ಪ್ರಾಣಿಗಳಿಂದ ಕಲೀಬೇಕಾದ್ದು
ಭಾಳ ಭಾಳ ಇದೆಯಪ್ಪ!
ಸ್ಕೂಲಿಗೆ ಹೋಗ್ದೆ ಇದ್ರೂನೂ
ಅವುಗಳ ಬುದ್ಧಿ ಚುರುಕಪ್ಪ!
ನಾವ್ ಹಾಕೋದು ಕೊಂಚ ಅನ್ನ
ಆದ್ರೂ ಅದನ್ನ ನೆನಪಿಟ್ಟು
ನಾಯಿ ಮನೇನ ಕಾಯುತ್ತೆ
ನಿದ್ದೆ ಕೂಡ ಬಿಟ್ಬಿಟ್ಟು!
ಇರುವೆ ಎಷ್ಟೊಂದ್ ಸಣ್ಣನೆ ಪ್ರಾಣಿ
ಆದ್ರೂ ಶಿಸ್ತಿಗೆ ಹೆಸರು,
ನೂರಾರ್ ಇದ್ರೂ ಹೋಗ್ತಿರ್ತಾವೆ
ಕ್ಯೂನಲ್ಲೇ ಹರಿದು.
ಜಾತಿ ಗೀತಿ ಮಾತೇ ಇಲ್ಲ
ಎಲ್ಲಾ ಒಗ್ಗಟ್ಟಾಗಿ
ಬೇದ ಇಲ್ದೆ ದುಡೀತಾವೆ
ಶಿಸ್ತಿನ ಸಿಪಾಯಿ ಆಗಿ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.