Home / ಕವನ / ಕವಿತೆ / ಮುಖಗಳು

ಮುಖಗಳು

ಬೆಳಕಿನ ಮುಖಗಳಿವೆ
ಮಣ್ಣಿನ ಮುಖಗಳಿವೆ
ಇವೆರಡರ ನಡುವೆಯೊಂದು
ದಾರಿ ಹುಡುಕುತ್ತೇನೆ:
ಮನುಷ್ಯರ ಮುಖಗಳತ್ತ
ಕೊಂಡೊಯ್ಯುವ ದಾರಿ

ಮುಖವಿಲ್ಲದವನು ನಾನು.

ನಿನ್ನ ಮುಖ ನನ್ನದು
ಅವನದೂ ನನ್ನದೇ
ಅವಳದೂ ಹೌದು.
ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ
ನನ್ನ ಸ್ವರೂಪವೇ ಬಿಂಬಿಸಿದಂತೆ
ಅನಿಸುತ್ತದೆ.
ಮತ್ತು ಈ ಬೃಹತ್ ಕೋಣೆಯಲಿ ನನ್ನ ಸ್ವಗತವೇ
ಧ್ವನಿಯಾಗಿ ಪ್ರತಿಧ್ವನಿಯಾಗಿ
ತಮ್ಮಟೆ ಬಾರಿಸುತ್ತದೆ ನಿರಂತರ.
ಇಷ್ಟೆ ಅಲ್ಲ.
ಈಡಿಪಸ್, ನೀರೊ, ಶಾಜಹಾನ್
ಹೀಗೆ ಸೀರೆನಿರಿಯಂತೆ
ಅಕ್ಷಯ ಅವತಾರಿಯಾಗಿ
ಕೊರೆದಿದ್ದೇನೆ ಚರಿತ್ರೆಯಲಿ
ನನ್ನ ಮುಖಗಳ ಏರುತಗ್ಗು.
ಆಕಾರಕ್ಕೆ ಬಾರದೆ
ನೆರಳಾಗಿ, ನೆರಳೂ ಅಲ್ಲದಾಗಿ
ಅಗೋಚರವಾಗಿ
ಯಾರಿಗೂ ಏನೂ ಅಲ್ಲದೆ
ತೊಟ್ಟು ಕಳಚಿ
ಆಕಾಶದಲ್ಲಿ ತ್ರಿಶಂಕುವಾಗಿ
ತೊನೆಯುತ್ತಿರುವ,
ಇರವಿನರಿವಿಲ್ಲದೆ, ಇರವೂ ಇಲ್ಲದೆ,
ಬದುಕಿ ಸತ್ತಿರುವ
ಸತ್ತು ಬದುಕಿರುವ
ಸಾವು ಬದುಕಿನ ಮಧ್ಯೆ ಪ್ರೇತಾತ್ಮವಾಗಿರುವ
ಆತ್ಮವೇ ಇಲ್ಲದ ಹಲವು ಸಾವಿರ
ಮುಖಗಳೂ ಇವೆ ನನಗೆ.
ಇವೆಲ್ಲವನು ಹೊತ್ತು
ಈಜಿಪ್ತದ ಸ್ಫಿಂಕ್ಸೆನ ಹಾಗೆ
ಭೂತದಿಂದ ಭವಿಷ್ಯತ್ತಿನ ಕಡೆಗೆ
ನಾನು ಮುಂದೊತ್ತಿ ಬರುತ್ತಿದ್ದೇನೆ ಮೆಲ್ಲಗೆ
ಆದರೂ ನನಗೆ ಇವೆಲ್ಲವೂ ಮಸಕು
ಎಲ್ಲ ಮುಖಗಳಿಗೂ ಅಪರಿಚಿತ ಮುಸುಕು
ನಿನ್ನದೂ
ನನ್ನದೂ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...