Home / ಕವನ / ಕವಿತೆ / ಹಗಲಲ್ಲಿ ಕೆಂಪು ಕತ್ತಲೆ

ಹಗಲಲ್ಲಿ ಕೆಂಪು ಕತ್ತಲೆ

ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ
ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ
ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ
ಮಂದಿರಗಳಲ್ಲಿ ಮಾರಣಹೋಮ ನಡೆದಿದೆ
ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ
ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು
ಬೇರೆ ಸಂದಿನವರನೆಲ್ಲ ಕೊಲ್ಲಲು ಧರ್ಮಾದೇಶ ನೀಡುತ್ತಾನೆ
ತಿಳಿ ಸರೋವರದಂಥ ಕೂಸು ಕಂದಮ್ಮಗಳ ಕಣ್ಣುಗಳಲ್ಲಿ
ಕೆಂಪು ನದಿಗಳ ಭಯಾನಕ ಕನಸುಗಳು
ಮನಮನಗಳು ಸಿಡಿಮದ್ದುಗಳ ಗೂಡುಗಳಾಗಿವೆ
ಮಾತು ಮಾತುಗಳು ವಿಷ ಒಳಗಿಟ್ಟುಕೊಂಡ ಹೂಗಳು
ಮಚ್ಚು ಚಾಕು ಚೈನುಗಳದೇ ಕಾರುಬಾರು
ಓಣಿ ಓಣಿಗಳಲ್ಲಿ ದೇಶದ ಸಂದುಗೊಂದುಗಳಲ್ಲಿ

ಆದರೆ ಮೇಲೆ ಮೇಲೆ ಹಾಡುತ್ತಿದ್ದಾರೆ
‘ಸಾರೆ ಜಹಾನ್‌ಸೆ ಅಚ್ಚಾ ಹಿಂದೋಸ್ತಾನ್ ಹಮಾರಾ’
‘ಈಶ್ವರ ಅಲ್ಲಾ ತೇರೇ ನಾಮ್ ಸಬಕೋ ಸನ್ಮತಿ ದೇ ಭಗವಾನ್’
ದಮ್ಮೇ ಇಲ್ಲದೆ ಹಾಡು ಗಾಳಿಯಲ್ಲಿ ತೇಲಿ ಕರಗಿ ಹೋಗುತ್ತವೆ

ದೇಶ ಸಮಸ್ಯೆಗಳ ಹಾವುಗಳ ಹುತ್ತ
ಒಳಗೊಳಗೇ ಭುಸುಗುಡುತ್ತಿವೆ
ಉಗುಳುತ್ತಿವೆ ವಿಷವ-ಕೊಲ್ಲುತ್ತಿವೆ ಭವಿಷ್ಯವ
ಮೇಲೆ ಕಟ್ಟಿದ ವಲ್ಮೀಕವ ಗುಡಿಯೆಂದು ಭಾವಿಸಿದ್ದಾರೆ
ರಾಮ ರಹೀಮರ ನಡುವೆ ಮುಗಿಲೆತ್ತರ ಗೋಡೆ
ಒಂದನ್ನೊಂದು ನಿರ್ನಾಮ ಮಾಡುವ ದ್ವೇಷ
ತ್ವೇಷದ ಭ್ರಮೆಯ ಪರಿಕಲ್ಪನೆ

ಜಗವೇ ಮನೆಯಾದವಗೆ ಮಂದಿರ ಮಸೀದಿಗಳಲಿ
ಕಟ್ಟಿ ಹಾಕಿದ್ದಾರೆ, ನಿರಾಕಾರ ನಿರ್ಗುಣನ ಮೈಮೇಲೆ
ನಾಮ ಜನಿವಾರ, ಟೋಪಿ ಗಡ್ಡಗಳ ಅಂಟಿಸಿ
ದಾರಿ ಮಾಡಿಕೊಂಡಿದ್ದಾರೆ ಕೆಂಪು ಕಾಲುವೆಗಳಿಗೆ
ಸಜ್ಜಾಗಿವೆ ಕೆಂಗಣ್ಣುಗಳು ಭಾವುಕತೆಯಿಂದ

ಬಾತುಕೂಂಡಿವೆ ತೋಳುಗಳು ಬಡಿದಾಡುವ ಹಟದಿಂದ
ವಿಜ್ಞಾನ ಸೂರ್ಯ ಒಂದೇ ತೆಕ್ಕೆಯಲ್ಲಿ
ಭೂಮಂಡಲವ ಅಪ್ಪಿಕೊಂಡಿರುವ ಈ ಹಗಲಲ್ಲೇ
ಆವರಿಸಿದೆ ಮತಾಂಧ ಕೆಂಪುಕತ್ತಲು ಸುತ್ತಲು
ತಾಲಿಬಾನೋ ಅಯೋಧ್ಯಯ ನೆಲಬಾನೊ
ಕಾಶ್ಮೀರವೋ ಮಾಯಲಾರದ ಹುಣ್ಣು ಹುಣ್ಣು
ಗಾಂಧೀಜಿಯ ಗುಜರಾತು ನರಮೇಧಗಳ ಸುಡುಗಾಡು
ಅಹಿಂಸಾತತ್ವದ ತೆಳು ಮೋಡ ಮೇಲೆ ಮೇಲೆ
ಹಿಂಸಾ ತಾಂಡವ ನರ್ತಿಸಿದೆ ಕರುಳುಗಳ ಮಾಲೆ ಮಾಲೆ
ರಾಜಕೀಯ ಚೌಕಾಸಿ ನಡೆದಿದೆ ಕುರ್ಚಿಗಳ ಮೇಲೆ
ಅಕರಾಳ ವಿಕರಾಳ ರಕ್ತಮಾಂಸಗಳ ಪಿಪಾಸೆ
ಹಲ್ಲುಕಿಸಿದು ದೇಶದ ಮೂಲೆ ಮೂಲೆಗಳಲ್ಲಿ ತಿನ್ನುತ್ತಿದ್ದರೂ
ದಿಲ್ಲಿ ಸಾರುತ್ತಿದೆ ಮೇರಾ ಭಾರತ್‌ ಮಹಾನ್
ಇಲ್ಲಿ ಅಂತರಾತ್ಮ ಮುನುಗುತಿದೆ ದೇಶದ ಅವಸಾನ್
ಸಬಕೋ ಸನ್ಮತಿ ದೇ ಭಗವಾನ್
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...