Home / ಕವನ / ಕವಿತೆ / ನಿನ್ನೊಳಗನಿಣುಕಿದವರೆಷ್ಟು ಮಂದಿ

ನಿನ್ನೊಳಗನಿಣುಕಿದವರೆಷ್ಟು ಮಂದಿ

ಅಮ್ಮಾ!
ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ,
ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ,
ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ
ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ
ಕುಸುರಿಗೆಲಸಗಳ ನೋಡಿ ಮರುಳಾಗಿ
ಬಾಯ್ತೆರೆದು ಅಲ್ಲೇ ಕುಳಿತವರು ಬಹಳ
ನಿನ್ನ ಸಮೀಪಿಸಿದವರು ನಿನ್ನೊಡವೆ ತೊಡುವೆಗಳ
ಬೆಡಗಿಗೆ ದಡಬಡಿಸಿ ದಂಗಾಗಿ, ನಿನ್ನ ಮೈಕಾಂತಿಗೆ ಕಣ್ಕುಕ್ಕಿ
ಆ ಚೆಲುಬಲೆಯಲ್ಲಿ ಸಿಲುಕಿ ಒದ್ದಾಡಿದವರು ಬಹಳ,
ನಿನ್ನ ಮಾತನಾಲಿಸಿದವರು, ಅದರಿಂಪು ಸೊಂಪಿಗೆ
ಒಗಟು ಜಿಗುಟುಗಳಿಗೆ, ಕಿವಿಯಗಲಿಸಿ ಬೆಪ್ಪಾದವರು ಬಹಳ,
ನಿನ್ನೊಂದೊಂದು ಬೆರಳ ಸನ್ನೆಗಳಿಗೆ ತಮತಮಗೆ ಕಂಡಂತೆ
ಅರ್ಥಗಳ ಹಚ್ಚಿ ಅನರ್ಥವುಂಡವರು ಬಹಳ
ನಿನ್ನ ಮನೆಯಿಂದಾಯ್ದ ಆಣಿಮುತ್ತೆಂದು
ಹಗಲೆಲ್ಲ ಬಾಯಲುರುಳಾಡಿಸಿ ಸವೆಸಿದವರು ಬಹಳ
ನಿನ್ನ ಹೊತ್ತಿಗೆಗಳ ಹೊತ್ತು ಮೆರೆಸಿ ತಾವು ಮೆರೆದವರು ಬಹಳ
ನಿನ್ನೆದೆ ಮಾತನಾಲಿಸುವ ಭ್ರಮೆಯಿಂದ ಮಾಯೆಲೀಲೆಗಳಲಿ
ಮುಳುಗಿದವರು ಬಹಳ

ನಿನ್ನ ಹೃದಯವ ಮುಟ್ಟಿದವರೆಷ್ಟು ಮಂದಿ ತಾಯಿ?
ನಿನ್ನೊಳಮರ್ಮವ ಅರಿತವರೆಷ್ಟು ಮಂದಿ?
ನಿನ್ನ ನಡೆಯ ನಡೆದವರೆಷ್ಟು?
ನಿನ್ನ ಮಾತಿನ ಜ್ಯೋತಿಯಿಂದ ತಮ್ಮ
ಅಂತರಂಗ ಬಹಿರಂಗಗಳ ಬೆಳಗಿದವರೆಷ್ಟು ಮಂದಿ?
ನಿನ್ನೊಳಗಿನೊಳಗೆ ಇಣುಕಿದವರೆಷ್ಟು ಮಂದಿ?
ನಿನ್ನಲಿ ಲೀನವಾಗಿ ನಿನಗೆ ತಮ್ಮನೊಪ್ಪಿಸಿಕೊಂಡವರೆಷ್ಟು ಮಂದಿ
ತಾಯಿ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...