Home / ಕವನ / ಕವಿತೆ / ಕನ್ನಡಿ

ಕನ್ನಡಿ

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ
ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ
ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು
ಬಿಳಿ ಮಡಿಯ ಶೆಳೆದುಡುತಲೆ

ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ
ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು
ತರದ ಶಾಂತಿಯ ಸವಿದು ತೆರೆದು ಕಂಗಳ ದೇವಿ
ಸರಸತಿಯು ನಸು ನಗುತಲೆ

ಪದುಮ ಪೀಠವನಿಳಿದು ಇದುಗೊ ಸಿಂಗರವಾಗಿ
ಮುದದಿ ಮನದಿನಿಯನಡಿಗೆರಗಿ ಬರುವೆ
ಹದಿನೆಂಟು ಶತಮಾನ ಪುದಿದ ದುಮ್ಮಾನದಲಿ
ಮುದ ಹಾಸವರಿಯದಲೆ ಕೊರಗಿ ಕುಳಿತೆ

ಗುಜರಾತ ಗಗ್ಗರವು ಪದಪದಕೆ ಧನಿಗೊಡಲು
ಗಜಬಜಿಯ ಮಗುವಂತೆ ಮುದವಿಟ್ಟು ಅನುಸರಿಸಿ
ವಿಜಯ ವಂಗದ ಶಂಖದಂದವಹ ಚೂಡಿಗಳು
ಕಿಂಕಿಣನೆ ಧನಿಗೈಯುತ

ಭಾರತಿಯ ಬಲು ಮಧುರ ಹಾವ ಭಾವಗಳನ್ನು
ತೋರಿ ನಲಿದೊಲಿಯೆ ಮಾರರವದಿಂಪಿನಲಿ
ಪೂರವದ ನೆನಹೆಂಬ ಹಿರಿಶೆರಗಿನಂಬರವ
ನಿರಿ ಹಿಡಿದು ತಾನುಟ್ಟಳು

ಸಂಸ್ಕೃತದ ಕಾಂಚಿಯ! ಹೊಳೆವ ಗೆಜ್ಜೆಗಳಲುಗೆ
ಝೇಂಕರಿಸೆ ಜಯಕೆನುತ ಬಳೆಗಗ್ಗರಗಳೆಲ್ಲ
ಬಿಂಕದಲಿ ಗಂಟಿಕ್ಕಿ ರಸಗಬ್ಬ ಕುಪ್ಪುಸವ
ಬಿಗಿಯು ಹಳದೆನುತ ನಗುತ!

ಅಂದವಿದು ಕುಂಕುಮವು ಹಿಂದಿಯಾ ನವ ರಾಗ
ದಿಂದ ಕೂಡಿಹುದೆನುತ ಒಂದು ಬೆರಳಲಿ ತೇದು
ಎಂದಿನಾ ನೆಪ್ಪಿನಲಿ ಹಣೆಗಿಟ್ಟಳವಸರದಿ
ಬಳಿಕ ತಿದ್ದುವೆನೆನ್ನುತ.

ಮಹರಾಷ್ಟ್ರ ಮುಖುರವದು ಬಿಗಿದ ಮುತ್ತುಗಳಿಂದ
ಗಹಗಹಿಸಿ ಯಲುಗುತ್ತ ದೇವಿ ನಗಲು! ನಗಲು!
ಬಹು ಕೆಂಪಿನಾವೊಲೆ ತೆನುಗನ್ನು ಹೋಲುತಲಿ
ಮಿನುಗಿ ಮೃಗಶಿರನ ಹಳಿಯೆ!

ತಮಿಳು ಕಂಠಿಯ ಕೀಲನಮಿತ ಪ್ರೇಮದಲೊತ್ತಿ
ರಮಣಿ ಯುಳಿದಾಭರಣಗಳ ಧರಿಸೆ
ಉಡಿಗೆ ತೊಡಿಗೆಗಳೆಲ್ಲ ಪಡೆಯುತಿರೆ ತಿಳಿ ಹೊಳಪ
ಸಿರಿ ಮೈಯ ತೇಜದಿಂದ

ಸಿಂಗರವು ಮುಗಿಯಿತಿದು ಮುಂಬೆಳಗಿ ಬೆಳೆಯುತಿದೆ
ಅಂಗಾಂಗಳ ಕಾಂತಿ! ಇಂಬಾಯ್ತು ಉಡಿಗೆ ತೊಡಿಗೆ!
ಸಂಗಡಲೆ ತಿದ್ದುವೆನು ತಿಲಕವನು ಎನ್ನುತಲೆ
ಅರಸಿ! ರನ್ನ ಗನ್ನಡಿಯ!

ಬಲುದಿನದ ರತುನವಿದು ಚಿರಕಾಲವಾಯ್ತಿದನು
ತೆರೆದು ನೋಡಿಲ್ಲೆಂದು ಒಲಿದು ನೋಡುತ ರಮ್ಯೆ!
ಒರೆಸಿದಳು ಶರಗಲ್ಲಿ ಅಬ್ಬಬ ಬಲುಮಂಕು
ಮೊಬ್ಬಾಯ್ತು ಎನುತೆನುತಲೆ!

ಶರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ
ಸಿರಿಗನಡಿ ಏತಕಿದು ಒಲಿಯದಿಹುದು!
ವರಪತಿಯ ಕಾಣಲಿಹೆ
ಸರಿ‌ಇಲ್ಲ! ಇದು ತಿಲಕ!
ಸಿರಿಗನಡ ವದನವನು ತೋರದಿಹುದು

ಚಿರದಿನದ ರತುನವಿದು
ಸಿರಿಗನಡ ಕನಡಿಯಿದು!
ಶೆರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ!
ಸಿರಿಗನಡಿ! ಏತಕಿದು
ಮೊಗಛವಿಯ ತೋರದೆನುತ
ಹಿರಿಹೊಲಸ ನೊರಸುತ್ತ
ಮರುಗುತಿಹಳು!
ಮರು ಮರುಗುತಿಹಳು!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...