Home / ಕವನ / ಕವಿತೆ / ನಿನ್ನೊಳಗನಿಣುಕಿದವರೆಷ್ಟು ಮಂದಿ

ನಿನ್ನೊಳಗನಿಣುಕಿದವರೆಷ್ಟು ಮಂದಿ

ಅಮ್ಮಾ!
ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ,
ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ,
ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ
ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ
ಕುಸುರಿಗೆಲಸಗಳ ನೋಡಿ ಮರುಳಾಗಿ
ಬಾಯ್ತೆರೆದು ಅಲ್ಲೇ ಕುಳಿತವರು ಬಹಳ
ನಿನ್ನ ಸಮೀಪಿಸಿದವರು ನಿನ್ನೊಡವೆ ತೊಡುವೆಗಳ
ಬೆಡಗಿಗೆ ದಡಬಡಿಸಿ ದಂಗಾಗಿ, ನಿನ್ನ ಮೈಕಾಂತಿಗೆ ಕಣ್ಕುಕ್ಕಿ
ಆ ಚೆಲುಬಲೆಯಲ್ಲಿ ಸಿಲುಕಿ ಒದ್ದಾಡಿದವರು ಬಹಳ,
ನಿನ್ನ ಮಾತನಾಲಿಸಿದವರು, ಅದರಿಂಪು ಸೊಂಪಿಗೆ
ಒಗಟು ಜಿಗುಟುಗಳಿಗೆ, ಕಿವಿಯಗಲಿಸಿ ಬೆಪ್ಪಾದವರು ಬಹಳ,
ನಿನ್ನೊಂದೊಂದು ಬೆರಳ ಸನ್ನೆಗಳಿಗೆ ತಮತಮಗೆ ಕಂಡಂತೆ
ಅರ್ಥಗಳ ಹಚ್ಚಿ ಅನರ್ಥವುಂಡವರು ಬಹಳ
ನಿನ್ನ ಮನೆಯಿಂದಾಯ್ದ ಆಣಿಮುತ್ತೆಂದು
ಹಗಲೆಲ್ಲ ಬಾಯಲುರುಳಾಡಿಸಿ ಸವೆಸಿದವರು ಬಹಳ
ನಿನ್ನ ಹೊತ್ತಿಗೆಗಳ ಹೊತ್ತು ಮೆರೆಸಿ ತಾವು ಮೆರೆದವರು ಬಹಳ
ನಿನ್ನೆದೆ ಮಾತನಾಲಿಸುವ ಭ್ರಮೆಯಿಂದ ಮಾಯೆಲೀಲೆಗಳಲಿ
ಮುಳುಗಿದವರು ಬಹಳ

ನಿನ್ನ ಹೃದಯವ ಮುಟ್ಟಿದವರೆಷ್ಟು ಮಂದಿ ತಾಯಿ?
ನಿನ್ನೊಳಮರ್ಮವ ಅರಿತವರೆಷ್ಟು ಮಂದಿ?
ನಿನ್ನ ನಡೆಯ ನಡೆದವರೆಷ್ಟು?
ನಿನ್ನ ಮಾತಿನ ಜ್ಯೋತಿಯಿಂದ ತಮ್ಮ
ಅಂತರಂಗ ಬಹಿರಂಗಗಳ ಬೆಳಗಿದವರೆಷ್ಟು ಮಂದಿ?
ನಿನ್ನೊಳಗಿನೊಳಗೆ ಇಣುಕಿದವರೆಷ್ಟು ಮಂದಿ?
ನಿನ್ನಲಿ ಲೀನವಾಗಿ ನಿನಗೆ ತಮ್ಮನೊಪ್ಪಿಸಿಕೊಂಡವರೆಷ್ಟು ಮಂದಿ
ತಾಯಿ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...