Home / ಕಥೆ / ಜನಪದ / ಕಾಮಣ್ಣ ಭೀಮಣ್ಣ

ಕಾಮಣ್ಣ ಭೀಮಣ್ಣ

Kamanna Bheemannaಕುರಿಕಾಯುವ ಜೊತೆಗಾರರಾದ ಕಾಮಣ್ಣ ಭೀಮಣ್ಣ ಅವರಿಬ್ಬರು ತಮ್ಮ ಕುರಿ ಹಿಂಡಿನೊಡನೆ ಅಡವಿಯಲ್ಲಿಯೇ ಅಡ್ಡಾಡುವರು; ಅಡವಿಯಲ್ಲಿಯೇ ವಾಸಿಸುವರು. ತಮ್ಮಷ್ಟು ಜಾಣರಾದವರು ಇನ್ನಾರೂ ಇಲ್ಲವೆಂದೇ ಅವರು ಬಗೆದಿದ್ದರು. ಅಂಥ ಜಾಣರಾಗಿದ್ದರೂ ಅವರಿಬ್ಬರೂ ಬಗೆಹರಿಯಲಾರದ ಒಂದು ಸಮಸ್ಯೆಯಿತ್ತು ಅದೇನೆಂದರೆ – ಹೋಳಿಗೆಯಲ್ಲಿ ಹೂರಣವನ್ನು ಯಾವದಾರಿಯಲ್ಲಿ ಹಾಕುತ್ತಾರೆ ?

ಅವರಿಬ್ಬರು ಕುರಿ ಹಿಂಡು ಮುಂದೆ ಮಾಡಿಕೊಂಡು ಸಾಗಿದಾಗ, ಒಂದು ದೊಡ್ಡ ಹೊಲದಲ್ಲಿ ಹಾಯ್ದು ಹೋಗಬೇಕಾಯಿತು. ಅಲ್ಲಿ ಏಳು ಗಳೆ ನಿಂತಿದ್ದವು; ಮತ್ತು ಹತ್ತಿರದಲ್ಲಿಯೇ ಹದಿನಾಲ್ಕು ಎತ್ತುಗಳು ಮೇಯುತ್ತಿದ್ದವು. ಗಳೆ ಹಾಗೂ ಎತ್ತುಗಳನ್ನು ಕಂಡು ಕಾಮಣ್ಣನಲ್ಲಿ ಗಣಿತದ ರೀತಿ ಸುಳಿದು ಬಂತು – “ಏ ಭೀಮಾ, ಇಲ್ಲಿ ನೋಡು. ಬೆಸ ಗಳೆ, ಸರಿ ಎತ್ತುಗಳಿವೆ. ಬೆಸ ಗಳೇಗಳಿಗೆ ಸರಿ ಎತ್ತುಗಳನ್ನು ಹೇಗೆ ಹೂಡುವರೋ ನೋಡಿಯೇ ಹೋಗೋಣ.”

ಅವರು ಮಂಡಿಗೆಯನ್ನೇನೊ ಹಾಗೆ ಮಾಡಿದರು, ಆದರೆ ಮುಖತಗ್ಗಿಸಿ ಸಾಗಿದ ಕುರಿಹಿಂಡು ಮುಂದಿನ ಮರಡಿಯೇರಿ ಹೋಗಿದ್ದರಿಂದ ಅವರು ಆ ಹೊಲದಲ್ಲಿ ಆಳುಗಳು ಬರುವವರೆಗೆ ನಿಲ್ಲದೆ, ಕುರಿಹಿಂಡು ಮೇಯುತ್ತಿರುವ ಮರಡಿಯನ್ನೇರಿ ಹೋದರು.

ಮುಂದೆ ಒಂದರ್ಧತಾಸಿನಲ್ಲಿ ಹೊರಳಿನೋಡಿದರೆ, ಎಲ್ಲ ಗಳೇಗಳನ್ನು ಎತ್ತುಗಳು ಎಳೆಯುತ್ತ ಉಳತೊಡಗಿದ್ದು ಕಾಣಿಸಿತು.

ಇನ್ನೊಮ್ಮೆ ಒಂದು ಜೋಳದ ಹೊಲದ ಬದಿಯಲ್ಲಿ ತಮ್ಮ ಹಿಂಡಿನೊಡನೆ ಹೊರಟಾಗ ಎಲ್ಲಾ ಕಡೆಗೂ ಕಣ್ಣಾಡಿಸಿ, ಕಣ್ಣೋಡಿಸಿ ನೋಡಿದರು. ಜೋಳದ ಬೆಳೆ ಎಡೆಗೆ ಬಂದಿತ್ತು. ಭೀಮಣ್ಣ ಕೇಳಿದನು – ಕಾಮಾ. ಈ ಒಕ್ಕಲಿಗರು ಗಿಪ್ಪದ ಹಾಲು ಕುಡಿದು ಬಾಳ್ವೆಮಾಡುವರೇನೋ ? ಇಡಿಯ ಹೊಲವನ್ನೆಲ್ಲ ಜೋಳಬಿತ್ತಿಬಿಟ್ಟಿದ್ದಾರೆ. ನಾಳೆ ಬೆಳೆಯೆಲ್ಲ ತೆನಿಹಿಡಿದು, ಕಾಳು ಆಗಿ, ಹಕ್ಕಿ ಕಾವಲಿಗೆ ಬಂದಾಗ ಏತರಮೇಲೆ ನಿಂತು ಹಕ್ಕಿ ಹೊಡೆಯುತ್ತಾರೆ ? ಅಟ್ಟ ಹಾಕುವುದೆಲ್ಲಿ?”

“ಅಹುದು. ಬಿತ್ತುವಾಗ ಅವರು ಅಟ್ಟ ಹಾಕುವುದನ್ನು ಲೆಕ್ಕಿಸಿಯೇ ಇಲ್ಲ. ತೆನೆಗಳೆಲ್ಲ ಕಾಳು ಹಿಡಿದಾಗ ಅವರಿಗೆ ತಮ್ಮ ತಪ್ಪು ತಿಳಿಯುತ್ತದೆ” ಎಂದು
ಮರುನುಡಿದನು ಕಾಮಣ್ಣ.

ಹದಿನೈದು ದಿನಗಳ ತರ್ವಾಯ ಅವರಿಬ್ಬರೂ ಅದೇ ದಾರಿಯಿಂದ ತಮ್ಮ ಹಿಂಡುಗಳೊಡನೆ ಸಾಗಿದಾಗ ಆ ಜೋಳದಲ್ಲಿ ಅಟ್ಟ ಕಾಣಿಸಿತು. “ಯಾರು
ಹೇಳಿಕೊಟ್ಟಿದ್ದಾರು ಅವರಿಗೆ ಅಟ್ಟ ಹಾಕುವ ಯುಕ್ತಿಯನ್ನು ?” ಎಂದು ಅವರು ಮಾತಾಡುತ್ತ ಹೊರಟಾಗ, ಹಿಂದಿನಿಂದ ಒಂದು ದನಿ ಬಂದು – “ಅಟ್ಟ ಹಾಕುವ ಯುಕ್ತಿಯೇ?

“ಹೊಲದ ತುಂಬ ಜೋಳ ಬಿತ್ತಿದ್ದರು. ಅಟ್ಟಹಾಕುವದಕ್ಕೆ ಸ್ಥಳವನ್ನೇ ಬಿಟ್ಟಿರಲಿಲ್ಲ. ಈಗ ಅಟ್ಟ ಹೇಗೆ ಹಾಕಿದರು ?

“ಅದರಲ್ಲೇನು ಜಾಣತನವಿದೆ ? ಹತ್ತೆಂಟು ಜೋಳದ ದಂಟು ಕಿತ್ತಿ ಹಾಕಿದರಾಯ್ತು. ಅಟ್ಟ ಹಾಕುವದಕ್ಕೆ ಸ್ಥಳ ಆಗುತ್ತದೆ” ಎಂದವನೇ ಬಿರಿಬಿರಿ
ಹೋಗಿಬಿಟ್ಟನು, ಆ ಹೊಲದ ಮುದುಕ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...