Home / ಲೇಖನ / ಇತರೆ / ಪೌರುಷ-ಜಾದು

ಪೌರುಷ-ಜಾದು

ತಮ್ಮನ್ನು ತಾವೇ ಹೊಗಳಿಕೊಳ್ಳುವದು ಕೆಲವರಿಗೆ ಸೇರುತ್ತದೆ. ಎರಡನೇಯವರನ್ನು ಹೊಗಳುವದು ಕೆಲವರ ರೀತಿ, ಎರಡನೇಯವರು ತಮ್ಮನ್ನು ಹೊಗಳಬೇಕೆಂದು ಕೆಲವರ ಇಚ್ಛೆ. ಈ ಮೂರು ತರಗತಿಯ ಜನರಲ್ಲಿ ತೀರ ಕನಿಷ್ಟರಾರೆಂಬುದನ್ನು ಹೇಳುವಷ್ಟು ಜಾಣನಿದ್ದೇನೆಂದು ನಾನು ಸ್ವತಃ ನನ್ನನ್ನು ಹೊಗಳಿಕೊಳ್ಳುವದಿಲ್ಲ !
     *     *     *
ಯಾರು ತೀರ ಕನಿಷ್ಠರೆಂಬದನ್ನು ವಿಚಾರಿಸಹತ್ತಿದರೆ ಮೊದಲು ಎಲ್ಲರೂ ಕನಿಷ್ಠರೆಂದು ಒಪ್ಪಿದಂತಾಗುತ್ತದೆ. ಆ ಮೇಲೆ ಅದರಲ್ಲಿ ಕನಿಷ್ಠರಾರು ? ಹೆಚ್ಚು ಕನಿಷ್ಟರು ಯಾರು ? ತೀರ ಕನಿಷ್ಠರು ಯಾರು ? ಎಂಬವನು ನಿರ್ಣಯಿಸಬೇಕಾಗುತ್ತದೆ. ಇದನ್ನು ವಾಚಕವೃಂದವೇ ನಿರ್ಣಯಿಸಲಿ. ವಾಚಕರು ಇಷ್ಟು ಜಾಣರಿರುವರೆಂದು ಹೊಗಳಲು ಸಿದ್ಧನಿದ್ದೇನೆ!
     *     *     *
ಆದರೆ ನನಗಾದರೂ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಡ್ಡಿ ಏನಿದೆ ? ಅಂದರೆ ಉಳಿದ ಸಮಯದಲ್ಲಿ ಅಪ್ರಾಮಾಣಿಕ ಅಭಿಪ್ರಾಯ ಕೊಡುತ್ತೇನಂತಲ್ಲ. ಹೀಗೆ ಅನ್ನುವ ರೂಢಿ, ವಿಶೇಷತಃ ಅಪ್ರಾಮಾಣಿಕ ಅಭಿಪ್ರಾಯವನ್ನು ಕೊಡುವಾಗ ಅದಕ್ಕೆ ಪ್ರಾಮಾಣಿಕ ಮತವೆಂದು ಒತ್ತಿ ಹೇಳುವದು ರೂಢಿ !
* * * *
ಅದೇನೇ ಇರಲಿ, ನನ್ನ ಪ್ರಾಮಾಣಿಕ ಅಭಿಪ್ರಾಯವು ಹೀಗೆ ಇರುತ್ತದೆ: ಮೇಲೆ ಕಾಣಿಸಿದ ಮೂರು ಗುಣಗಳು (ದುರ್ಗುಣಗಳು) ಇರುವವನು ಅಂದರೆ ಸ್ವತಃ ಹೊಗಳಿಕೊಂಡು, ಎರಡನೆಯವರನ್ನು ಹೊಗಳಿ, ಎರಡನೆಯವರು ತನ್ನನ್ನು ಹೊಗಳಬೇಕೆಂದು ಬಯಸುವವನು ತೀರ ಕನಿಷ್ಠ !!
****
ಇದ್ದದ್ದನ್ನು ಇಲ್ಲದಂತೆ ಮಾಡುವದಕ್ಕೆ ಜಾದು ಅನ್ನುತ್ತಾರೆ. ಇಲ್ಲದಲ್ಲಿ ಇರುವಂತೆ ಮಾಡುವದೂ ಜಾದು. ಆದರೆ ಒಂದೇ ವೇಳೆಯಲ್ಲಿ ಇದ್ದಲ್ಲಿ ಇಲ್ಲದಂತೆ ಮಾಡಿ, ಇಲ್ಲದಲ್ಲಿ ಇರುವಂತೆ ಮಾಡಿದರೆ ಅದು “ಡಬ್ಬಲ್ ಜಾದು ”.
  * * * *
ಒಮ್ಮೆ ಒಂದು ಮೇಜವಾನಿಯಲ್ಲಿ ಸುಗ್ರಾಸ ಭೋಜನವಾದ ನಂತರ ಎಲ್ಲರೂ ಹರಟೆ ಹೊಡೆಯುತ್ತ ಕುಳಿತಿದ್ದರು. ಊರಿದ್ದಲ್ಲಿ ಹೊರಗೇರಿ ಇರುವದೇ ! ಕುಳಿತ ಮಂಡಳಿಯಲ್ಲಿ ಒಬ್ಬಿಬ್ಬರು ತುಡುಗರಿದ್ದರು. ಎದುರಿಗೆ ಇದ್ದ ಬೆಳ್ಳಿಯ ತಬಕ, ಪಾತ್ರೆ, ವಾಟಿ, ಚಮಚೆಗಳಲ್ಲಿ ಏನಾದರೂ ಒಂದನ್ನು ನೆಗವಬೇಕೆಂದು ಅಪೇಕ್ಷಿಸುತ್ತಿದ್ದ ಒಬ್ಬ ತುಡುಗನು ಮೆಲ್ಲಗೆ ಒಂದು ಬೆಳ್ಳಿಯ ಚಮಚೆಯನ್ನು ಎತ್ತಿ ತನ್ನ ಬೂಟಿನಲ್ಲಿ ಸೇರಿಸಿದನು. ಸಮಯ ಸಾಧಿಸುತ್ತಿದ್ದ ಮತ್ತೊಬ್ಬ ತುಡುಗನು ಇದನ್ನು ನೋಡಿದನು. ಮತ್ತೊಂದು ಚಮಚೆಯನ್ನು ತಾನು ಕದಿಯುವದು ಅವನಿಗೆ ಕಠಿಣವಾಯಿತು. ತಟ್ಟನೆ ಖುರ್ಚಿಯ ಮೇಲೆ ಎದ್ದು ನಿಂತು ಆತ ಸಾರಿದ : “ಸಭ್ಯಗೃಹಸ್ತರೆ, ನಾನು ಸ್ವಲ್ಪು ಜಾದುವಿನ ಕೆಲಸ ಮಾಡಿ ತೋರಿಸುತ್ತೇನೆ. ನಿಮ್ಮೆದುರಿಗೆ ನಾನು ಒಂದು ಬೆಳ್ಳಿಯ ಚಮಚೆಯನ್ನು ನನ್ನ ಕಿಸೆಯಲ್ಲಿ ಇಡುವೆ. ಅದನ್ನು ನಿಮ್ಮಲ್ಲಿ ಒಬ್ಬರ ಬೂಟಿನೊಳಗಿನಿಂದ ತೆಗೆಯುವೆ” ಹೀಗೆ ಅಂದು ಒಂದು ಬೆಳ್ಳಿಯ ಚಮಚೆ ಯನ್ನು ಕಿಸೆಯಲ್ಲಿ ಹಾಕಿದನು. ಆ ಮೇಲೆ ಅತ್ತಿತ್ತ ಸುಳಿದಾಡಿದಂತೆ ಮಾಡಿ, ಮೊದಲನೆಯ ಕಳ್ಳನ ಹತ್ತಿರ ಬಂದು, ಅವನ ಬೂಟಿನಿಂದ ಚಮಚೆಯನ್ನು ತೆಗೆದನು. ಎಲ್ಲರೂ ಬಿದ್ದು ಬಿದ್ದು ನಕ್ಕರು. ಮೊದಲನೆಯ ಕಳ್ಳನೂ ನಕ್ಕನು!! ಎರಡನೆಯ ಕಳ್ಳನು ಮೀಸೆ ಹುರಿ ಹಾಕುತ್ತ ಕಿಸೆಯಲ್ಲಿಯ ಚಮಚೆಯೊಡನೆ ಹೊರಟು ಹೋದನು!
*****
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...