Home / ಕವನ / ಕವಿತೆ / ಚೆಂದನೆಯ ಚಂದಿರನ ಚಲನದಾ ಮಾತು

ಚೆಂದನೆಯ ಚಂದಿರನ ಚಲನದಾ ಮಾತು

ಈಗೀಗ ನನ್ನ ಡೈರಿಪುಟಗಳು
ಅಲ್ಲಲ್ಲಿ ಮಸಿ ಉರುಳಿ
ಹಿರಿಕಿರಿದು ಕಲೆಗಳಾಗುತಲೇ ಹೋಗುತಿವೆ
ಆದರೂ ಹೊರಡಲೇಬೇಕು
ಸರಿಯಾದ ಸಮಯಕೆ
ಬಿಳಿಯಂಗಿ ತೊಟ್ಟು ಇಂಚಿಂಚೇ ನಗುತ


ಇಡೀ ರಾತ್ರಿಗಳೆಲ್ಲ ನನ್ನವೇ
ಬಾಚಿಕೊಳ್ಳುವ ನಶೆಗಳಲಿ ತೇಲಿ
ಪ್ರೇಮಿಗಳ ಸ್ವರ್ಗ ಸುಖದ ಕನಸುಗಳಿಗೆ
ಕಚಗುಳಿಯ ನೋವು ಕೊಟ್ಟು
ಮಕ್ಕಳಿಗೆ ದಂತಕಥೆಯಾಗಿ ಉಬ್ಬುಬ್ಬುತ
ಕತ್ತಲೆಯೊಳಗೆ ಕಟ್ಟುಮಸ್ತಾಗಿ
ಅಡ್ಡಾಡುವವ ನಾನು ಆಹಾ !


ಅದೇಕೋ ಈಗ ರಾತ್ರಿಯಾದರೆ ಹೆದರಿಕೆ ಹೊರಬೀಳಲು
ಹಾದಿ ಬೀದಿಯಲಿ ಏನೇನನು ನೋಡುವೆನೋ ನಡುಕ ಭಯ
ನಾನೆಂದೋ ಬಂದಿದ್ದರಿಲ್ಲಿ
ಭರತವರ್ಷಕಾಲದಿಂದಲೂ
ಬರೆಯುತಿದ್ದುದು ನಿಜ,
ಮಹಾಭಾರತ ಯುದ್ಧ, ರಾಜಪಟ್ಟಕ್ಕೆ ಹಣಾಹಣಿ
ಭ್ರಾತೃಪ್ರೇಮದ ಕರಳುಬಳ್ಳಿಗಳೆಲ್ಲ
ಚಿಲ್ಲಾಪಿಲ್ಲಿ ನರಳಾಟ ಚೀತ್ಕಾರ
ನೋಡಿದ್ದಕ್ಕೊ, ಗೀತೋಪದೇಶಕ್ಕೊ ಇರಲೆಂದು
ನಾಲ್ಕಕ್ಷರ ಧಾಖಲಿಸಿಕೊಂಡು
ಬಿಳಿಪುಟಕೆ ಚುಕ್ಕೆ ಅಕ್ಷರಗಳಿಟ್ಟು ಹೊರಟಿದ್ದೆ


ಬೆಟ್ಟಗುಡ್ಡ ದೇಶಗಳ ಗಡಿದಾಟುತ
ಸಮುದ್ರ ಏರುಬ್ಬರಿಸಿ ತಾರೆಗಳ ಗುಂಪಿನಲಿ
ಚಕ್ಕಂದವಾಡುತ ತಂಪುಗಾಳಿಗೆ
ಎದೆಯೊಡ್ಡಿ ನಡದದ್ದೇನು ಸಂಭ್ರಮ
ಏನೂ ನೆನಪಿಸಿಕೊಳ್ಳಬಾರದೆನುತ
ಯಾತಕ್ಕೂ ದುಃಖಿಸಬಾರದೆನ್ನುವ
ಛಲ ತೊಟ್ಟಿದ್ದೆ.
ನನ್ನ ಡೈರಿ ಪುಟಗಳು ಖಾಲಿ ಉಳಿದಿದ್ದಕ್ಕೆ
ಅಣಿಕಿಸುತಿವೆ ಬೇಸರ ಬಗೆಹರಿಸಲು ಕರೆದವೊ !
ನೋವುಗಳು ಚುಚ್ಚುವಾಗ
ತಾರಾ ಸಖಿಯರು ಇರುವುದೇ ಇಲ್ಲ
ಗೆಳೆತನಕೆ ಬಯಸಿದ ಮನ
ಪುಟಗಳನು ಅಪ್ಪಿಬಿಡುವವು


ಕಂಡದ್ದು ಕಂಡಂತೆ ಹೇಳಲೇ ಬೇಕಾದರೆ-
ಎಂಥ ಸುಂದರ ಬ್ರಹ್ಮಾಂಡ
ಆಹಾ ನಯನ ಮನೋಹರ ಸೆಳೆತ
ಹಿಮಾಚ್ಛಾದಿತ ಪರ್ವತಗಳ ಬಿಗಿದಪ್ಪುಗೆ
ಜೀವಸಂಕುಲದಾಧಾರ ಸರೋವರ ಮದವೇರಿದ
ಸಮುದ್ರ ತರುಲತೆ ಬೃಂಗಗಳ
ಬೆನ್ನೇರಿದ ಮನಕಿನ್ನೇನು –
ಕಪ್ಪು ನೀಲಿ ಕಣ್ಣುಗಳೊಳಗಿನ ಚಿತ್ರಗಳಿಗೆಲ್ಲ
ಬಂಗಾರ ಚೌಕಟ್ಟು ನನ್ನ ಪುಟಗಳಿಗೆಲ್ಲ
ಪ್ರೀತಿಯ ಚೌಕಟ್ಟು
ಜೇನು ಹರಿಯುವ ಸಂಭ್ರಮ
ಕ್ಷಣ ಕ್ಷಣಗಳಿಗೆಲ್ಲ ಹೊಳಪು ಸ್ಪಟಿಕ


ಯಾಕೋ ಎದೆಭಾರ
ಭೂಮಿಗೆ ಯಾಕಿಷ್ಟೊಂದು ನೋವು ವೇದನೆ
ಎಂತಹ ಮಕ್ಕಳಿವರೆಲ್ಲ
ಎಷ್ಟೊಂದು ದುರಹಂಕಾರ
ಮಾಡಬೇಕಾದುದು ಮಾಡಿಯೇ ತೀರುವ
ಮಾತು ಕೇಳದವರ ಶಿಕ್ಷಿಸುವ ಹಿಂಸಿಸುವ
ಸಂತೋಷಿ ಚಕ್ರವರ್ತಿಗಳ ಪಟ್ಟಿ….
ಅಬ್ಬಾ ! ಸಾಕಾಗಿತ್ತು ತೆಪ್ಪಗೆ ಬೀಳಬೇಕಾಗಿತ್ತು
ಆದರೂ ಮತ್ತೆ ಎದ್ದೆ ಯಾಕೋ !
ಸುಸಂಸ್ಕೃತರ ಕುಸಂಸ್ಕೃತಿ
ಚುಚ್ಚಿ ಚುಚ್ಚಿ ಬಡಿದೆಬ್ಬಿಸಿತೆ?


ಯಜಮಾನ ದರ್ಪದ ತಪ್ಪು ಹೆಜ್ಜೆಗಳ
ದುರಂತನಾಯಕರ ಪ್ರೀತಿಯ
ಅಣುಬಾಂಬ್ ಶಸ್ತ್ರಾಸ್ತ್ರಗಳ ಪೈಪೋಟಿ
ಅಮೆರಿಕದ ದಬ್ಬಾಳಿಕೆ
ಭಯೋತ್ಪಾದಕರ ದಾಳಿ, ಬಾಣಕ್ಕೆ ಬಾಣ
ತಿರುಗುಬಾಣ
ಮಾನವ ಹಕ್ಕುಗಳ ದಮನ
ಪ್ರೀತಿ ಬೆಳೆಸುವುದೇ?
ಹಸಿವು ಹಿಂಗಿಸುವುದೆ?


ಕೈಗಾರಿಕಾ ಕ್ರಾಂತಿ
ಜಾಗತೀಕರಣದ ನೋಟ್ಸಿಗೆ
ಸಾಕಷ್ಟು ಪುಟಗಳು
ಕಂಪ್ಯೂಟರ್, ಟಿ.ವಿ. ಮೊಬೈಲ್‌ಗಳ

ಸಂಶೋಧನಾ ಮುಖಾಮುಖಿ ಪ್ರಜ್ಞೆ
ಈ ಪಯಣಿಗೆ ಸುಸ್ತಾಗಿಲ್ಲ ವಯಸ್ಸಾಗಿಲ್ಲ
ದೇವನಾಜ್ಞೆ, ಜಗತ್ತನು ಸುತ್ತು ಹೊಡೆಯಲೇಬೇಕು
ರಿಪೋರ್ಟ್ ಕೊಡಲೇಬೇಕು.


ಆದರೂ ಈಗೀಗ ಅದಾವುದರಲಿ
ಕರಗುತಿರುವೆನೊ, ಬೆರಗುಗೊಳುತಿಹೆನೊ
ಅಳುತಿಹೆನೊ ಹಿಂಸೆ ಪಡುತಿಹೆನೊ
ಉತ್ತರಗಳಿಲ್ಲದೆ ಒಳಗೊಳಗಿನ
ಚಡಪಡಿಕೆಗಳಿಗೆ ಮೋಡಿನ ಚದ್ದಾರ
ಒಮ್ಮೊಮ್ಮೆ ಎಳೆದು ತೆಪ್ಪಗೆ ಬಿದ್ದರೆ
ನಿಸರ್ಗದ ತಂತಿಮೀಟಿನ ಸೆಳೆತ ಮತ್ತೆ
ಹೊಸ ಪಯಣದ ಪುಟಕೆ ಕರೆಯುವುದು
ಕೆಂಪು ಹಳದಿ ನೀಲಿ ಗುಲಾಬಿ
ಬಣ್ಣಗಳಲಿ ಮಸಿಕಲೆಗಳ ನೊರಸುತ
ಮಂದಹಾಸವ ಬೆರೆಸಿ ಮತ್ತೆ ಹೊರಡುವೆ
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...