Home / ಲೇಖನ / ಇತರೆ / ಪುಸ್ತಕ ಪ್ರೀತಿ

ಪುಸ್ತಕ ಪ್ರೀತಿ

ಚಿತ್ರ: ಅಲೆಕ್ಸಾಂಡರ್‍ ಸ್ಟಾಕ್ಮಾರ್‍

ಪ್ರಿಯ ಸಖಿ,

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದು. ನಿಜವೇ ಆದರೆ ಚಿಂತನಶೀಲತೆ ಬೆಳೆಯುವುದು ಪುಸ್ತಕಗಳ ಸಂಪರ್ಕದಿಂದ. ಆದ್ದರಿಂದ ಪುಸ್ತಕಗಳ ಪ್ರಯೋಜನವು ಅಂತರಂಗ ಚೈತನ್ಯದ ಸಾಧನೆಗೆ ಮೊದಲ ಮೆಟ್ಟಿಲು ಎನ್ನಬಹುದು.

ಪುಸ್ತಕಗಳು ಹಲವಾರು ಮಹಾತ್ಮರ ಜೀವನವನ್ನು ರೂಪಿಸಿವೆ. ಹಲವರ ಬದುಕಿನಲ್ಲಿ ಪ್ರಭಾವ ಬೀರಿವೆ. ಕ್ರಾಂತಿಯುಂಟು ಮಾಡಿವೆ. ಬದಲಾವಣೆ ತಂದಿವೆ. ಹೊಸ ವಿಚಾರಗಳನ್ನು ಮೊಳೆಸಿವೆ, ಬೆಳೆಸಿವೆ. ಉತ್ತಮ ಪುಸ್ತಕವನ್ನು ಓದುವವರು ಇರುವವರೆಗೂ
ಈ ಪ್ರಕ್ರಿಯೆಗಳು ಸಾಗುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುತ್ತಿರುವವರು ಕಡಿಮೆಯಾಗುತ್ತಿದ್ದಾರೆ ಎಂಬ ದೂರು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ.

ಬದಲಾದ ನಮ್ಮ ಜೀವನ ಶೈಲಿಯಿಂದ ಅವಸರದ ಈ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಾಗೇ ದೃಶ್ಯ ಮಾಧ್ಯಮಗಳ ಹಾವಳಿಯೂ ಈ ಹವ್ಯಾಸಕ್ಕೆ ನೇರ ಪೆಟ್ಟು ಕೊಟ್ಟಿದೆ. ಹಣವನ್ನು ಮಾಡುವುದೇ ಜೀವನದ ಪ್ರಮುಖ ಗುರಿಯೆಂಬ ಭೂತ ಮಿದುಳನ್ನು ಹೊಕ್ಕಂದಿನಿಂದ ಯಾವ ಹವ್ಯಾಸಗಳಿಗೂ ಈಗ ಜನರಿಗೆ ಬಿಡುವಿಲ್ಲ. ಫ್ಯಾಷನ್, ಐಷಾರಾಮದ ಬದುಕು, ಪಂಚತಾರಾ ಸಂಸ್ಕೃತಿಯೆಡೆಗೆ ಹೆಚ್ಚು ವಾಲುತ್ತಿರುವ ನಮಗೆ ಓದುವುದು, ಗಂಭೀರವಾಗಿ ಯೋಚಿಸುವುದು, ಚಿಂತಿಸುವುದು, ಓದಿದ್ದನ್ನು ಮನನ ಮಾಡುವುದು ಎಲ್ಲವೂ ಬೋರ್ ಎನ್ನಿಸುತ್ತದೆ.

ಪ್ರಿಯ ಸಖಿ, ಆದರೆ ಬೇರೆ ಯಾವ ಮಾಧ್ಯಮವೂ ನೀಡಲಾಗದಂತಹ ಸಂತೋಷವನ್ನು, ಆತ್ಮ ತೃಪ್ತಿಯನ್ನು ಪುಸ್ತಕದ ಓದು ನೀಡುತ್ತದೆ. ಉತ್ತಮ ಪುಸ್ತಕದ ಓದಿನಿಂದ ಮನಸ್ಸು ಅರಳುತ್ತದೆ. ಇದೇ ಓದಿನಿಂದ ನಮಗೆ ದೊರೆಯುವ ಪ್ರತಿಫಲ. ಹಾಗೇ ಎಲ್ಲ ಮಾಧ್ಯಮಗಳಿಗೂ ಮೂಲ ಪುಸ್ತಕಗಳೇ ಎನ್ನುವುದನ್ನು ನಾವು ಮರೆಯುವಂತಿಲ್ಲ. ಅಧ್ಯಾತ್ಮ, ಧಾರ್ಮಿಕ, ತಾತ್ವಿಕ, ಸಾಮಾಜಿಕ, ನೈತಿಕ, ಕೌಟುಂಬಿಕ,
ರಾಜಕೀಯ ಹೀಗೆ ಯಾವುದೇ ವಿಭಾಗದ ಪುಸ್ತಕವಿರಲಿ ಆ ಅಭಿರುಚಿಯಿರುವ ಓದುಗನಿಗೆ ನೆಮ್ಮದಿಯನ್ನು ನೀಡುತ್ತದೆ. ಹೊಸ ಬೆಳಕನ್ನು ಮೂಡಿಸುತ್ತದೆ.

ಸಖಿ, ಪುಸ್ತಕಕ್ಕೆ ಒಂದು ಜನಾಂಗದ ಕಣ್ಣು ತೆರೆಸುವ ಶಕ್ತಿಯಿದೆ. ಆದ್ದರಿಂದಲೇ ನಮ್ಮಲ್ಲಿ ಪುಸ್ತಕ ಪ್ರೀತಿ ಎಷ್ಟು ಬೇಗ ಮೊಳೆಯುತ್ತದೋ ಅಷ್ಟೂ ಒಳ್ಳೆಯದು. ಆ ಪ್ರೀತಿಯಿಂದ ನಾವು ಹೆಚ್ಚು ಹೆಚ್ಚು ಓದುವಂತಾಗಲಿ, ತಿಳಿಯುವಂತಾಗಲಿ, ಆರಳುವಂತಾಗಲಿ, ನೆಮ್ಮದಿ ಕಾಣುವಂತಾಗಲಿ.


Tagged:

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...