‘ಅಕಾಲ ನಿಧನ’ಕ್ಕೆ ಕಾರಣವೆಂದು ನಿಮ್ಮ ತರ್ಕವಿರಬಹುದು. ಆದರೆ, ರಘುವೀರನ ಪತ್ರಿಕೆಯ ಅವಸಾನವು ಆತನ ದುಂದುವ್ಯಯದಿಂದಲೇ ಉಂಟಾಯಿತು.

ಹೇಗೆ? – ಒಂದು ಉದಾಹರಣೆಯೇ ಇದು.

ಪತ್ರಿಕೆಗೆ ಚಂದಾದಾರರನ್ನು ಕೂಡಿಸಲು ಆತನು ಸರ್ವೋತ್ತಮನೆಂಬವನ ಸಹಾಯ ಪಡೆದನು. ಸರ್ವೊತ್ತಮನು ಸರ್ವ ವಿದ್ಯೆಗಳಲ್ಲೂ ನಿಷ್ಣಾತನು. ಅವನ ನಾಲಗೆಯೂ, ಅದರಂತೆ ಕೈಯೂ ಹರಿತವಾಗಿವೆ. “ಚಂದಾದಾರರನ್ನು ಕೂಡಿಸುತ್ತ ದಣಿವ ಬದಲಾಗಿ ನಿಮ್ಮನ್ನು ಒಂದೇ ಒಂದು ಹತ್ತು ರೂಪಾಯಿ ನೋಟಿನಲ್ಲಿ ಭಾಗ್ಯವಂತನನ್ನಾಗಿ ಮಾಡಬಲ್ಲೆ” ಎಂದು ಆತನು ರಘುವೀರನಿಗೆ ಭಾಷೆಕೊಟ್ಟನು. ಹೇಗೆಂದು ರಘುವೀರನು ಪ್ರಶ್ನಿಸಲಾಗಿ, “ತಾಯಿತ! ನನ್ನ ಅಜ್ಜನು . . .ಲ್ಲಿ ಕಲಿತು ಬಂದು ನನಗೆ ಹೇಳಿಕೊಟ್ಟನು. ಮಹಾರಹಸ್ಯ; ಖಂಡಿತ ಫಲ!” ಎಂದನು.

‘ಸುಶಿಕ್ಷಿತ’ನು ರಘುವು; ಒಂದು ಪತ್ರಿಕೆಯ ಸಂಪಾದಕನು; ಆದರೆ ಮನುಷ್ಯನು. ಆದುದರಿಂದ ಸರ್ವೋತ್ತಮನು ತೆಳ್ಳಗಿನ ನಾಲಗೆಯಿಂದಾಡಿದ ಮಾತುಗಳನ್ನು ತೆಳ್ಳಗಿನ ಕೈಯಿಂದ ಭಾಷೆಯ ವೆಟ್ಟನ್ನಿತ್ತುದೇ – ನಂಬಿದನು. ‘ಸುಶಿಕ್ಷಿತ’ ರೆಂಬವರಲ್ಲಿ ಹೆಚ್ಚಿನವರು ತಾಯಿತವನ್ನು ತಾಯಿಗಿಂತ ಹೆಚ್ಚು ನಂಬುವರೆಂಬುದು ನಿಮಗರಿತಿರಬಹುದು.

ರಘುವು ಕುಂದಾಪುರದಲ್ಲಿ ಚಂದಾದಾರರನ್ನು ಕೂಡಿಸುವ ಮಹಾಯತ್ನದಲ್ಲಿದ್ದನು. ಅಲ್ಲಿಗೆ ಸರ್ವೋತ್ತಮನ ಹತ್ತು ರೂಪಾಯಿ ಮೌಲ್ಯದ ವಿ. ಪಿ. ತಲಪಿತು. ಮೌಲ್ಯ ತೆತ್ತು, ರಘುವು ಅದನ್ನೊಡೆಯಲು ಒಂದು ಉಂಗುರವು ಸಿಕ್ಕಿತು, ಅದನ್ನು ಬೆರಳಿಗೆ ಸಿಕ್ಕಿಸುತ್ತಲೇ ಮೈ ಝುಮ್ಮೆನ್ನುವುದೆಂದೂ, ಆಗಲೇ ಅದರ ಪ್ರಭಾವವು ಆರಂಭವಾಗಿದೆ ಎಂಒ ಲೆಕ್ಕವೆಂದೂ ಸರ್ವೊತ್ತಮನು ಬರೆದಿದ್ದನು. ಇನ್ನಿದನ್ನು ಕೈಗೆ ಸಿಕ್ಕಿಸಿ ಚಂದಾದಾರರನ್ನು ಕೂಡಿಸ ಹೋಗುವೆನೆಂದು ರಘುವು, ಆ ಕೂಡಲೇ ಕೈಗೆ ಸಿಕ್ಕಿಸಿ, ನಡುಗುವ ಹೃದಯದಿಂದ ಮೈ ಜುಮ್ಮನ್ನು ಕಾಯುತ್ತ ಕುಳಿತನು. ಘಂಟೆ- ದಿನ……. ತಿಂಗಳ ತನಕ ಕಾಯ್ದನು.
ಝುಮ್ಮೇ ಇಲ್ಲ. ವಿಷಾದದ ಸಂಗ್ತಿಯೆಂದ್ರೆ-ಕುಂದಾಪುರದಲ್ಲಿ ಇವನಿಗೆ ಒಬ್ಬನಾದರೂ ಚಂದಾದಾರನು ದೊರೆಯಲಿಲ್ಲ.

ಒಂದು ತಿಂಗಳ ನಂತರ ಸರ್ವೋತ್ತಮನು ಸಿಕ್ಕಲು, ರಘವು ಕೋಪದಿಂದ ಆತನನ್ನು ಕುರಿತು – “ಏನಯಾ – ಈ ನೀಚತನವೇ?”

ಸರ್ವ – “ಏನು ನೀಚತನ?”
ರಘು – “ಉಂಗುರದ ಜುಮ್ಮು? ಇಲ್ಲವೇ ಇಲ್ಲ!”
ಸರ್ವ -ನೀನು ಅದನ್ನು ಹೇಗೆ ಕೈಗೆ ಹಾಕಿಕೊಂಡೆ?”
ರಘು- “ಟಪ್ಪಾಲಿನವನ ಕೈಯಿಂದ ಪಡೆದ ಕೂಡಲೇ.”
ಸರ್ವ – “ಆಗ ಊಟಗೀಟವಾಗಿತ್ತೇ?”
ರಘು- “ಇಲ್ಲಪ್ಪಾ -ಸ್ನಾನ ಕೂಡಾ ಆಗಿರಲಿಲ್ಲ.”
ಸರ್ವ (ಸಂತೋಷದಿಂದ) – “ಸರಿ! ನಿನ್ನಂತಹ ಮೂರ್ಖನು ನೀನೆ! ಸ್ನಾನ ಮಾಡದೆ ಕೈಬೆರಳಿಗೆ ತಾಯಿತದ ಉಂಗುರವನ್ನು ಹಾಕಿಕೊಳ್ಳುವ ಬ್ರಾಹ್ಮಣರೂ ಇರುವರೇ? ಹತ್ತು ರೂಪಾಯಿಗಳನ್ನು ನೀರಿಗೆ ಹಾಕಿದಿಯಲ್ಲ!”

ರಘುವಿಗೆ (ಆಗ ಕೈಯ್ಯಲ್ಲಿ ಉಂಗುರವಿರಲಿಲ್ಲ.) ಮೈ ಝುಮ್ಮೆಂದಿತು.

ರಘುವಿನ ೧೯೩೩ನೇ ಇಸವಿಯ ಡೈರಿಯನ್ನು ತೆಗೆದು, ದಶಂಬರ ತಿಂಗಳ ಪುಟವೊಂದರಲ್ಲಿ ನೋಡಿರಿ- “ಮೈ ಝುಮ್ಮಾಗುವ ಸುಳ್ಳಿಗೆ ಕೊಟ್ಟ ಹಣ- ಹತ್ತು ರೂಪಾಯಿ” ಎಂದು ಬರೆದಿದೆ.

ಈಗ ವರ್ಷವೇ ಕಳೆದರೂ, ಆ ತಾಯಿತವಿಲ್ಲದೆ ಅವನ ಮೈ ಆಗಾಗ ಇದನ್ನು ನೆನೆದಾಗಲೆಲ್ಲಾ ಝುಮ್ಮೆನ್ನುತ್ತಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...